ಸೋದರರಂತೆ ಇದ್ದವರ ನಡುವೆ ಹುಳಿ ಹಿಂಡಿದ ಲಕ್ಷ್ಮಿ ಹೆಬ್ಬಾಳ್ಕರ್ 'ವಿಷಕನ್ಯೆ': ಮಹಾಸಂಘರ್ಷಕ್ಕೆ ಮುನ್ನುಡಿ ಬರೆದ ರಮೇಶ ಜಾರಕಿಹೊಳಿ
ನಾನು ಹಾಗೂ ಡಿಕೆ ಶಿವಕುಮಾರ್ ಸಹೋದರರಂತೆ ಇದ್ದೆವು. ನಮ್ಮ ನಡುವೆ ಲಕ್ಷ್ಮಿ ಹೆಬ್ಬಾಳ್ಕರ್ ಹುಳಿ ಹಿಂಡಿದರು. ಆಕೆ ವಿಷಕನ್ಯೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಇಬ್ಬರು ಪ್ರಬಲ ನಾಯಕರ ನಡುವಿನ ವೈಯುಕ್ತಿಕ ಕದನವಾಗಿ ಮಾರ್ಪಟ್ಟಿದೆ. ಮುಂದೇನಾಗಲಿದೆ? ವರದಿ ಓದಿ
ಬೆಂಗಳೂರು, ಜನವರಿ 31: ಕರ್ನಾಟಕದ ಚುನಾವಣೆ ಹತ್ತಿರ ಇರುವಾಗಲೇ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಸಂಘರ್ಷ ತಾರಕಕ್ಕೆ ಏರುವ ಹಂತ ತಲುಪಿದೆ. ಸೋಮವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಮೇಶ ಜಾರಕಿಹೊಳಿ, 'ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಆರು ಜನರನ್ನು ಬಂಧಿಸಬೇಕು' ಎಂದು ಒತ್ತಾಯಿಸಿದ್ದಾರೆ. ಯುವತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ಸಿಡಿಯೊಂದು ಟಿವಿ ಚಾನೆಲ್ಗಳಲ್ಲಿ ಪ್ರಸಾರವಾದ ನಂತರ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರು ತಮ್ಮ ಸ್ಥಾನವನ್ನು ತ್ಯಜಿಸಬೇಕಾಯಿತು. ಸಿಡಿ ಪ್ರಸಾರವಾದ ನಂತರ ಯುವತಿಯಿಂದ ಅತ್ಯಾಚಾರದ ಆರೋಪಗಳು ಕೇಳಿಬಂದಿದ್ದವು. ನಂತರ ಜಾರಕಿಹೊಳಿ ಪೊಲೀಸರಿಗೆ ಪ್ರತಿದೂರು ದಾಖಲಿಸಿದ್ದರು. ಲೈಂಗಿಕ ವಿಡಿಯೋ ರೆಕಾರ್ಡ್ ಮಾಡಿದ ಅಪರಿಚಿತರ ಗುಂಪು ತಮ್ಮನ್ನು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದರು.
ರಮೇಶ ಜಾರಕಿಹೊಳಿ ಹೇಳಿದ್ದೇನು?
ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ಸಹಚರರನ್ನು ಬಂಧಿಸಬೇಕು. ಸಿಡಿ ತಯಾರಿಸಿದ ಯುವತಿ ಹಾಗೂ ಅದಕ್ಕೆ ಸಹಕರಿಸಿದ ಇಬ್ಬರು ಯುವಕರಾದ ಶ್ರವಣ್ ಮತ್ತು ನರೇಶ್ ಅವರನ್ನು ಪೋಲಿಸರು ವಶಕ್ಕೆ ಪಡೆಯಬೇಕು. ಅಲ್ಲದೆ, ಕನಕಪುರದ ಗ್ರಾನೈಟ್ ಉದ್ಯಮಿ ಶಿವಕುಮಾರ್, ಅವರ ಚಾಲಕ ಪರಶಿವಮೂರ್ತಿ ಮತ್ತು ಮಂಡ್ಯದ ಇಬ್ಬರು ಮುಖಂಡರು ಸೇರಿ ನನ್ನ ಮಾನಹಾನಿ ಮಾಡಲು ಸಿಡಿ ಸೃಷ್ಟಿಸುವ ಸಂಚು ರೂಪಿಸಿದ್ದರು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ
ಸೆಕ್ಸ್ ಸಿಡಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಂಪರ್ಕಿಸಿದ್ದೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು. ಕಳೆದ ವಾರ ಜಾರಕಿಹೊಳಿ ಅವರು ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕೋರುವುದಾಗಿ ತಿಳಿಸಿದ್ದರು. ಶಿವಕುಮಾರ್ ಅವರು ಸೆಕ್ಸ್ ಸಿಡಿ ಸೃಷ್ಟಿಗೆ ಸಂಬಂಧಿಸಿ ಆಡಿಯೋ ಸಂಭಾಷಣೆಗಳನ್ನು ಹೊಂದಿದ್ದಾರೆ ಎಂದು ಜಾರಕಿಹೊಳಿ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ಲಂಡನ್, ದುಬೈ, ದೆಹಲಿ ಮತ್ತು ಮುಂಬೈನಲ್ಲಿನ ಆಸ್ತಿ ಸೇರಿದಂತೆ ಅವರ ಸಂಪತ್ತಿನ ಬಗ್ಗೆ ಮಾತನಾಡಿರುವ ಆಡಿಯೊ ಕ್ಲಿಪ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.
