ಅನರ್ಹರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಂ ರೆಡಿ: ಏನಿದು ಶಾಕಿಂಗ್ ಹೇಳಿಕೆ?
Recommended Video
ಚಿಕ್ಕಬಳ್ಳಾಪುರ, ನ 21: ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು, ಬಿಜೆಪಿಯಲ್ಲೇ ಭಾರೀ ವಿರೋಧವಿತ್ತು. ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಬಹಿರಂಗವಾಗಿಯೇ, ಬಿಜೆಪಿಯ ರಾಜ್ಯ ಮುಖಂಡರು, ಮುಖ್ಯಮಂತ್ರಿಗಳ ಮುಂದೆ ಸಿಟ್ಟು ಪ್ರದರ್ಶಿಸಿದ್ದರು.
ಅಥಣಿ, ಯಲ್ಲಾಪುರ, ಹೊಸಕೋಟೆ, ವಿಜಯನಗರ ಕ್ಷೇತ್ರಗಳಲ್ಲಿ, ಪಕ್ಷದ ಮುಖಂಡರ ಭಿನ್ನಮತವನ್ನು ಬಿಜೆಪಿಗೆ ಸರಿದಾರಿಗೆ ತರಲೂ ಆಗಲೇ ಇಲ್ಲ. ಬಂಡಾಯ ಅಭ್ಯರ್ಥಿಗಳು ಇನ್ನೂ ಕಣದಲ್ಲಿದ್ದಾರೆ.
ನಾನೇ ಬೇರೆ ನನ್ನ ಪ್ರಚಾರದ ಸ್ಟೈಲೇ ಬೇರೆ ಎಂದ ಬಿಜೆಪಿ ಅಭ್ಯರ್ಥಿ
ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ, ಕೆಲವೊಂದು ಕಡೆ, ಸ್ಥಳೀಯ ಮುಖಂಡರನ್ನು ಹಾಗೂಹೀಗೂ ಸಮಾಧಾನ ಪಡಿಸಿದರೂ, ಕಾರ್ಯಕರ್ತರು ಪ್ರಚಾರಕ್ಕೆ ಕೈಜೋಡಿಸುತ್ತಿಲ್ಲ.
ಸಿಎಂ ಯಡಿಯೂರಪ್ಪ ತುರ್ತಾಗಿ ಹೊರಡಿಸಿದ ಪತ್ರಿಕಾ ಪ್ರಕಟಣೆ
ಹೀಗಿರುವಾಗ, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕೃಷ್ಣ ಭೈರೇಗೌಡ ನೀಡಿದ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. "ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲಿ ಟೀಂ ಈಗಾಗಲೇ ರೆಡಿಯಾಗಿದೆ" ಎನ್ನುವ ಹೇಳಿಕೆಯನ್ನು ಇವರು ನೀಡಿದ್ದಾರೆ.
ಚಿಕ್ಕಬಳ್ಳಾಪುರ ಉಪಚುನಾವಣೆ
ನಗರದ ಹೊರ ವಲಯದಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ಕೃಷ್ಣ ಭೈರೇಗೌಡ, "ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರು ಕಾಂಗ್ರೆಸ್ಸಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಅನುಭವಿಸಿ, ಈಗ ನಮ್ಮ ಪಕ್ಷದ ವಿರುದ್ದ ಮಾತನಾಡುತ್ತಿದ್ದಾರೆ. ಇವರಿಗೆ ಕ್ಷೇತ್ರದ ಮತದಾರ ಸೂಕ್ತ ಪಾಠವನ್ನು ಕಲಿಸಲಿದ್ದಾರೆ: ಎಂದು ಹೇಳಿದ್ದಾರೆ.
