ಯಡಿಯೂರಪ್ಪ ಸಂಪುಟ : ಹೈಕಮಾಂಡ್ ಬಳಿ 3 ಪಟ್ಟಿ!
ಬೆಂಗಳೂರು, ಆಗಸ್ಟ್ 05 : "ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಯಡಿಯೂರಪ್ಪ ತೋರಿಸಿದ ಅತಿ ಅವಸರವನ್ನು ಸಂಪುಟ ವಿಸ್ತರಣೆಗೆ ತೋರುತ್ತಿಲ್ಲವೇಕೆ?" ಇದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆ.
ಹೌದು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವಾರ ಕಳೆದಿದೆ. ಆದರೆ, ಇನ್ನೂ ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ.
ಯಡಿಯೂರಪ್ಪ ಸಂಪುಟ : ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ
ಸೋಮವಾರ ಸಂಜೆ 7 ಗಂಟೆಗೆ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಅವರು ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.
ಆಗಸ್ಟ್ 5ರವರೆಗೆ ಯಡಿಯೂರಪ್ಪ ಸರ್ಕಾರದ ಸಂಪುಟ ವಿಸ್ತರಣೆ ಇಲ್ಲ
ಪಕ್ಷದ ಹೈಕಮಾಂಡ್ ಯಡಿಯೂರಪ್ಪ, ಬಿ. ಎಲ್. ಸಂತೋಷ್ರಿಂದ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ತರಿಸಿಕೊಂಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇಮಿಸಿದ ತಂಡವೂ ಒಂದು ಪಟ್ಟಿ ಸಿದ್ಧಪಡಿಸಿ ನೀಡಿದೆ. ಒಟ್ಟು ಮೂರು ಪಟ್ಟಿಗಳು ಇದ್ದು, ಯಾವ ಶಾಸಕರಿಗೆ ಅದೃಷ್ಟ ದೊರೆಯಲಿದೆ? ಎಂದು ಕಾದು ನೋಡಬೇಕಿದೆ....
2 ಹಂತದಲ್ಲಿ ಸಂಪುಟ ವಿಸ್ತರಣೆ; ಸಿಎಂ ಯಡಿಯೂರಪ್ಪ ಲೆಕ್ಕಾಚಾರ
ಸಂಪುಟ ವಿಸ್ತರಣೆ ವಿಳಂಬವೇಕೆ?
ಬಿಜೆಪಿಯ ಹೈಕಮಾಂಡ್ ನಾಯಕರು ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಬ್ಯುಸಿ ಇದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗೃಹ ಸಚಿವರು ಆಗಿರುವ ಕಾರಣ ಲೋಕಸಭಾ ಅಧಿವೇಶನದ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಆದ್ದರಿಂದ, ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ.
ಯಡಿಯೂರಪ್ಪ ದೆಹಲಿಗೆ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಸಂಜೆ ದೆಹಲಿಗೆ ಭೇಟಿ ನೀಡಲಿದ್ದಾರೆ. ಮೂರು ದಿನಗಳ ಕಾಲ ಅವರು ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಪ್ರತಿಪಕ್ಷದ ವಿರುದ್ಧ ಗರಂ
ಸಚಿವ ಸಂಪುಟ ವಿಸ್ತರಣೆ ಯಾವಾಗ? ಎಂದು ಕೇಳಿದ್ದ ಪ್ರತಿಪಕ್ಷ ನಾಯಕರ ವಿರುದ್ಧ ಯಡಿಯೂರಪ್ಪ ಗರಂ ಆಗಿದ್ದಾರೆ. "ನಿಮ್ಮನ್ನು ಕೇಳಿ ಸಂಪುಟ ವಿಸ್ತರಣೆ ಮಾಡಬೇಕಾ?. ನಮ್ಮ ಹೈಕಮಾಂಡ್ ಒಪ್ಪಿಗೆ ನೀಡಿದರೆ 24 ಗಂಟೆಯಲ್ಲಿ ವಿಸ್ತರಣೆ ಮಾಡುವೆ" ಎಂದು ತಿರುಗೇಟು ಕೊಟ್ಟಿದ್ದಾರೆ.
2 ಹಂತದಲ್ಲಿ ಸಂಪುಟ ವಿಸ್ತರಣೆ
ಒಟ್ಟು 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಮೊದಲ ಹಂತದಲ್ಲಿ 10 ರಿಂದ 12 ಶಾಸಕರು ಮಾತ್ರ ಸಂಪುಟ ಸೇರಲಿದ್ದಾರೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ನೋಡಿಕೊಂಡು 2ನೇ ಹಂತದ ವಿಸ್ತರಣೆಯನ್ನು ಮಾಡುವ ಚಿಂತನೆ ಇದೆ. ಆದರೆ, ಮೊದಲ ಹಂತದಲ್ಲಿ ಸಂಪುಟ ಸೇರುವವರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.