ಮಾಜಿ ಸಿಎಂ ಯಡಿಯೂರಪ್ಪ ಕುರಿತು ಸಿಎಂ ಬಸವರಾಜ ಬೊಮ್ಮಾಯಿಗೆ ಸೂಚನೆ ಕೊಟ್ಟ ಬಿಜೆಪಿ ಹೈಕಮಾಂಡ್?
ಬೆಂಗಳೂರು, ಆ. 03: ಕೊನೆಯ ಕ್ಷಣದಲ್ಲಿ ಅರವಿಂದ್ ಬೆಲ್ಲದ್ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದೆ ಎಂಬುದು ಹಳೆಯ ಮಾಹಿತಿ. ದೆಹಲಿಯಲ್ಲಿ ಹೈಕಮಾಂಡ್ ತೀರ್ಮಾನ ಮಾಡಿದ್ದು ಬೇರೆ ಹೆಸರು, ಅದು ಬೆಂಗಳೂರಿನಲ್ಲಿ ಬದಲಾಯಿತು ಎಂಬುದು ಬಿಜೆಪಿ ವಲಯದಿಂದ ಈ ಹಿಂದೆ ಕೇಳಿ ಬಂದ ಮಾತು. ಇದೀಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ವಾರವಾಗಿದೆ. ಆದರೆ ಸಂಪುಟ ರಚನೆ ಕಸರತ್ತು ಮಾತ್ರ ಇನ್ನೂ ಮುಗಿದಿಲ್ಲ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಬಂದಿದೆ.
ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಲಕ್ ಹೊಡೆಯಿತಾ? ವೀಕ್ಷಕರು ದೆಹಲಿ ಬಿಟ್ಟಾಗ ಅದೃಷ್ಟವಂತರಾಗಿದ್ದ ಅರವಿಂದ ಬೆಲ್ಲದ್ ಅವರಿಗೆ ವೀಕ್ಷಕರು ಬೆಂಗಳೂರು ತಲುಪಿದಾಗ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗಿತಾ? ಕಳೆದೊಂದು ವಾರದಿಂದ ಈ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಬಹಿರಂಗವಾಗಿ ಯಾರನ್ನೂ ಮುಖ್ಯಮಂತ್ರಿ ಮಾಡುವಂತೆ ಸೂಚಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ತಾವು ಹುದ್ದೆ ತ್ಯಾಗ ಮಾಡಿದರೆ ತಮ್ಮ ಆಪ್ತ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವಂತೆ ದೆಹಲಿ ವರಿಷ್ಠರ ಎದುರು ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿಯೂ ಇದೆ.
ಆದರೆ ಅವರ ಬೇಡಿಕೆಯನ್ನು ಹೈಕಮಾಂಡ್ ನಾಯಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬೇರೆಯದೇ ಲೆಕ್ಕಾಚಾರದಲ್ಲಿ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ತೀರ್ಮಾನ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಡಿಯೂರಪ್ಪರ ಪಟ್ಟಿಗೆ ಹೈಕಮಾಂಡ್ ತನ್ನ ಪಟ್ಟು ಸಡಿಲಿಸ ಬೇಕಾಯ್ತ.
ಅದಾಗಿ ಒಂದು ವಾರವಾಯ್ತು, ಈಗ ದೆಹಲಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿರಿಗೆ ಸೂಕ್ಷ್ಮದ ಸೂಚನೆಯೊಂದನ್ನು ವರಿಷ್ಠರು ಕೊಟ್ಟಿದ್ದಾರೆ ಎಂಬ ಖಚಿತ ಮಾಹಿತಿಯಿದೆ. ಏನದು ಹೈಕಮಾಂಡ್ ಸೂಚನೆ? ಅದು ಮಾಜಿ ಸಿಎಂ ಹಾಗೂ ಹಾಲಿ ಸಿಎಂ ಮಧ್ಯೆ ಕಂದಕ ಉಂಟಾಗುವಂತೆ ತರುತ್ತದೆಯಾ? ಮುಂದಿದೆ ಮಾಹಿತಿ!
