ಜಗದೀಶ್ ಶೆಟ್ಟರ್ ಇನ್ನು ವಿರೋಧ ಪಕ್ಷದ ನಾಯಕ?
ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಂದಿನಿತೂ ತಡಮಾಡದೆ ಬಿಜೆಪಿಗೆ ವಿರೋಧ ಪಕ್ಷದ ಸ್ಥಾನಮಾನಕ್ಕಾಗಿ ದಾವೆ ಹೂಡಿ ಬಂದಿದ್ದರೆ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಂಡಿದೆ.
ಅಂದಹಾಗೆ ಜಗದೀಶ್ ಶೆಟ್ಟರ್ ಅವರು ಪ್ರಸ್ತುತ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಮುಂದೆ ಬಿಜೆಪಿ ಮತ್ತು ಕೆಜೆಪಿ ವಿಲೀನಕ್ಕೆ ಅಧಕೃತವಾಗಿ ಮಾನ್ಯತೆ ದೊರೆತು, ಬಿಜೆಪಿಯೇ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿದರೆ ಜಗದೀಶ್ ಶೆಟ್ಟರ್ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿ ಸ್ಥಾನಮಾನ ಪಡೆಯುವುದು ಬಹುತೇಕ ಖಚಿತವಾಗಿದೆ.
ಇದನ್ನು ಖುದ್ದು ಜಗದೀಶ್ ಶೆಟ್ಟರ್ ಅವರೇ ಹೇಳಿದ್ದಾರೆ. ನಿನ್ನೆ ಪತ್ರಕರ್ತರೊಂದಿಗೆ ಮಾತನಾಡಿರುವ ಶೆಟ್ಟರ್, ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಂಡರೆ ಪ್ರತಿಪಕ್ಷ ನಾಯಕ ಸ್ಥಾನವನ್ನು ಮಾಜಿ ಸಿಎಂ ಯಡಿಯೂರಪ್ಪ ವಹಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಕೊಟ್ಟಿದ್ದಾರೆ.
ಸದ್ಯ ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಳ್ಳಲಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವಿಲೀನಗೊಂಡ ಬಳಿಕವೂ ಪ್ರತಿಪಕ್ಷದ ನಾಯಕನಾಗಿ ನಾನೇ ಇರುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು. ಜತೆಗೆ, ಯಡಿಯೂರಪ್ಪ ಈ ಕುರಿತು ಯಾವುದೇ ಬೇಡಿಕೆ ನಮ್ಮ ಮುಂದೆ ಇಟ್ಟಿಲ್ಲ. ಬೇಷರತ್ತಾಗಿ ಅವರು ಪಕ್ಷಕ್ಕೆ ಮರಳಿದ್ದಾರೆ. ಅವರೇ ನಮ್ಮ ಹಿರಿಯ ನಾಯಕ. ಅವರ ಮಾರ್ಗದರ್ಶನದಲ್ಲೇ ಲೋಕಸಭೆ ಚುನಾವಣೆಯನ್ನು ಶಕ್ತಿಯುತವಾಗಿ ಎದುರಿಸುತ್ತೇವೆ ಎಂದು ಶೆಟ್ಟರ್ ಹೇಳಿದ್ದಾರೆ.