ಸಂಚಲನ ಮೂಡಿಸಿದ ದಿ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪುತ್ರಿಯ ಜೆಡಿಎಸ್ ಹೊಗಳಿಕೆ ಟ್ವೀಟ್!
ಬೆಂಗಳೂರು, ಜು. 29: ಕಳೆದೊಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬಿಜೆಪಿ ಹೈಕಮಾಂಡ್ ಕೆಳಗಿಳಿಸಿದೆ. ಇದೇ ಸಂದರ್ಭದಲ್ಲಿ ಅಚ್ಚರಿಯ ಆಯ್ಕೆ ಎಂಬಂತೆ ಬಸವರಾಜ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಗಳನ್ನಾಗಿ ಬಿಜೆಪಿ ಹೈಕಮಾಂಡ್ ನೇಮಿಸಿದೆ. ಈ ಎಲ್ಲದರ ಮಧ್ಯೆ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ದಿ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪುತ್ರಿ ವಿಜೇತಾ ಅನಂತ್ ಕುಮಾರ್ ಅವರು ಜೆಡಿಎಸ್ ಪಕ್ಷವನ್ನು ಹೊಗಳಿದ್ದಾರೆ. ಬಿಜೆಪಿ ಕಟ್ಟಿ ಬೆಳೆಸಿದ್ದ ದಿ. ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುತ್ರಿಯ ಈ ಹೊಗಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ ಬಿಜೆಪಿ ಹೈಕಮಾಂಡ್ ಕೂಡ ಒಂದು ಬಾರಿ ಯೋಚನೆ ಮಾಡುವಂತೆ ಆಗಿದೆ. ವಿಜೇತಾ ಅನಂತ ಕುಮಾರ್ ಅವರ ಹೊಗಳಿಕೆ ಟ್ವೀಟ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ವಿಜೇತಾ ಅನಂತ್ ಕುಮಾರ್ ಅವರ ಟ್ವೀಟ್ ಕುರಿತು ಭಾರಿ ಚರ್ಚೆ ಆಗುತ್ತಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಹಂತದ ಬೆಳವಣಿಗೆಗೆ ಇದು ಮುನ್ನುಡಿಯಾಲಿದೆಯಾ? ಅಷ್ಟಕ್ಕೂ ವಿಜೇತಾ ಟ್ವೀಟ್ನಲ್ಲಿ ಹೇಳಿದ್ದೇನು? ಅದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಏನು?
ಸಂಚಲನ ಮೂಡಿಸಿದ ಎರಡು ಸಾಲುಗಳ ಟ್ವೀಟ್!
"ಕರ್ನಾಟಕ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ? ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿದೆ" ಎಂದು ಎರಡು ಸಾಲುಗಳ ಟ್ವೀಟ್ನ್ನು ದಿ. ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ರಾಜ್ಯ ಮಾತ್ರವಲ್ಲ ಬಿಜೆಪಿ ಹೈಕಮಾಂಡ್ ಗಮನಕ್ಕೂ ಬಂದಿದೆ. ವಿಜೇತಾ ಅವರ ಟ್ವೀಟ್ನಿಂದ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ. ಒಂದೆಡೆ ಯಡಿಯೂರಪ್ಪ ಬದಲಾವಣೆ ಸಂದರ್ಭದಲ್ಲಿ ತೀವ್ರ ಹಿನ್ನೆಡೆ ಅನುಭವಿಸಿರುವ ಬಿಜೆಪಿ ಹೈಕಮಾಂಡ್ಗೆ ವಿಜೇತಾ ಅವರು ಮಾಡಿತುವ ಟ್ವೀಟ್ ಕೂಡ ಎಚ್ಚರಿಕೆಯ ಸಂದೇಶವಾಗಿದೆ. ಪಕ್ಷದಲ್ಲಿ ಆಗುತ್ತಿರುವ ಕಡೆಗಣನೆ ಈ ಟ್ವೀಟ್ಗೆ ಕಾರಣವಾಗಿರಬಹುದು ಎಂಬ ಚರ್ಚೆಗಳು ಇದೀಗ ಬಿಜೆಪಿ ವಲಯದಲ್ಲಿ ಶುರುವಾಗಿವೆ. ಜೊತೆಗೆ ವಿಜೇತಾ ಅನಂತ್ ಕುಮಾರ್ ಅವರ ಟ್ವೀಟ್ಗೆ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವಿಜೇತಾ ಟ್ವೀಟ್ಗೆ ಕುಮಾರಸ್ವಾಮಿ ಹೇಳಿದ್ದೇನು?