ಆಪರೇಷನ್ ಕಮಲದ ವಿಚಾರದಲ್ಲಿ ಬಿಎಸ್ವೈ ಪಿಎಚ್ಡಿ
"ಆಪರೇಷನ್ ಕಮಲ ಮಾಡಿ, ಈಗ ಸರಕಾರವನ್ನು ಸಂಭಾಳಿಸಿಕೊಂಡು ಹೋಗಲು ಯಡಿಯೂರಪ್ಪನವರಿಗೆ ಸಾಕುಸಾಕಾಗಿ ಹೋಗಿದೆ. ಆದರೂ, ಆಪರೇಷನ್ ಕಮಲದ ವಿಚಾರದಲ್ಲಿ ಅವರು ಯಶಸ್ವಿಯಾಗಿ ಪಿಎಚ್ಡಿ ಮಾಡಿ ಮುಗಿಸಿದ್ದಾರೆ. ಸರಕಾರ, ಬರೀ ಉಪಚುನಾವಣೆಯಲ್ಲಿಯೇ ಮುಳುಗಿಹೋಗಿದೆ" - ಕೃಷ್ಣ ಭೈರೇಗೌಡ.
ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲಿ ಈಗಾಗಲೇ ಟೀಂ ರೆಡಿ
"ಈ ಉಪಚುನಾವಣೆಯಲ್ಲಿ ಗೆಲ್ಲಲು ನಾವೇನೂ ಸಿಕ್ಕಾಪಟ್ಟೆ ಪರಿಶ್ರಮ ಪಡಬೇಕಾಗಿಲ್ಲ. ಯಾಕೆಂದರೆ, ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲಿ ಈಗಾಗಲೇ ಟೀಂ ರೆಡಿಯಾಗಿದೆ. ಅವರೇ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಕೆಲಸವನ್ನು ಮಾಡಲಿದ್ದಾರೆ" ಎನ್ನುವ ಶಾಕಿಂಗ್ ಹೇಳಿಕೆಯನ್ನು ಕೃಷ್ಣ ಭೈರೇಗೌಡ ನೀಡಿದ್ದಾರೆ.
ಕೃಷ್ಣ ಭೈರೇಗೌಡ ಗಂಭೀರ ಆರೋಪ
"ಅನರ್ಹ ಶಾಸಕರು ಬಿಜೆಪಿಯ ಮೇಲಿನ ಅಥವಾ ಯಡಿಯೂರಪ್ಪನವರ ಮೇಲಿನ ಮಮಕಾರದಿಂದ ಆ ಪಕ್ಷಕ್ಕೆ ಸೇರಿದಲ್ಲ. ಇಡಿ, ಸಿಬಿಐ ಮುಂತಾದ ವಿಚಾರಣೆ, ದಾಳಿಗೆ ಹೆದರಿ ಬಿಜೆಪಿಗೆ ಸೇರಿದ್ದಾರೆ. ಇವರನ್ನು ಸೋಲಿಸಲು, ಬಿಜೆಪಿಯಲ್ಲಿ ಕೆಲವರು ಈಗಾಗಲೇ ಯೋಜನೆ ರೂಪಿಸಿದ್ದಾರೆ" - ಕೃಷ್ಣ ಭೈರೇಗೌಡ
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ವಿಭಿನ್ನ ರೀತಿಯ ಪ್ರಚಾರದ ಮೊರೆಹೋಗಿದ್ದರು. ತಾಲೂಕಿನ ಚೀಮನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ, ಬಿಜೆಪಿ ಶಾಲು ಹಾಕಿಕೊಂಡು, ಕಾರ್ಯಕರ್ತರ ಜೊತೆಗೆ, ರಾಗಿ ಕಟಾವ್ ಮಾಡುವ ಮೂಲಕ, ಪ್ರಚಾರ ಮಾಡಿದ್ದರು. ತೆನೆ ಕಟಾವ್ ಮಾಡುತ್ತಲೇ ರೈತರ ಸಮಸ್ಯೆಯನ್ನು ಆಲಿಸಿದ ಸುಧಾಕರ್, ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.