ಸಿದ್ದರಾಮೋತ್ಸವಕ್ಕೆ ಭರ್ಜರಿ ತಿರುಗೇಟು ನೀಡಲು ಬಿಜೆಪಿ ಸಜ್ಜು?
ಯೋಗ ದಿನಾಚರಣೆಯ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಪಕ್ಷಕ್ಕೆ ಟಾನಿಕ್ ನೀಡಿ ಹೋಗಿದ್ದರೂ, ರಾಜ್ಯ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿರಲಿಲ್ಲ. ಈಗ, ಸಿದ್ದರಾಮೋತ್ಸವದ ದಿನ ಅಮಿತ್ ಶಾ ಬಂದು ಹೋಗಿದ್ದು, ಪಕ್ಷದ ನಾಯಕರನ್ನು ಬಡಿದೆಬ್ಬಿಸಿದೆ.
ಇತ್ತೀಚಿನ ದಿನಗಳಲ್ಲಿ ಕಂಡು ಕೇಳರಿಯದ ಜನಸಾಗರಕ್ಕೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಸಾಕ್ಷಿಯಾಗಿತ್ತು. ಅವರ ಹುಟ್ಟುಹಬ್ಬದ ಆಚರಣೆಯ ಬದಲಾಗಿ, ಅದು ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಕಾರ್ಯಕ್ರಮವಾಗಿ ಬದಲಾಗಿತ್ತು.
ಸಿದ್ದರಾಮೋತ್ಸವ: ಕಾಂಗ್ರೆಸ್ಸಿಗೆ 6 ಪ್ರಶ್ನೆ ಕೇಳಿದ ಬಿಜೆಪಿ
ಅಮಿತ್ ಶಾ ಒಂದು ದಿನದ ಬೆಂಗಳೂರು ಭೇಟಿಯ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರತ್ಯೇಕವಾಗಿ ಕರೆಸಿಕೊಂಡಿದ್ದರು. ಆ ವೇಳೆ, ಮೊದಲಿಗೆ ಯಡಿಯೂರಪ್ಪನವರು ಉಲ್ಲೇಖಿಸಿದ್ದೇ ಸಿದ್ದರಾಮೋತ್ಸವ ಎಂದು ಹೇಳಲಾಗುತ್ತಿದೆ.
ಈಗ, ಆ ಕಾರ್ಯಕ್ರಮಕ್ಕೆ ತಿರುಗೇಟು ನೀಡಲು ಬಿಜೆಪಿಯ ರಾಜ್ಯ ಘಟಕ ತೆರೆಮೆರೆಯಲ್ಲಿ ಸಿದ್ದತೆಯನ್ನು ನಡೆಸಿಕೊಳ್ಳುತ್ತಿದೆ. ಆಗಸ್ಟ್ ಮಾಸಾಂತ್ಯದಲ್ಲೇ ಪಕ್ಷ ಬೃಹತ್ ಸಮಾವೇಶವನ್ನು ಆಯೋಜಿಸಲು ಚಿಂತನೆ ನಡೆಸುತ್ತಿದೆ ಎಂಬುದು ಸುದ್ದಿ.
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಠಕ್ಕರ್
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಠಕ್ಕರ್ ನೀಡುವ ಅನಿವಾರ್ಯತೆ ಬಿಜೆಪಿಗಿದೆ. ಈ ವಿಚಾರವನ್ನು ಅಮಿತ್ ಶಾ ಭೇಟಿಯ ವೇಳೆಯೂ ಪ್ರಸ್ತಾಪಿಸಲಾಗಿದೆ ಎನ್ನುವ ಮಾತೂ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಸುಳ್ಯದ ಬೆಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯ ನಂತರ, ಪಕ್ಷದ ಹಲವು ಮುಖಂಡರು/ ಕಾರ್ಯಕರ್ತರು ಬಿಜೆಪಿ ವಿರುದ್ದ ಮುನಿಸಿಕೊಂಡು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯನ್ನು ನೀಡಿದ್ದರು. ಹಾಗಾಗಿ, ಬಿಜೆಪಿಗೆ ಕಾರ್ಯಕರ್ತರನ್ನು ಮತ್ತೆ ಸೆಳೆಯುವುದು ಅತ್ಯಂತ ಅವಶ್ಯಕತೆಯಾಗಿದೆ.
ಯಡಿಯೂರಪ್ಪನವರ ಸಲಹೆ ಗಂಭೀರವಾಗಿ ತೆಗೆದುಕೊಂಡ ಅಮಿತ್ ಶಾ
ಯಡಿಯೂರಪ್ಪನವರ ಸಲಹೆಗಳನ್ನು ಅಮಿತ್ ಶಾ ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆಗಸ್ಟ್ ಅಂತ್ಯದೊಳಗೆ ಬಿಜೆಪಿ ಬೃಹತ್ ಸಮಾವೇಶವನ್ನು ಆಯೋಜಿಸಲು ಪೂರ್ವಸಿದ್ದತೆಗಳನ್ನು ಆರಂಭಿಸಿದೆ. ಹುಬ್ಬಳ್ಳಿ, ಮಂಗಳೂರು ಅಥವಾ ಮೈಸೂರು ಕರ್ನಾಟಕದ ಭಾಗದಲ್ಲಿ ಸಮಾವೇಶ ನಡೆಸುವ ಚಿಂತನೆ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ ಎನ್ನುವ ಮಾತು ಕೂಡಾ ಚಾಲ್ತಿಯಲ್ಲಿದೆ.
ಬಿಜೆಪಿಯ ರಾಜ್ಯ ಮುಖಂಡರಿಂದ ಹಿರಿಯ ನಾಯಕರಿಗೆ ಮನದಟ್ಟು
ಚುನಾವಣಾ ವರ್ಷದಲ್ಲಿ ಕಾರ್ಯಕರ್ತರ ಮತ್ತು ಸ್ಥಳೀಯ ಮುಖಂಡರ ಸಹಕಾರ ಎಲ್ಲಾ ಪಕ್ಷಗಳಿಗೂ ಮುಖ್ಯವಾಗುತ್ತದೆ. ಆದರೆ, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ ಎನ್ನುವ ಭಯ ಕಮಲದ ಕಾರ್ಯಕರ್ತರಿಗೆ ಕಾಡಲು ಆರಂಭಿಸಿದ್ದು ಬಿಜೆಪಿಗಾಗುತ್ತಿರುವ ಬಹುದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗಾಗಿ, ಸಮಾವೇಶದ ಅನಿವಾರ್ಯತೆಯನ್ನು ಬಿಜೆಪಿಯ ರಾಜ್ಯ ಮುಖಂಡರು ಹಿರಿಯ ನಾಯಕರಿಗೆ ಮನದಟ್ಟು ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಸರಕಾರ ಒಂದು ವರ್ಷ ಪೂರೈಸಿದ ಸಂದರ್ಭ
ಬಸವರಾಜ ಬೊಮ್ಮಾಯಿನವರ ಸರಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿತ್ತು. ಆದರೆ, ಪಕ್ಷದ ಕಾರ್ಯಕರ್ತನ ಹತ್ಯೆಯಿಂದ ಅದು ರದ್ದಾಗಿತ್ತು. ಈಗ, ವರ್ಷಾಚರಣೆಯ ಹೆಸರಿನಲ್ಲಿ ಈ ಮಾಸಾಂತ್ಯದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ರಾಜ್ಯ ಬಿಜೆಪಿ ಘಟಕ ಸಿದ್ದತೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನೂ ಆಹ್ವಾನಿಸಲು ಚಿಂತನೆ ನಡೆದಿದೆ.