ಸಿಎಂ ಬಸವರಾಜ ಬೊಮ್ಮಾಯಿ ದಾವೋಸ್ ಪ್ರವಾಸಕ್ಕೆ ಸಿಗದ ಹೈಕಮಾಂಡ್ ಒಪ್ಪಿಗೆ?
ಬೆಂಗಳೂರು, ಮೇ 16: ರಾಜ್ಯ ರಾಜಕೀಯದಲ್ಲಿ ವಿಧಾನ ಪರಿಷತ್ ಚುನಾವಣೆಗಳು, ಸಂಪುಟ ವಿಸ್ತರಣೆಯ ಬಿಕ್ಕಟ್ಟು ಮಧ್ಯೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದೇಶ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಆದರೆ, ಹೈಕಮಾಂಡ್ನಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ಮೇ 22ರಿಂದ ವಿಶ್ವ ಆರ್ಥಿಕ ಶೃಂಗಸಭೆ ನಡೆಯುತ್ತಿದೆ. ಈ ಶೃಂಗಸಭೆಯಲ್ಲಿ ಭಾರತದಿಂದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಆಹ್ವಾನ ಬಂದಿದೆ. ರಾಜ್ಯಕ್ಕೆ ಬಂಡವಾಳ ತರುವುದು ಮತ್ತು ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಮುಖ್ಯಮಂತ್ರಿ ಇದರಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿರುತ್ತದೆ.
2022-23ನೇ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ
ಅಲ್ಲದೆ, ರಾಜ್ಯ ಸರ್ಕಾರ ಮುಂದಿನ ನವೆಂಬರ್ನಲ್ಲಿ ಬೆಂಗಳುರಿನಲ್ಲಿ ವಿಶ್ವ ಆರ್ಥಿಕ ಹೂಡಿಕೆದಾರರ ಸಭೆ ಹಮ್ಮಿಕೊಂಡಿದೆ. ಈ ಸಭೆಗೆ ಹೂಡಿಕೆದಾರನ್ನು ಸೆಳೆಯಲು ಈಗಾಗಲೇ ವಿದೇಶಿ ರಾಯಭಾರಿಗಳನ್ನು ಭೇಟಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವದ ಹೂಡಿಕೆದಾರರನ್ನು, ಕಂಪೆನಿಗಳನ್ನು ಸೆಳೆಯಲು ದಾವೋಸ್ ಆರ್ಥಿಕ ಶೃಂಗಸಭೆಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಪ್ರಮುಖವೂ ಆಗಿರುತ್ತದೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿದೇಶ ಪ್ರವಾಸಕ್ಕೆ ಬಿಜೆಪಿ ಹೈಕಮಾಂಡ್ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ ಎಂದು ಹೇಳಲಾಗುತ್ತದೆ.
ಮೇ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೋಸ್ನತ್ತ ಪ್ರಯಾಣ ಬೆಳೆಸುತ್ತಾರೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಮುಖ್ಯಮಂತ್ರಿಯ ಜೊತೆ ತೆರಳುತ್ತಾರೆ. ಒಟ್ಟಾರೆ ಐದು ದಿನಗಳ ಪ್ರವಾಸವಾಗಿದ್ದು, ಮೇ 26ರಂದು ಮರಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರವಾಸದ ಬಗ್ಗೆ ಅಧಿಕೃತ ಪಟ್ಟಿ ಸಿದ್ಧವಾಗಿಲ್ಲ.
ಶನಿವಾರ ನಿರ್ಧಾರ ಎಂದಿದ್ದ ಸಿಎಂ
"ದಾವೋಸ್ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗ ಸಭೆಗೆ ನಾನೂ ಸೇರಿದಂತೆ ಭಾರತದ ಇಬ್ಬರು ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿದೆ. ಹೀಗಾಗಿ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಆದರೆ, ಈಗಾಗಲೇ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಎಷ್ಟು ದಿನ ಶೃಂಗಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ಶನಿವಾರದ (ಮೇ 14) ವೇಳೆಗೆ ನಿರ್ಧರಿಸಲಾಗುವುದು," ಎಂದು ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿಕೆ ನೀಡಿದ್ದರು.