ದೆಹಲಿಯಿಂದ ಬೆಂಗಳೂರಿಗೆ ಬಂದ ಬಳಿಕ ಬದಲು
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮಾಡಿದ ಬಳಿಕ ರಾಜ್ಯ ಬಿಜೆಪಿಗೆ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಬೇಕಿತ್ತು. ಅದಕ್ಕಾಗಿ ದೆಹಲಿಯಿಂದ ವೀಕ್ಷಕರಾಗಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಕಿಶನ್ ರೆಡ್ಡಿ ಬಂದಿದ್ದರು. ದೆಹಲಿ ಬಿಡುವಾಗ ಪಕ್ಷದ ಹೈಕಮಾಂಡ್ ನಾಯಕರು ಅರವಿಂದ ಬೆಲ್ಲದ್ ಹೆಸರು ಸೂಚಿಸಿ ಕಳುಹಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ, ಆರ್ಎಸ್ಎಸ್ ಪ್ರಮುಖರು ಕೂಡ ಅರವಿಂದ ಬೆಲ್ಲದ್ರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲು ಸೂಚನೆ ನೀಡಿದ್ದರು ಎಂಬ ಮಾಹಿತಿಯಿದೆ.
ಹೀಗಾಗಿಯೇ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುವಾಗಲೂ ಅರವಿಂದ ಬೆಲ್ಲದ್ ಅತ್ಯಂತ ಆತ್ಮವಿಶ್ವಾಸದಿಂದಲೇ ಭಾಗವಹಿಸಿದ್ದರು ಎನ್ನಲಾಗುತ್ತಿದೆ.
ಅಮಿತ್ ಶಾಗೆ ದೂರವಾಣಿ ಕರೆ ಮಾಡಿದ್ದ ಅರುಣ್ ಸಿಂಗ್
ಆದರೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಪದಚ್ಯುತಗೊಳಿಸಿರುವುದರಿಂದ ವೀರಶೈವ ಲಿಂಗಾಯತ ಸಮುದಾಯ ಸ್ವಾಾಮೀಜಿಗಳು ಬಹಿರಂಗವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೂ ಆ ಸಮುದಾಯಕ್ಕೆ ಯಡಿಯೂರಪ್ಪ ಮೇಲೆ ಗೌರವದ ಜೊತೆಗೆ ರಾಜ್ಯದ ಪ್ರಸ್ತುತ ಪರಿಸ್ಥಿತಿಯಲ್ಲಿ ಯಡಿಯೂರಪ್ಪರನ್ನು ಎದುರು ಹಾಕಿಕೊಂಡು ಹೊಸ ನಾಯಕನ ಆಯ್ಕೆ ಮಾಡಿದರೆ, ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅಲ್ಲದೇ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಆ ಬೆಳವಣಿಗೆಯ ಲಾಭ ಪಡೆಯುವ ಪ್ರಯತ್ನ ನಡೆಸಬಹುದು ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಅದರೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ನಾಯಕನ ಆಯ್ಕೆ ಮಾಡುವುದು ಸೂಕ್ತ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು ಎನ್ನಲಾಗುತ್ತಿದೆ.
ಪ್ರಧಾನಿ ಮೋದಿ ಜೊತೆಗೆ ಚರ್ಚಿಸಿ ಅಂತಿಮಗೊಳಿಸಿದ ಶಾ?
ಬೆಂಗಳೂರಿನಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಆದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ, ಮಾಜಿ ಸಿಎಂ ಯಡಿಯೂರಪ್ಪ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸೂಚಿಸಿದವರಿಗೆ ಮುಖ್ಯಮಂತ್ರಿ ಪಟ್ಟ ನೀಡಲು ಮನವರಿಕೆ ಮಾಡಿಕೊಟ್ಟಿದ್ದರು. ಆ ನಂತರ ಅಂದು ಸಂಜೆ 4 ಗಂಟೆ ಹೊತ್ತಿಗೆ ಇಡೀ ರಾಜಕೀಯನ ಚಿತ್ರಣವೇ ಬದಲಾಯಿತು. ರಾಜ್ಯಕ್ಕೆೆ ಆಗಮಿಸಿದ ವೀಕ್ಷಕರು ಯಡಿಯೂರಪ್ಪರ ನಿವಾಸ ಕಾವೇರಿಗೆ ತೆರಳಿ ಅಲ್ಲಿಯೇ ತಾವು ಸೂಚಿಸಿದವರಿಗೆ ಮುಖ್ಯಮಂತ್ರಿ ಮಾಡಲು ಪಕ್ಷ ಸಿದ್ದವಿದೆ ಎಂದು ಹೈಕಮಾಂಡ್ ಸಂದೇಶ ತಿಳಿಸಿದ್ದರು ಎನ್ನಲಾಗಿದೆ.
