17 ಅನರ್ಹ ಶಾಸಕರಲ್ಲಿ ಒಬ್ಬರಿಗೆ ಮಾತ್ರ ಬಿಜೆಪಿ ಬಾಗಿಲು ಬಂದ್: ಆಗ ಅನರ್ಹ, ಈಗ ಅತಂತ್ರ!
ಬೆಂಗಳೂರು, ನವೆಂಬರ್ 13: ಸ್ಪೀಕರ್ ನಿರ್ಧಾರವನ್ನು ಎತ್ತಿ ಹಿಡಿದರೂ, ಅನರ್ಹಗೊಂಡ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಬಿರುಸುಗೊಳ್ಳುವಂತೆ ಮಾಡಿದೆ. ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ಇದೆ ಎಂಬ ತೀರ್ಪಿನ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಅನರ್ಹಗೊಂಡಿದ್ದ ಶಾಸಕರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣರಾದ ಶಾಸಕರ ರಾಜೀನಾಮೆ ಪ್ರಸಂಗ ದೇಶದಾದ್ಯಂತ ಚರ್ಚೆಗೆ ಒಳಗಾಗಿತ್ತು. ಕೆಲವು ಶಾಸಕರು ಮುಂಬೈಗೆ ತೆರಳಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರೆ, ಇನ್ನು ಕೆಲವು ಶಾಸಕರು ತಮ್ಮ ಕ್ಷೇತ್ರದಲ್ಲಿಯೇ ಉಳಿದುಕೊಂಡಿದ್ದರು. ಈ 17 ಶಾಸಕರ ರಾಜೀನಾಮೆಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದ್ದರೆ, ಬಿಜೆಪಿ ತನಗೂ ಅನರ್ಹ ಶಾಸಕರ ರಾಜೀನಾಮೆಗೂ ಸಂಬಂಧವಿಲ್ಲ ಎಂದೇ ಪ್ರತಿಪಾದಿಸುತ್ತಾ ಬಂದಿತ್ತು.
ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ: ಲಿಂಬಾವಳಿ ನೇತೃತ್ವ
ಈಗ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಅನರ್ಹ ಶಾಸಕರು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಅನರ್ಹಗೊಂಡ 17 ಶಾಸಕರ ಪೈಕಿ 16 ಮಂದಿ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಈ ಪಟ್ಟಿಯಲ್ಲಿ ಒಬ್ಬ ಶಾಸಕರ ಹೆಸರು ಮಾತ್ರ ಇಲ್ಲ.
ರೋಷನ್ ಬೇಗ್ ಸೇರ್ಪಡೆಯಿಲ್ಲ
ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 16 ಮಂದಿ ಅನರ್ಹ ಶಾಸಕರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಪಟ್ಟಿ ನೀಡಿದೆ. ಆದರೆ ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದು ರಾಜೀನಾಮೆ ನೀಡಿದ್ದಲ್ಲದೆ, ಬಿಜೆಪಿ ಪಾಳೆಯದಲ್ಲಿ ಕಾಣಿಸಿಕೊಂಡಿದ್ದ ಶಿವಾಜಿನಗರದ ಶಾಸಕ ರೋಷನ್ ಬೇಗ್ ಹೆಸರು ಈ ಪಟ್ಟಿಯಲ್ಲಿ ಇಲ್ಲ. ಇದರ ಅರ್ಥ ಅವರು ಬಿಜೆಪಿ ಸೇರಿಕೊಳ್ಳುತ್ತಿಲ್ಲ.
ಆಗ ಅನರ್ಹ, ಈಗ ಅತಂತ್ರ
ಶಿವಾಜಿ ನಗರದ ಶಾಸಕ ರೋಷನ್ ಬೇಗ್ ಬಿಜೆಪಿಯ ನಾಯಕರ ಜತೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಬಿಜೆಪಿ ಸೇರುವ ಬಗ್ಗೆ ಆಪ್ತರೊಂದಿಗೆ ಇಚ್ಛೆ ವ್ಯಕ್ತಪಡಿಸಿದ್ದರು. ರಾಜೀನಾಮೆ ನೀಡುವ ಮುನ್ನ ಕೂಡ ಬಿಜೆಪಿ ಸೇರುವುದಾಗಿ ಹೇಳಿಕೆ ನೀಡಿದ್ದರು. ಮಗನ ಜತೆ ಬಿಜೆಪಿ ಸೇರಲು ಅವರು ತಯಾರಿ ನಡೆಸಿದ್ದರು. ಆದರೆ ಕೇಂದ್ರ ನಾಯಕತ್ವವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿಲ್ಲ. ಲಕ್ಷಾಂತರ ಜನರಿಗೆ ವಂಚಿಸಿದ ಐಎಂಎ ಹಗರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿಬಂದಿತ್ತು. ಆರೋಪ ಹೊತ್ತಿರುವ ರೋಷನ್ ಬೇಗ್ ಅವರನ್ನು ಈ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿದರೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅವರನ್ನು ಸದ್ಯಕ್ಕೆ ದೂರವಿಡಲು ನಿರ್ಧರಿಸಿದೆ.
ಸುಪ್ರೀಂ ತೀರ್ಪು ಹೊರಬೀಳುತ್ತಲೇ ಬಿಜೆಪಿಯ ಮೊದಲ ವಿಕೆಟ್ ಡೌನ್?
ಅನರ್ಹ ಶಾಸಕರ ಸೇರ್ಪಡೆ
ಗುರುವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 16 ಮಂದಿ ಅನರ್ಹ ಶಾಸಕರು ಮತ್ತು ಅವರ ಬೆಂಬಲಿಗರು ಬಿಜೆಪಿ ಸೇರಿಕೊಳ್ಳಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಉಪಸ್ಥಿತರಿರಲಿದ್ದಾರೆ. ರಾಜ್ಯದ ಕೆಲವು ಸಚಿವರು, ಶಾಸಕರು ಮತ್ತು ಮುಖಂಡರು ಹಾಜರಿರಲಿದ್ದಾರೆ.
ಬಿಜೆಪಿ ಸೇರಲಿರುವ ಶಾಸಕರು
ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಆರ್. ಶಂಕರ್, ಆನಂದ್ ಸಿಂಗ್, ಶಿವರಾಂ ಹೆಬ್ಬಾರ್, ಬಿ.ಸಿ. ಪಾಟೀಲ್, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ಎಂ. ಮುನಿರತ್ನ, ಎಂಟಿಬಿ ನಾಗರಾಜ್, ಕೆ. ಸುಧಾಕರ್ ಮತ್ತು ಶ್ರೀಮಂತ ಪಾಟೀಲ್- ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಎಚ್. ವಿಶ್ವನಾಥ್, ನಾರಾಯಣ ಗೌಡ ಮತ್ತು ಕೆ. ಗೋಪಾಲಯ್ಯ ಜೆಡಿಎಸ್ ತೊರೆದು ಕಮಲ ಪಾಳೆಯ ಸೇರಿಕೊಳ್ಳಲಿದ್ದಾರೆ.