ವಿಧಾನ ಪರಿಷತ್ ಚುನಾವಣೆ:
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಎರಡು ಪದವೀಧರ ಕ್ಷೇತ್ರಗಳು ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂ 13ರಂದು ಮತದಾನ ನಡೆಯುತ್ತದೆ. ಇದಲ್ಲದೆ, ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ 7 ಮಂದಿ ಸದಸ್ಯರ ಅವಧಿ ಜೂ 14ಕ್ಕೆ ಮುಕ್ತಾಯ ಆಗಲಿದ್ದು, ಅದಕ್ಕೂ ಸಹ ಜೂ 3ರಂದು ಮತದಾನ ಪ್ರಕ್ರಿಯೆ ಘೋಷಿಸಲಾಗಿದೆ. ಪರಿಷತ್ತಿನಲ್ಲಿ ಅಧಿಕಾರದ ದೃಷ್ಟಿಯಿಂದ ಇದು ಬಿಜೆಪಿಗೆ ಪ್ರಮುಖ ಚುನಾವಣೆಯೂ ಆಗಿದೆ. ಇಂತಹ ಸಂದರ್ಭದಲ್ಲಿ ಸಿಎಂ ಐದು ದಿನಗಳ ವಿದೇಶ ಪ್ರವಾಸ ಹೊರಟರೆ ಅದು ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣದಿಂದ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಸಂಪುಟ ವಿಸ್ತರಣೆಯ ಕಗ್ಗಂಟು
ಈ ಮಧ್ಯೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ವಿಸ್ತರಣೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಹೈಕಮಾಂಡ್ ಒಪ್ಪಿಗೆಗಾಗಿ ಮುಖ್ಯಮಂತ್ರಿ ಹಲವು ಬಾರಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಆದರೆ, ಅಲ್ಲಿಂದ ಇನ್ನೂ ಅನುಮತಿ ದೊರೆತಿಲ್ಲ. ರಾಜ್ಯ ಸಚಿವಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಸಕಾಲದಲ್ಲಿ ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಹೇಳಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಒಂದೆರಡು ದಿನಗಳಲ್ಲಿ ಮತ್ತೆ ದೆಹಲಿಗೆ ಹೋಗುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಅವರೂ ಹೇಳಿಕೆ ನೀಡಿದ್ದಾರೆ. ಹೀಗೆ ಹೈಕಮಾಂಡ್ ಹಗ್ಗ ಜಗ್ಗಾಟದಲ್ಲಿ ಸಂಪುಟ ವಿಸ್ತರಣೆ ಮತ್ತಷ್ಟು ಕಗ್ಗಂಟಾಗಿಯೇ ಇದೆ. ಒಂದು ವೇಳೆ ಸಿಎಂ ದಾವೋಸ್ ಪ್ರವಾಸಕ್ಕೆ ಹೊರಡುವುದಾದರೆ ಅದಕ್ಕೂಮೊದಲು ಸಂಪುಟ ವಿಸ್ತರಣೆ ಆಗುತ್ತದೆಯೇ? ಎಂಬ ನಿರೀಕ್ಷೆಯೂ ಹಲವು ಆಕಾಂಕ್ಷಿಗಳನ್ನು ಕಾಡುತ್ತಿದೆ.
ಲಂಡನ್ ಪ್ರವಾಸವೂ ರದ್ದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇ 21ರಂದು ಲಂಡನ್ ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ, ದಾವೋಸ್ ಪ್ರವಾಸದ ಹಿನ್ನೆಲೆಯಲ್ಲಿ ಲಂಡನ್ ಪ್ರವಾಸ ರದ್ದು ಮಾಡಿದ್ದರು. ಲಂಡನ್ಗೆ ಭೇಟಿ ನೀಡಿ ಬ್ರಿಟೀಷ್ ಸಂಸತ್ತು ಎದುರು ನಿರ್ಮಿಸಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಮತ್ತು ಲಂಡನ್ ಭಾರತೀಯ ಹೈಕಮಿಷನ್ ನಲ್ಲಿ ಕನ್ನಡಿಗರ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಉದ್ದೇಶವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಪ್ರವಾಸ ರದ್ದಾಗಿದೆ.