'ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತಾಗಿದೆ ಯಡಿಯೂರಪ್ಪ ಸ್ಥಿತಿ!'
ಬೆಂಗಳೂರು, ಜೂ. 16: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರ ಸಿಎಂ ಯಡಿಯೂರಪ್ಪ ಅವರನ್ನು ಆಡಿಕೊಳ್ಳುವಂತೆ ಮಾಡಿವೆ. ರಾಜ್ಯ ಕೋರ್ ಕಮಿಟಿ ಸಭೆ ಮಾಡಿ ರಾಜ್ಯಸಭಾ ಚುನಾವಣೆಗೆ ಸಿಎಂ ಯಡಿಯೂರಪ್ಪ ಅವರು ಅಭ್ಯರ್ಥಿಗಳ ಪಟ್ಟಿ ಕಳುಹಿಸಿದ್ದರು. ಆದರೆ ಏಕಾಏಕಿ ಅಚ್ಚರಿಯ ಅಭ್ಯರ್ಥಿಗಳನ್ನು ಬಿಜೆಪಿ ಹೈಕಮಾಂಡ್ ಬದಲಾಯಿಸಿತ್ತು. ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ನೆಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಳುಹಿಸಿದ್ದ ಪಟ್ಟಿಯನ್ನು ತಿರಸ್ಕಾರ ಮಾಡಿತ್ತು. ಬೇರೆಯದ್ದೆ ಹೆಸರುಗಳನ್ನು ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಂಡ್ ಘೋಷಣೆ ಮಾಡಿತ್ತು.
ಇದೀಗ ವಿಧಾನ ಪರಿಷತ್ ಚುನಾವಣಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರಕ್ಕೆ ರಾಜ್ಯ ಬಿಜೆಪಿ ಘಟಕ ಕಳುಹಿಸಿದೆ. ಇದೇ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ, ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ದೇವರು ಪಾಪ ಯಡಿಯೂರಪ್ಪಗೆ ಒಳ್ಳೆಯದು ಮಾಡಲಿ ಎನ್ನುವ ಮೂಲಕ ಬಿಜೆಪಿ ಹೈಕಮಾಂಡ್ನ್ನು ಲೇವಡಿ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ: ಇಲ್ಲಿದೆ BJP ಅಭ್ಯರ್ಥಿಗಳ ಪಟ್ಟಿ!
ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಕಡಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಎಂ. ಇಬ್ರಾಹಿಂ ಅವರು ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಲ್ಲಿಂದ ಮುಖ್ಯಮಂತ್ರಿಗಳು ಕಳುಹಿಸುವ ಹೆಸರು ಪ್ರಕಟಿಸುವುದು ಸತ್ಸಂಪ್ರದಾಯ. ಆದರೆ ಪಾಪ ಯಡಿಯೂರಪ್ಪ ಕಳುಹಿಸಿದ್ದ ಹೆಸರುಗಳನ್ನು ಬಿಟ್ಟು ಬೇರೆಯವರನ್ನು ನೇಮಕ ಮಾಡಿದ್ದಾರೆ.
ಕೋವಿಡ್ ಕಂಟ್ರೋಲ್ ಮಾಡಲು ಸಿಎಂ ಯಡಿಯೂರಪ್ಪ ತುಂಬಾ ಓಡಾಡ್ತಿದ್ದಾರೆ. ಆದರೂ ಬಿಜೆಪಿ ಹೈಕಮಾಂಡ್ ಈಗ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಯಡಿಯೂರಪ್ಪ ಅವರೊಂದಿಗೆ ನಡೆದು ಕೊಳ್ಳುತ್ತಿದೆ. ಯಡಿಯೂರಪ್ಪ ಅವರು ಸಿಎಂ ಆಗಿ ಮೂರು ವರ್ಷ ಅವಧಿ ಮುಗಿಸಲಿ ಎಂದು ಮೇಲ್ಮನೆ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿಕೆ ಕೊಟ್ಟಿದ್ದಾರೆ.