ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ; ಜನಸ್ವರಾಜ್ ಸಮಾವೇಶ ಆರಂಭ!
ಬೆಂಗಳೂರು, ನ. 18: ವಿಧಾನಸಭಾ ಉಪ ಚುನಾವಣೆ ಬಳಿಕ ಮತ್ತೊಂದು ಅಗ್ನಿಪರೀಕ್ಷೆ ರಾಜ್ಯ ಬಿಜೆಪಿ ಘಟಕಕ್ಕೆ ಎದುರಾಗಿದೆ. ವಿಧಾನಸಭೆ ಉಪ ಚುನಾವಣೆ ಬಳಿಕ, ಇದೀಗ ವಿಧಾನ ಪರಿಷತ್ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ, ಆದರೆ ವಿಧಾನ ಪರಿಷತ್ನಲ್ಲಿ ಬಹುಮತ ಪಡೆಯಲು ಬಿಜೆಪಿಗೆ ಈ ಚುನಾವಣೆ ಮಹತ್ವದ್ದಾಗಿದೆ.
ವಿಧಾನ ಪರಿಷತ್ನಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳಿಂದ ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪರಿಷತ್ನಲ್ಲಿ ಬಹುಮತ ಪಡೆಯಲು ಬಿಜೆಪಿಗೆ ಅವಕಾಶವಿದೆ. ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಜನ ಸ್ವರಾಜ್ ಗುರುವಾರದಿಂದ ಜನ ಸ್ವರಾಜ್ ಯಾತ್ರೆ ಆರಂಭಿಸಿದೆ.
ಪರಿಷತ್ ಚುನಾವಣೆಗೆ ಪೂರ್ವತಯಾರಿ ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆಯ ಉದ್ದೇಶದಿಂದ ಬಿಜೆಪಿ ಜನಸ್ವರಾಜ್ ಯಾತ್ರೆ ಹಮ್ಮಿಕೊಂಡಿದೆ. ಯಾತ್ರೆಯ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂಬ ಮಾಹಿತಿಯಿದೆ. ಒಟ್ಟು ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಜನಸ್ವರಾಜ್ ಯಾತ್ರೆ ಆರಂಭವಾಗಿದೆ.
ನಾಲ್ಕು ತಂಡಗಳಲ್ಲಿ ಜನಸ್ವರಾಜ್ ಯಾತ್ರೆ!
ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಜನಸ್ವರಾಜ್ ಯಾತ್ರೆ ಶುರುವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನಾಲ್ಕು ತಂಡಗಳ ನೇತೃತ್ವ ವಹಿಸಿದ್ದಾರೆ. ಪ್ರತಿ ತಂಡಕ್ಕೆ 7 ಜಿಲ್ಲೆಗಳ ಜವಾಬ್ದಾರಿಯನ್ನು ಕೊಡಲಾಗಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಈ ಯಾತ್ರೆ ನಡೆಯಲಿದೆ.
ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದ ತಂಡ!
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೊಪ್ಪಳದಲ್ಲಿ ಜನಸ್ವರಾಜ್ ಯಾತ್ರೆ ಆರಂಭವಾಗಿದೆ. ಇಂದು ನವೆಂಬರ್ 18ರಂದು ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ಸಮಾವೇಶ ನಡೆಯುತ್ತಿದೆ. ಕೊಪ್ಪಳದಲ್ಲಿ ನಡೆಯುತ್ತಿರುವ ಜನಸ್ವರಾಜ್ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದಾರೆ. ನಾಳೆ ನ.19ರಂದು ರಾಯಚೂರು ಹಾಗೂ ಯಾದಗಿರಿಯಲ್ಲಿ, ನ. 20ರಂದು ಕಲಬುರಗಿ ಹಾಗೂ ಬೀದರ್ನಲ್ಲಿ ಕಟೀಲ್ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.
ಎರಡನೇ ತಂಡದ ನೇತೃತ್ವ ವಹಿಸಿದ್ದಾರೆ ಯಡಿಯೂರಪ್ಪ!
ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎರಡನೇ ತಂಡ ಜನಸ್ವರಾಜ್ಯ ಸಮಾವೇಶ ಯಾತ್ರೆ ಆರಂಭಿಸಿದೆ. ಇಂದು ನ. 18 ರಂದು ಸಿರ್ಸಿ ಹಾಗೂ ಹಾವೇರಿಯಲ್ಲಿ ಸಮಾವೇಶ ನಡೆಯುತ್ತಿದೆ. ನ. 19ರಂದು ಧಾರವಾಡ ಮತ್ತು ಗದಗ, ನ. 20ರಂದು ಬಾಗಲಕೋಟೆ ಮತ್ತು ವಿಜಯಪುರ ಹಾಗೂ ನ. 21ರಂದು ಚಿಕ್ಕೋಡಿ, ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ.
ಜನಸ್ವರಾಜ ಯಾತ್ರೆಯ ಮೂರನೇ ತಂಡದ ನೇತೃತ್ವವವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಹಿಸಿಕೊಂಡಿದ್ದು, ಅವರ ನೇತೃತ್ವದಲ್ಲಿ ಇಂದು ನ. 18ರಂದು ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ, ನ. 19ರಂದು ಉಡುಪಿ ಮತ್ತು ಮಂಗಳೂರು, ನ. 20ರಂದು ಚಾಮರಾಜನಗರ ಮತ್ತು ಮೈಸೂರು, ನ. 21ರಂದು ಮಂಡ್ಯ ಮತ್ತು ಹಾಸನ, ನ. 22ರಂದು ಕೊಡಗಿನಲ್ಲಿ ಸಮಾವೇಶ ನಡೆಯಲಿವೆ.
ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಾಲ್ಕನೇ ತಂಡ!
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಾಲ್ಕನೇ ತಂಡ ಇಂದು ನ. 18ರಂದು ದಾವಣಗೆರೆ ಮತ್ತು ಚಿತ್ರದುರ್ಗ, ನ. 19ರಂದು ತುಮಕೂರು ಮತ್ತು ರಾಮನಗರ, ನ. 20ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ, ನ. 21ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನಸ್ವರಾಜ್ ಸಮಾವೇಶ ನಡೆಯಲಿವೆ.
ಕರ್ನಾಟಕದ ವಿಧಾನ ಪರಿಷತ್ನ 25 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ 10ರಂದು ಮತದಾನ ನಡೆಸುವುದಾಗಿ ಘೋಷಣೆ ಮಾಡಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಪ್ರಕಟಿಸಲಾಗಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ.