ಬೇಳೂರು ಗೋಪಾಲಕೃಷ್ಣ ಉದ್ಧಟತನ ಹೇಳಿಕೆ: ಬಿಜೆಪಿಗರ ಉಗ್ರ ಪ್ರತ್ಯುತ್ತರ
Recommended Video
ಬೆಂಗಳೂರು, ಮಾರ್ಚ್ 05: ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲ್ ಕೃಷ್ಣ ಅವರು ಮೋದಿಗೆ ಗುಂಡಿಕ್ಕಿ ಎಂದು ಉದ್ಧಟತನದ ಹೇಳಿಕೆ ನೀಡಿರುವುದು ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಮುಖಂಡರಲ್ಲಿ ಆಕ್ರೋಶ ಕೆರಳಿಸಿದೆ.
ಬಿಜೆಪಿಯಲ್ಲಿದ್ದು ಕಾಂಗ್ರೆಸ್ಗೆ ಪಕ್ಷಾಂತರ ಮಾಡಿರುವ ಬೇಳೂರು ಗೋಪಾಲಕೃಷ್ಣ ಅವರು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿಗೆ ಗುಂಡು ಹೊಡೆಯಿರಿ ಎಂದು ಹೇಳಿದ್ದರು. ಈ ವಿಡಿಯೋವನ್ನು ಕರ್ನಾಟಕ ಬಿಜೆಪಿ ಟ್ವಿಟ್ಟರ್ನಲ್ಲಿ ಇಂದು ಹಾಕಿದೆ.
ಬೇಕಾದರೆ ಪ್ರಧಾನಿ ಮೋದಿಯನ್ನು ಗುಂಡಿಕ್ಕಿ ಸಾಯಿಸಿ: ಬೇಳೂರು ಗೋಪಾಲಕೃಷ್ಣ ಉದ್ದಟತನ
ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿಯ ಮುಖ್ಯ ಟ್ವಿಟ್ಟರ್ ಖಾತೆಯಲ್ಲಿ ಸಹ ವಿಡಿಯೋವನ್ನು ಹಾಕಲಾಗಿದ್ದು, ಬೇಳೂರ ಗೋಪಾಲಕೃಷ್ಣ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ರಾಜ್ಯ ಬಿಜೆಪಿ ಮುಖಂಡರು ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲವರು ಈ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ.
ಆಘಾತಕಾರಿ ಹೇಳಿಕೆ: ಶೋಭಾ
ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಅವರು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಸಮಾಜದ ಒಂದು ವಿಭಾಗವನ್ನು ಸಂತುಷ್ಟಿಗೊಳಿಸಲೆಂದು ಮೋದಿಯನ್ನು ಕೊಲ್ಲಿ ಎಂದು ಅವರು ಹೇಳಿದ್ದಾರೆ. ಈ ಕೂಡಲೇ ಪರಮೇಶ್ವರ್ ಹಾಗೂ ಕುಮಾರಸ್ವಾಮಿ ಅವರು ಬೇಳೂರು ಗೋಪಾಲಕೃಷ್ಣ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ.
'ಪಾಕಿಸ್ತಾನದ ಭಾಷೆ ಮಾತನಾಡುತ್ತಿದ್ದಾರೆ'
ಬಿಜೆಪಿ ಮುಖಂಡ ಸಿಟಿ ರವಿ ಅವರು ಟ್ವೀಟ್ ಮಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಪಾಕಿಸ್ತಾನದ ಭಾಷೆ ಮಾತನಾಡುತ್ತಿದ್ದಾರೆ. ಪ್ರಜೆಗಳಿಂದ ಆಯ್ಕೆಯಾದ ಮೋದಿ ಅವರನ್ನು ಕೊಲ್ಲುವಂತೆ ಹೇಳುತ್ತಿದ್ದಾರೆ. ಇದೇನು ಪ್ರಜಾಪ್ರಭುತ್ವವೇ ಎಂದು ಸಿಟಿ.ರವಿ, ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಕೂಡಲೇ ಬೇಳೂರು ಅವರನ್ನು ಬಂಧಿಸಬೇಕೆಂದು ರವಿ ಒತ್ತಾಯಿಸಿದ್ದಾರೆ.
'ಕಾಂಗ್ರೆಸ್ ಮನಸ್ಥಿತಿಯನ್ನು ತೋರುತ್ತದೆ'
ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ಹೇಳಿಕೆ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ತೋರುತ್ತದೆ. ಕಾಂಗ್ರೆಸ್ ಪಕ್ಷ ಅತ್ಯಂತ ಕೀಳುಮಟ್ಟಕ್ಕೆ ಇಳಿಯುತ್ತಿದೆ ಎಂದು ಹೇಳಿದ್ದಾರೆ.
ಕೂಡಲೇ ಬಂಧಿಸಿ
ಕರ್ನಾಟಕ ಬಿಜೆಪಿ ಸಹ ಇದನ್ನು ಟ್ವೀಟ್ ಮಾಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಆಯ್ಕೆ ಆಗಿರುವ ಪ್ರಧಾನಿ ಅವರನ್ನು ಹತ್ಯೆ ಮಾಡಿ ಎಂದು ಕಾಂಗ್ರೆಸ್ನ ಮುಖಂಡ ಹೇಳಿದ್ದಾರೆ. ಇದು ರಾಷ್ಟ್ರೀಯ ಭದ್ರತೆಯ ವಿಷಯವೆಂದು ಪರಿಗಣಿಸಬೇಕು. ಕೂಡಲೇ ಬೇಳೂರು ಗೋಪಾಲಕೃಷ್ಣ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ.