ಅನರ್ಹ ಶಾಸಕರ ವಿಚಾರದಲ್ಲಿ ಯಡಿಯೂರಪ್ಪ ಕೈಬಿಟ್ಟ ಹೈಕಮಾಂಡ್?
ನವದೆಹಲಿ, ಆಗಸ್ಟ್ 22: ಬಹು ಪ್ರಯತ್ನ ಪಟ್ಟು ಸರ್ಕಾರ ರಚಿಸಿ ಮುಖ್ಯಮಂತ್ರಿ ಆದಾಗ್ಯೂ ಯಡಿಯೂರಪ್ಪ ಅವರಿಗೆ ಆತಂಕ ತಪ್ಪಿಲ್ಲ. ಅವರನ್ನು ಕೆಲವು ವಿಷಯದಲ್ಲಿ ಹೈಕಮಾಂಡ್ ಏಕಾಂಗಿ ಮಾಡಿದೆ.
ಯಡಿಯೂರಪ್ಪ ಸರ್ಕಾರ ರಚಿಸಲು ಪರೋಕ್ಷ ಮುಖ್ಯ ಕಾರಣ ಅನರ್ಹ ಶಾಸಕರ ವಿಚಾರ ಯಡಿಯೂರಪ್ಪ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅನರ್ಹ ಶಾಸಕರಿಗೆ ಯಾವ ಸ್ಥಾನ-ಮಾನ ನೀಡುವುದು ಎಂಬುದು ಯಡಿಯೂರಪ್ಪಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ಸಹ ಯಡಿಯೂರಪ್ಪ ಅವರನ್ನು ಏಕಾಂಗಿ ಮಾಡಿದೆ.
ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ದೆಹಲಿಗೆ ಅನರ್ಹ ಶಾಸಕರು!
ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸುವುದು ಬಿಜೆಪಿ ಹೈಕಮಾಂಡ್ಗೆ ಇಷ್ಟವಿರಲಿಲ್ಲ, ಚುನಾವಣೆಗೆ ಹೋಗೋಣವೆಂದು ಅಮಿತ್ ಶಾ ಹೇಳಿದ್ದರು. ಆದರೆ ಯಡಿಯೂರಪ್ಪ ಹೈಕಮಾಂಡ್ ಮಾತು ಧಿಕ್ಕರಿಸಿ ಹಳೆಯ ತಂತ್ರದ ಮೂಲಕವೇ ಅಧಿಕಾರ ಹಿಡಿದರು. ಇದು ಹೈಕಮಾಂಡ್ ಅನ್ನು ಕೆರಳಿಸಿದೆ.
ಆದ್ದರಿಂದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸೂಕ್ತ ಬೆಂಬಲ ನೀಡುತ್ತಿಲ್ಲ ಎನ್ನಲಾಗಿದ್ದು, ವಿಶೇಷವಾಗಿ ಅನರ್ಹ ಶಾಸಕರ ವಿಚಾರದಲ್ಲಿ ತಲೆಹಾಕಲು ಪೂರ್ಣವಾಗಿ ನಿರಾಕರಿಸಿದೆ. ಆದರೆ ಇದೇ ಸಮಯದಲ್ಲಿ ಅನರ್ಹ ಶಾಸಕರು ಸ್ಥಾನ-ಮಾನಕ್ಕಾಗಿ ಯಡಿಯೂರಪ್ಪ ಅವರ ಬೆನ್ನು ಬಿದ್ದಿದ್ದು ಯಡಿಯೂರಪ್ಪ ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಅತೃಪ್ತ-ಅನರ್ಹ ಶಾಸಕರ ವಿಚಾರದಲ್ಲಿ ಮಧ್ಯಪ್ರವೇಶವಿಲ್ಲ
ಅನರ್ಹ ಶಾಸಕರು ಮಾತ್ರವೇ ಅಲ್ಲದೆ, 'ಸಂಪುಟ ವಿಸ್ತರಣೆ ನಂತರ ಹುಟ್ಟಿಕೊಳ್ಳುವ ಅತೃಪ್ತಿಯ ವಿಷಯದಲ್ಲೂ ನಾವು ತಲೆ ಹಾಕುವುದಿಲ್ಲ, ಅದೆಲ್ಲವೂ ನಿಮಗೇ ಬಿಟ್ಟದ್ದು' ಎಂದೂ ಸಹ ಬಿಜೆಪಿ ಹೈಕಮಾಂಡ್ ಸ್ಪಷ್ಟವಾಗಿ ಯಡಿಯೂರಪ್ಪ ಗೆ ಹೇಳಿಯಾಗಿದೆ. ಸರ್ಕಾರ ರಚನೆ ತಮ್ಮ ಸೂಚನೆಯಂತೆ, ಇಚ್ಛೆಯಂತೆ ಆಗಿಲ್ಲವೆಂಬುದೇ ಹೈಕಮಾಂಡ್ ಯಡಿಯೂರಪ್ಪ ಮೇಲೆ ಮುನಿಸಿಕೊಳ್ಳಲು ಕಾರಣ.