ವಿಜೇತಾ ಅನಂತ್ ಕುಮಾರ್ ಮಾಡಿದ್ದ ಟ್ವೀಟ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ರಾಜ್ಯದ ಪ್ರಮುಖ ನಾಯಕರಾಗಿದ್ದ ದಿ. ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ನನ್ನ ಸಹೋದರಿ ಸಮಾನರು. ಜೆಡಿಎಸ್ ಪಕ್ಷದ ಬಗ್ಗೆ ಅವರ ಅಭಿಪ್ರಾಯದ ಬಗ್ಗೆ ಧನ್ಯವಾದಗಳು. ವಿಜೇತಾ ಅವರ ಅಭಿಪ್ರಾಯ ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ಅವರ ತಾಯಿ ತೇಜಸ್ವೀನಿ ಅನಂತ್ ಕುಮಾರ್ ಅವರು ಬರುವುದಾದರೆ ನಮ್ಮ ಪಕ್ಷಕ್ಕೆ ಸಂತೋಷದಿಂದ ಆಹ್ವಾನ ಮಾಡುತ್ತೇನೆ. ವಿಜೇತಾ ಅನಂತ್ ಕುಮಾರ್ ಹಾಗೂ ಅವರ ತಾಯಿ ದಿ. ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಬಿಜೆಪಿಯಂತೂ ಅವರನ್ನು ಗುತುತಿಸಿಲ್ಲ. ನಮ್ಮ ಪಕ್ಷಕ್ಕೆ ಬರುವುದಾದರೆ ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ. ಮುಂದಿನ ರಾಜಕಾರಣದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗಲಿದೆ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯಬೇಕು" ಎಂದು ಮುಂದಿನ ರಾಜಕೀಯ ದ್ರುವೀಕರಣದ ಮಹತ್ವದ ಹೇಳಿಕೆಯನ್ನು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕೊಟ್ಟಿದ್ದಾರೆ.
ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಡಿಎಸ್ ಸೇರುವಂತೆ ಕೊಟ್ಟಿರುವ ಆಹ್ವಾನದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ. ಜೊತೆಗೆ ಟ್ವೀಟರ್ನಲ್ಲಿ ನಡೆದ ಚರ್ಚೆಯಲ್ಲಿ ವಿಜೇತಾ ಮತ್ತೊಂದು ಮಹತ್ವದ ಅಂಶ ಉಲ್ಲೇಖಿಸಿದ್ದಾರೆ.
ಅಚ್ಚರಿ ಮೂಡಿಸಿದ ವಿಜೇತಾ ಟ್ವೀಟ್ ಉತ್ತರ!
ಜೊತೆಗೆ ವಿಜೇತಾ ಅನಂತ್ ಕುಮಾರ್ ಅವರ ಟ್ವೀಟ್ಗೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜಕೀಯದಲ್ಲಿ ಜನಪ್ರೀಯತೆ ಲೆಕ್ಕಕ್ಕೆ ಬರುವುದಿಲ್ಲ, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗಳಿಸುವ ಸ್ಥಾನಗಳು ಲೆಕ್ಕಕ್ಕೆ ಬರುತ್ತವೆ ಎಂದು ಅಮನ್ ಎಂಬುದು ವಿಜೇತಾ ಟ್ವೀಟ್ಗೆ ಉತ್ತರಿಸಿದ್ದಾರೆ. ಅದಕ್ಕೂ ಕೂಡ ವಿಜೇತಾ ಅನಂತ್ ಕುಮಾರ್ ಅವರು ಉತ್ತರಿಸಿದ್ದು, ಎಲ್ಲವನ್ನೂ ಕೇವಲ ಚುನಾವಣೆಯಲ್ಲಿ ಗಳಿಸುವ ಸ್ಥಾನಗಳ ಲೆಕ್ಕ ನೋಡಿ ಅಳೆಯಲಾಗುವುದಿಲ್ಲ ಎಂದು ಮಾರ್ಮಿಕ ಉತ್ತರ ಕೊಟ್ಟಿದ್ದಾರೆ.
ಟ್ವಿಟರ್ನಲ್ಲಿ ಇದೇ ಚರ್ಚೆಯಲ್ಲಿ ಭಾಗವಹಿಸಿದ್ದ ವಿಜೇತ್ ಸಾಲಿಯಾನ್ ಎಂಬುವರು ಜೆಡಿಎಸ್ ಬಲದ ಬಗ್ಗೆ ವಿವರಿಸಿದ್ದಾರೆ. ಜೆಡಿಎಸ್ ಪಕ್ಷ ಎಲ್ಲ ಚುನಾವಣೆಗಳಲ್ಲಿಯೂ ಬಲವಾಗಿತ್ತು ಎಂಬ ಮಾಹಿತಿಯನ್ನು ಅವರು ಕೊಟ್ಟಿದ್ದಾರೆ. 2008ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯಥಿಗಳು 64 ಕ್ಷೇತ್ರಗಳಲ್ಲಿ ಕೇವಲ 5000ಕ್ಕಿಂತ ಕಡಿಮೆ ಮತಗಳಿಂದ ಸೋತಿದ್ದರು. 2013ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 49 ಕ್ಷೇತ್ರಗಳಲ್ಲಿ ಕೇವಲ 5000ಕ್ಕಿಂತ ಕಡಿಮೆ ಮತಗಳಿಂದ ಸೋತಿತ್ತು. ಹೀಗಾಗಿ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವಂತೆ ಮಾಡುವ ಸಂಭವನೀಯ ಪಕ್ಷ ಜೆಡಿಎಸ್ ಆಗಿದೆ ಎಂದು ವಿಜೇತ್ ಸಾಲಿಯಾನ್ ವಿವರಿಸಿದ್ದಾರೆ.