ಇದು ವೈಯಕ್ತಿಕ ಹೋರಾಟ
ಇದು ರಮೇಶ್ ಜಾರಕಿಹೊಳಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ವೈಯಕ್ತಿಕ ಹೋರಾಟ. ಇದು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ನಾನು ಸ್ವಲ್ಪ ಸಮಯ ಸುಮ್ಮನಿದ್ದು ನನ್ನ ವಿರುದ್ಧದ ಷಡ್ಯಂತ್ರದ ಬಗ್ಗೆ ಕ್ರಮ ಕೈಗೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ಈ ವಿಷಯವನ್ನು ಪ್ರಸ್ತಾಪಿಸಲು ನಾನು ಚುನಾವಣೆ ಸಮಯಕ್ಕಾಗಿ ಕಾಯುತ್ತಿದ್ದೆ, ಎಂದೂ ಅವರು ಹೇಳಿದರು. 'ಡಿಕೆ ಶಿವಕುಮಾರ್ ಅವರು ರಾಜ್ಯದ ವಿವಿಧ ಭಾಗಗಳಿಂದ ನೂರಾರು ಜನರ ಇದೇ ರೀತಿಯ ಸಿಡಿಗಳನ್ನು ತಯಾರಿಸಿದ್ದಾರೆ. ಎಲ್ಲಾ ಪಕ್ಷಗಳ ಅನೇಕ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿದ್ದಾರೆ. ಈ ಪ್ರಕರಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಬೇಕು' ಎಂದು ಅವರು ಒತ್ತಾಯಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ಗೆ ವಿಷಕನ್ನೆ ಎಂದ ಜಾರಕಿಹೊಳಿ
ಇದೇ ವೇಳೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ ಜಾರಕಿಹೊಳಿ ಹರಿಹಾಯ್ದಿದ್ದಾರೆ. 'ನಾನು ಡಿಕೆ ಶಿವಕುಮಾರ್ ಸಹೋದರರಂತೆ ಇದ್ದೆವು. ಅವರು ನನಗೆ ಉತ್ತಮ ಸ್ನೇಹಿತರಾಗಿದ್ದರು. ನಮ್ಮಿಬ್ಬರ ಗೆಳೆತನದ ನಡುವೆ ಲಕ್ಷ್ಮಿ ಹೆಬ್ಬಾಳ್ಕರ್ ಹುಳಿ ಹಿಂಡಿದ್ದಾರೆ. ಆಕೆ ಒಬ್ಬ ವಿಷಕನ್ನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಜಾರಕಿಹೊಳಿ ಅವರ ಈ ಮಾತು ಕೇವಲ ಬೆಳಗಾವಿ ಜಿಲ್ಲೆಯಲ್ಲದೇ ರಾಜ್ಯದಾದ್ಯಂತ ವಿವಾದವೊಂದನ್ನು ಹುಟ್ಟುಹಾಕಿದೆ. ಜಾರಕಿಹೊಳಿ ಅವರ ಮಾತಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಹಾಗೂ ಎಂಎಲ್ಸಿ ಚನ್ನರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಇಬ್ಬರು ಪ್ರಬಲ ನಾಯಕರ ನಡುವಿನ ವೈಯುಕ್ತಿಕ ಕದನವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ 'ಮಹಾಸಂಘರ್ಷ' ವಾಗಿ ರೂಪಗೊಳ್ಳುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.