ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕೆ.ಎಸ್.ಈಶ್ವರಪ್ಪ
ಬೆಂಗಳೂರು, ಆಗಸ್ಟ್ 08 : ಕರ್ನಾಟಕ ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರು ಭಿನ್ನಮತೀಯ ಚಟುವಟಿಕೆಯನ್ನು ಪುನಃ ಆರಂಭಿಸಿದ್ದಾರೆ. ಅಹಿಂದ ಮತ್ತು ಕುರುಬ ಸಮುದಾಯದ ಮುಖಂಡರನ್ನು ಸೇರಿಸಿಕೊಂಡು ತಮ್ಮ ಶಕ್ತಿ ಪ್ರದರ್ಶನ ನಡೆಸಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಸೋಮವಾರ ಬೆಂಗಳೂರಿನ ಕಬ್ಬನ್ ಪಾರ್ಕ್ನ ಸೆಕ್ರೆಟರಿಯೇಟ್ ಕ್ಲಬ್ನಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಕುರುಬ ಸಮುದಾಯದ ನಾಯಕರ ಸಭೆ ನಡೆಯಿತು. ಕುರುಬ ಸಮುದಾಯದ ನಾಯಕರನ್ನು ಒಟ್ಟಾಗಿ ಸೇರಿಸಲು ಈಶ್ವರಪ್ಪ ಅವರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ಮಾಡಲು ಮುಂದಾಗಿದ್ದಾರೆ. ಇದರ ಪೂರ್ವಭಾವಿ ಸಭೆಯನ್ನು ಇಂದು ಆಯೋಜಿಸಲಾಗಿತ್ತು. [ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ]
ಅಹಿಂದ ನಾಯಕ ಮುಕುಡಪ್ಪ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕುರುಬ ಸಮುದಾಯದ ನಾಯಕರು ಈಶ್ವರಪ್ಪ ಅವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಸಭೆಯ ವಿವರಗಳನ್ನು ಈಶ್ವರಪ್ಪ ಅವರು ಮಾಧ್ಯಮಗಳಿಗೆ ನೀಡಿಲ್ಲ.[ಅಕ್ಕಪಕ್ಕದಲ್ಲೇ ಕಾಣಿಸಿಕೊಂಡ ಯಡಿಯೂರಪ್ಪ ಮತ್ತು ಈಶ್ವರಪ್ಪ]
'ಈಗ ತಾನೇ ಮಗು ಹುಟ್ಟಿದೆ....ಅದು ಅಂಬೆಗಾಲಿಡಲಿ. ನಾನು ಯಾವುದನ್ನೂ ಮುಚ್ಚುಮರೆ ಮಾಡುವುದಿಲ್ಲ. ಮಗು ಅಂಬೆಗಾಲಿಡಲು ಆರಂಭಿಸಿದ ಬಳಿಕ ಮಾಧ್ಯಮಗಳಿಗೆ ನಾನೇ ಎಲ್ಲವನ್ನೂ ಹೇಳುತ್ತೇನೆ' ಎಂದು ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದರು...
ಭಿನ್ನಮತೀಯ ಚಟುವಟಿಕೆ
ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಆರಂಭವಾಗಿದೆ. ಪದಾಧಿಕಾರಿಗಳ ನೇಮಕಾತಿಯಲ್ಲಿ ಎಲ್ಲಾ ಜಿಲ್ಲೆಗಳ ನಾಯಕರಿಗೂ ಆದ್ಯತೆ ನೀಡಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದರು. ಯಡಿಯೂರಪ್ಪ ಅವರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ಕೊಟ್ಟಿದ್ದರು.
'ಸಣ್ಣಪುಟ್ಟ ಅಸಮಾಧಾನ ಸಹಜ'
'ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಂಡಾಗ ಸಣ್ಣಪುಟ್ಟ ಅಸಮಾಧಾನಗಳು ಸಹಜ, ಕೆ.ಎಸ್.ಈಶ್ವರಪ್ಪ ಅವರು ದೊಡ್ಡ ನಾಯಕರು ಅವರ ಜೊತೆ ಮಾತುಕತೆ ನಡೆಸುತ್ತೇನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. 'ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವಾಗ 15 ರಿಂದ 20 ಮಂದಿ ಬರುತ್ತಾರೆ. ಯಾರಿಗೆ ಅವಕಾಶ ನೀಡಲು ಆಗುತ್ತದೆ?' ಎಂದು ಅವರು ಪ್ರಶ್ನಿಸಿದ್ದರು.
ಕೆ.ಎಸ್.ಈಶ್ವರಪ್ಪ ಹೊಸ ತಂತ್ರ
ಈಗ ತಮ್ಮ ಶಕ್ತಿ ಪ್ರದರ್ಶನಕ್ಕೆ ಕೆ.ಎಸ್.ಈಶ್ವರಪ್ಪ ಅವರು ಹೊಸ ತಂತ್ರ ಮಾಡಿದ್ದಾರೆ. ಅಹಿಂದ ನಾಯಕರನ್ನು ಒಟ್ಟಾಗಿ ಸೇರಿಸಿ ಇಂದು ಸಭೆ ನಡೆಸಿದರು. ಎಲ್ಲರನ್ನೂ ಒಟ್ಟಾಗಿ ಸೇರಿಸಿ ಕಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸುವ ಅಲೋಚನೆ ಈಶ್ವರಪ್ಪ ಅವರದ್ದು.
ಚುನಾವಣೆಗೆ ತಯಾರಿ ಅಂದ್ರು ಈಶ್ವರಪ್ಪ
'2018ರ ವಿಧಾನಸಭೆ ಚುನಾವಣೆಗಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲಾಗುತ್ತಿದೆ' ಎಂದು ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಹೇಳಿದ್ದಾರೆ. ಆದರೆ, ಬ್ರಿಗೇಡ್ ಸ್ಥಾಪನೆ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಅವರು ಸಿದ್ಧತೆ ನಡೆಸಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.