ಅನರ್ಹ ಶಾಸಕರನ್ನು ಅಂಕೆಯಲ್ಲಿಡುವುದು ಸುಲಭವಲ್ಲ
ಅನರ್ಹ ಶಾಸಕರೆಲ್ಲರೂ ಪ್ರಭಾವಿ ಶಾಸಕರೇ ಆಗಿದ್ದು, ಯಡಿಯೂರಪ್ಪ ಅವರಿಗೆ ಅವರನ್ನು ಅಂಕೆಯಲ್ಲಿ ಹಿಡಿದಿಡುವುದಾಗಲಿ, ಮುಂದೆ ನೊಡೋಣವೆಂದು ಸಾಗು ಹಾಕುವುದಾಗಲಿ ಆಗದ ಮಾತು. ಹೈಕಮಾಂಡ್ ನ ಇಚ್ಛೆಗೆ ವಿರುದ್ಧವಾಗಿ ಅತೃಪ್ತರಿಗೆ ಸ್ಥಾನ-ಮಾನ ಕೊಡುವುದು ಸಹ ಯಡಿಯೂರಪ್ಪ ಅವರಿಗೆ ಸಾಧ್ಯವಿಲ್ಲ.
ಅನರ್ಹ ಹದಿನೇಳು ಶಾಸಕರನ್ನು ದೇವರಂತೆ ನೋಡಿಕೊಳ್ಳಬೇಕಂತೆ !
ಶಾ-ಅನರ್ಹರ ಶಾಸಕರನ್ನು ಭೇಟಿ ಮಾಡುವ ಸಾಧ್ಯತೆ ಇಲ್ಲ
ಅಮಿತ್ ಶಾ ಅಥವಾ ಜೆ.ಪಿ.ನಡ್ಡಾ ಅವರೊಂದಿಗೆ ಅನರ್ಹ ಶಾಸಕರನ್ನು ಭೇಟಿ ಮಾಡಿಸಲೆಂದೇ ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳುತ್ತಿದ್ದಾರೆ, ಅನರ್ಹ ಶಾಸಕರೂ ದೆಹಲಿಯಲ್ಲಿದ್ದಾರೆ. ಆದರೆ ಅಮಿತ್ ಶಾ ಸಮಯವನ್ನೇ ನೀಡಿಲ್ಲ. ಸಮಯ ನೀಡಿದರೂ ಅನರ್ಹ ಶಾಸಕರನ್ನು ಭೇಟಿ ಆಗುವ ಸಾಧ್ಯತೆ ಅತ್ಯಲ್ಪ. ಅನರ್ಹ ಶಾಸಕರನ್ನು ಶಾ ಭೇಟಿಯಾದರೆ ತಾವೇ ಬಹಿರಂಗವಾಗಿ ಆಪರೇಷನ್ ಕಮಲಕ್ಕೆ ಬೆಂಬಲ ನೀಡಿದಂತಾಗುತ್ತದೆ ಎಂಬುದು ಅವರ ನಿಲವು.
ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ಣಯ
ಅನರ್ಹ ಶಾಸಕರ ವಿಚಾರ ಮಾತ್ರವಲ್ಲದೆ ಸಂಪುಟ ವಿಸ್ತರಣೆ ನಂತರ ಎದ್ದಿರುವ ಅತೃಪ್ತ ಶಾಸಕರ ವಿಚಾರದಲ್ಲಿಯೂ ಹೈಕಮಾಂಡ್ ತಲೆ ಹಾಕುವುದಿಲ್ಲ ಎಂದು ಹೇಳಿದೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಎಲ್ಲದಕ್ಕೂ ನಿರ್ದೇಶನ ನೀಡಿರುವ ಹೈಕಮಾಂಡ್ ಅತೃಪ್ತರ ಮತ್ತು ಅನರ್ಹರ ವಿಚಾರಕ್ಕೆ ಮಾತ್ರ ತಲೆ ಹಾಕುವುದಿಲ್ಲ ಎನ್ನುವ ಮೂಲಕ ಯಡಿಯೂರಪ್ಪ ಅವರನ್ನು ಒಂಟಿ ಮಾಡಿದೆ.