ಪುತ್ರಿಯ ಟ್ವೀಟ್ನಲ್ಲಿ ತಾಯಿಯ ಅಸಮಾಧಾನ ಸ್ಫೋಟ?
ದಿ. ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅವರ ಜೆಡಿಎಸ್ ಹೊಳಿಕೆ ಟ್ವೀಟ್ ಮಾಡಿದ್ದಾರೆ. ಆದರೆ ಈ ಹಿಂದೆ ಅನಂತ್ ಕುಮಾರ್ ಅವರ ಪತ್ನಿ, ರಾಜ್ಯ ಬಿಜೆಪಿ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಅವರ ಅಸಮಾಧಾನವಿದೆ ಎನ್ನಲಾಗುತ್ತಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ರಾಜ್ಯ ಬಿಜೆಪಿ ನಿರ್ಲಷಕ್ ಮಾಡಿದೆ. ಜೊತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಜೊತೆಗೆ ಚುನಾವಣೆ ತಯಾರಿಯನ್ನು ಆರಂಭಿಸಿ, ಚುನಾವಣಾ ಕಚೇರಿಯನ್ನು ತೆರೆದಿದ್ದರು. ಆದರೆ ದಿಢೀರ್ ಎಂದು ಬಿಜೆಪಿ ಹೈಕಮಾಂಡ್ ತನ್ನ ನಿರ್ಧಾರ ಬದಲಿಸಿತ್ತು. ತೇಜಸ್ವಿನಿ ಅನಂತ್ ಕುಮಾರ್ವ ಅವರಿಗೆ ಟಿಕೆಟ್ ನಿರಾಕರಿಸಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಟ್ಟಿತ್ತು. ಉಳಿದೆಲ್ಲ ಕ್ಷೇತ್ರಗಳಲ್ಲಿ ಅನುಕಂಪದ ಆಧಾರದಲ್ಲಿ ಮೃತ ನಾಯಕರ ಕುಟುಂಬದವರಿಗೆ ಟಿಕೆಟ್ ಕೊಡುವುದು ವಾಡಿಕೆ. ಆದರೆ ದಿ. ಅನಂತ್ ಕುಮಾರ್ ಅವರ ಕುಟುಂಬಕ್ಕೆ ಮಾತ್ರ ಅದನ್ನು ನಿರಾಕರಿಸಲಾಗಿತ್ತು.
Recommended Video
ತೇಜಸ್ವಿಸೂರ್ಯ ಗೆಲವಿನ ಹಿಂದೆ ತೇಜಸ್ವಿನಿ ಅನಂತ್ ಕುಮಾರ್!
ಆದರೆ ದಿ. ಅನಂತ್ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ತೇಜಸ್ವಿನಿ ಅವರ ಬದಲಿಗೆ ತೇಜಸ್ವಿಸೂರ್ಯ ಅವರನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ತೇಜಸ್ವಿಸೂರ್ಯ ಅವರ ಪರವಾಗಿ ಪ್ರಚಾರವನ್ನೂ ಮಾಡಿದ್ದರು. ಚುನಾವಣೆಯಲ್ಲಿ ತೇಜಸ್ವಿಸೂರ್ಯ ಅವರ ಜಯಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಕೂಡ ಕಾರಣ ಎಂಬುದು ಬಹಿರಂಗ ಸತ್ಯ. ಆದರೂ ಮುಂದಿನ ದಿನಗಳಲ್ಲಿ ಬಿಜೆಪಿ ಸೂಕ್ತ ರೀತಿಯಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ನಡೆಸಿಕೊಂಡಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು.
ಹೀಗಾಗಿ ಈ ಎಲ್ಲ ಕಾರಣಗಳಿಂದ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ದಿ. ಅನಂತ್ ಕುಮಾರ್ ಅವರಿಗೆ ಬೆನ್ನೆಲುವಾಗಿದ್ದ ತೇಜಸ್ವಿನಿ ಅನಂತ್ ಕುಮಾರ್ ಅವರು ಜೆಡಿಎಸ್ನತ್ತ ವಾಲುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಹಾಗೇನಾದರೂ ಆದಲ್ಲಿ ಬೆಂಗಳೂರು ಬಿಜೆಪಿಗೆ ಅದು ದೊಡ್ಡ ಹೊಡೆತ ಎನ್ನಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಅದು ಬಿಜೆಪಿಗೆ ಮಾರಕವಾಗಬಹುದು ಎಂಬ ಚರ್ಚೆ ಇದೀಗ ಬಿಜೆಪಿಯಲ್ಲಿ ಬಲವಾಗುತ್ತಿದೆ.