ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ: ಬಂದ ದಾರಿಗೆ ಸುಂಕವಿಲ್ಲ?
ಸದ್ಯ ಮೂರು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ.
ರಾಜ್ಯದ ಹಲವು ಅಭಿವೃದ್ದಿ ಯೋಜನೆ, ನಮ್ಮ ಮೆಟ್ರೋ ಯೋಜನೆಗೆ ರಕ್ಷಣಾ ಇಲಾಖೆಯ ಜಮೀನು, ಜಿಎಸ್ಟಿ ಮತ್ತು ನೆರೆ ಪರಿಹಾರ ಮುಂತಾದ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಂಬಂಧ ಪಟ್ಟ ಸಚಿವರುಗಳ ಜೊತೆ ಮಾತುಕತೆ ನಡೆಸಿದ್ದಾರೆ.
ವಿಜಯೇಂದ್ರ ಸೂಪರ್ ಸಿಎಂ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು!
ಇವೆಲ್ಲದಕ್ಕಿಂತ ಮುಖ್ಯವಾಗಿ ಯಡಿಯೂರಪ್ಪನವರ ದೆಹಲಿ ಭೇಟಿಯ ಉದ್ದೇಶ ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳುವುದು. ಆದರೆ, ಈ ಪ್ರಕ್ರಿಯೆಗೆ ಅನುಮತಿ ಸಿಗುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.
ದೆಹಲಿಯ ಕರ್ನಾಟಕ ಭವನದಲ್ಲಿ ಬಿ.ಎಲ್.ಸಂತೋಷ್ ಜೊತೆಗೂ ಯಡಿಯೂರಪ್ಪ ಗುರುವಾರ (ಸೆ 17) ರಾತ್ರಿ, ಸಂಪುಟ ಪುನರ್ ರಚನೆಯ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೆರಡ್ಮೂರು ತಿಂಗಳು ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಕಮ್ಮಿ.
ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ವಿಶೇಷತೆಗಳೇನು?
ಎಂಟು ಮುಖಂಡರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇರಾದೆ
ಹಾಲೀ ನಾಲ್ಕು ಸಚಿವರನ್ನು ಕೈಬಿಟ್ಟು, ಇದರ ಜೊತೆಗೆ ಖಾಲಿಯಿರುವ ಆರು ಸ್ಥಾನಗಳಲ್ಲಿ ನಾಲ್ಕು, ಹೀಗೆ ಒಟ್ಟು ಎಂಟು ಮುಖಂಡರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇರಾದೆಯನ್ನು ಯಡಿಯೂರಪ್ಪ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ಅನುಮತಿ ಸಿಗದೇ ಇದ್ದಲ್ಲಿ, ಯಾರನ್ನೂ ಕೈಬಿಡದೇ, ಹೊಸ ನಾಲ್ವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನು ಬಿಎಸೈ ಹಾಕಿಕೊಂಡಿದ್ದಾರೆ ಎನ್ನುವ ಮಾತಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ, ಆಸ್ಪತ್ರೆಗೆ ದಾಖಲು
ಆದರೆ, ಇವೆರಡಕ್ಕೂ ವರಿಷ್ಠರಿಂದ ಅನುಮತಿ ಸಿಗುವ ಸಾಧ್ಯತೆ ಕಮ್ಮಿ. ಒಂದು, ಕೇಂದ್ರ ಗೃಹಸಚಿವ ಅಮಿತ್ ಶಾ, ಆಸ್ಪತ್ರೆಗೆ ದಾಖಲಾಗಿರುವುದರಿಂದ, ಅವರ ಜೊತೆ ಚರ್ಚಿಸದೇ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾರರು ಎನ್ನುವುದು. ರಾಜನಾಥ್ ಸಿಂಗ್ ಬಳಿ ಬಿಎಸ್ವೈ, ಈ ವಿಚಾರದಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಮಯಾವಕಾಶ ವರಿಷ್ಠರ ಬಳಿಯಿಲ್ಲ
ಇದರ ಜೊತೆಗೆ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಅನುಮತಿ ನೀಡಿದ್ದಲ್ಲಿ, ಪಕ್ಷದೊಳಗೆ ಅಸಮಾಧಾನ ಏಳುವ ಸಾಧ್ಯತೆ ಇರುವುದರಿಂದ, ಹಲವು ಆಯಾಮಗಳಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಲಬೇಕಾಗುತ್ತದೆ. ಇದಕ್ಕೆ ಸಮಯಾವಕಾಶ ಸದ್ಯಕ್ಕೆ ವರಿಷ್ಠರ ಬಳಿಯಿಲ್ಲ ಎಂದು ಹೇಳಲಾಗುತ್ತಿದೆ.
Recommended Video
ವಿಧಾನಮಂಡಲದ ಅಧಿವೇಶನ ಕೂಡಾ ಆರಂಭವಾಗುತ್ತಿರುವುದು
ಹಾಗಾಗಿ, ವಿಧಾನಮಂಡಲದ ಅಧಿವೇಶನ ಕೂಡಾ ಆರಂಭವಾಗುತ್ತಿರುವುದರಿಂದ, ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಲು ಯಡಿಯೂರಪ್ಪನವರಿಗೆ ವರಿಷ್ಠರು ಸೂಚಿಸಬಹುದು. ವರ್ಷಾಂತ್ಯದೊಳಗೆ, ಸ್ಪಷ್ಟ ಸ್ವರೂಪವನ್ನು ನೀಡಿ, ವಿಸ್ತರಣೆ ಅಥವಾ ಪುನರ್ ರಚನೆಗೆ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಸದ್ಯದ ಮಟ್ಟಿಗೆ ಬಿಎಸ್ವೈ ಅವರ ದೆಹಲಿ ಪ್ರವಾಸ, ಬಂದ ದಾರಿಗೆ ಸುಂಕವಿಲ್ಲದಂತೆ ಆಗಬಹುದು.