ಕೇಂದ್ರದಿಂದ ಆಗಮಿಸಿದ ವೀಕ್ಷಕರು ಆಗತಾನೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಆಗಲೂ ಕೂಡ ಯಡಿಯೂರಪ್ಪ ಅವರು, ನಿಮಗೆ ಬೇಕಾದವರನ್ನು ಆಯ್ಕೆ ಮಾಡಿ ಎಂದು ಬೇಸರದಿಂದಲೇ ಹೇಳಿದ್ದರು. ಆದರೆ, ತಮ್ಮ ಆಯ್ಕೆಯನ್ನು ಒಪ್ಪಿಕೊಳ್ಳುವುದಾದರೆ, ತಾವು ಮೊದಲೇ ಸೂಚಿಸಿರುವಂತೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದಿದ್ದರು ಎಂದು ತಿಳಿದು ಬಂದಿದೆ.
ಕೊನೆಗೆ ಬಿಜೆಪಿ ಹೈಕಮಾಂಡ್ ಬಸವರಾಜ್ ಬೊಮ್ಮಾಯಿ ಹೆಸರನ್ನು ಯಡಿಯೂರಪ್ಪ ಅವರಿಂದಲೇ ಘೋಷಣೆ ಮಾಡಿಸಿ ಎಂದು ಸೂಚನೆ ಕೊಟ್ಟಿತ್ತು. ಜೊತೆಗೆ ರಾಜ್ಯದಲ್ಲಿ ಯಡಿಯೂರಪ್ಪರ ಪದಚ್ಯುತಿಯಿಂದ ಭವಿಷ್ಯದಲ್ಲಿ ಪಕ್ಷದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮದಿಂದ ಪಾರಾಗುವ ಪ್ರಯತ್ನ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರಿಗೆ ಈ ಮುಂದಿದೆ ಸೂಚನೆ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಸಿಎಂ ಬೊಮ್ಮಾಯಿಗೆ ವರಿಷ್ಠರು ಕೊಟ್ಟ ಸೂಚನೆ ಏನು?
ನೂತನ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೈಕಮಾಂಡ್ ಕೊಟ್ಟಿದ್ದ ಸೂಚನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರಿಗೆ ಕೊಟ್ಟಿದ್ದರು. ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳಿಗೆ ಪಕ್ಷದ ವರಿಷ್ಠರು ಅದೇ ಸೂಚನೆಯನ್ನು ನೇರವಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ಬಳಿಕ ಮತ್ತೊಂದು ಸವಾಲು ಸಿಎಂ ಬೊಮ್ಮಾಯಿರಿಗೆ ಎದುರಾಗಲಿದೆ ಎನ್ನಲಾಗಿದೆ.
ಯಾವುದೇ ಒತ್ತಡಗಳಿಗೆ ಒಳಗಾಗದೇ ಒಳಗಾಗದೇ ಕೆಲಸ ಮಾಡುವಂತೆ ಪಕ್ಷದ ವರಿಷ್ಠರು ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. ನಿಮ್ಮ ಬಗ್ಗೆ ಕೇಳಿ ಬಂದಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಶ್ಯಾಡೊ ಇದೆ ಎಂಬ ಮಾತುಗಳಿಗೆ ಅವಕಾಶ ಆಗದಂತೆ ಕೆಲಸ ಮಾಡಿ ಎಂದು ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಧ್ಯೆ ಕಂದಕವನ್ನುಂಟು ಮಾಡಬಹುದು ಎನ್ನಲಾಗುತ್ತಿದೆ.
Recommended Video