ಗುಜರಾತ್ ಮಾದರಿಯಲ್ಲಿ ಯಡಿಯೂರಪ್ಪ ಬದಲಾವಣೆಗೆ ಮುಂದಾದ ಬಿಜೆಪಿ ಹೈಕಮಾಂಡ್?
ಬೆಂಗಳೂರು, ಜು. 22: ಇನ್ನೇನು ಅಂದುಕೊಂಡಂತೆ ನಾಯಕತ್ವ ಬದಲಾವಣೆ ಆಯಿತು ಎಂದುಕೊಂಡಿದ್ದ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಗಳಿಗೆ ಹೈಕಮಾಂಡ್ ನಿರಾಸೆಯನ್ನುಂಟು ಮಾಡಿದೆ ಎಂಬ ಮಾಹಿತಿ ಬಂದಿದೆ. ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂಬ ಬಿಜೆಪಿಯಲ್ಲಿನ ಕೂಗು ಇವತ್ತು ನಿನ್ನೆಯದಲ್ಲ. ಅದು ಶುರುವಾಗಿ ಅದಾಗಲೇ ವರ್ಷವಾಗುತ್ತ ಬಂದಿದೆ. ರಾಜ್ಯ ಬಿಜೆಪಿ ನಾಯಕತ್ವವನ್ನು ಯಾಕೆ ಬದಲಾವಣೆ ಮಾಡಬೇಕು ಎಂಬುದಕ್ಕೆ ರಾಜ್ಯ ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿ ನಾಯಕರೇ ಅನೇಕ ಬಾರಿ ಬಹಿರಂಗ ಮಾತುಗಳ ಮೂಲಕ ವಿವರಿಸಿದ್ದಾರೆ.
Recommended Video
ಆದರೆ ಇದೀಗ ಹೈಕಮಾಂಡ್ ತೆಗೆದುಕೊಂಡಿರುವ ತೀರ್ಮಾನದಿಂದ ರಾಜ್ಯ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಿ ಬಣಕ್ಕೂ ನಿರಾಸೆಯಾಗಿದೆ ಎಂದು ತಿಳಿದು ಬಂದಿದೆ. ಅದಕ್ಕೆ ಕಾರಣವಾಗಿರುವುದು ಬಿಜೆಪಿ ಹೈಕಮಾಂಡ್ ನಿರ್ಧಾರ. ಗುಜರಾತ್ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬದಲಾವಣೆ ಮಾಡಲು ಬಿಜೆಪಿ ಹೈಕಮಾಂಡ್, ಅದರಲ್ಲಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಗುಜರಾತ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯನ್ನು ಹೇಗೆ ಮಾಡಲಾಗಿತ್ತು? ಅದೇ ರೀತಿ ಇಲ್ಲಿಯೂ ಹೈಕಮಾಂಡ್ ನಿರ್ಧಾರದಂತೆ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಸಿಎಂ ಆಗಲು ಬೇಕಾಗಿರುವ ಅರ್ಹತೆಗಳು ಏನು? ಮುಂದಿದೆ ಸಂಪೂರ್ಣ ಮಾಹಿತಿ.
ಸಿಎಂ ನೇಮಕದಲ್ಲೂ ಗುಜರಾತ್ ಮಾದರಿ?
ಹೌದು, ದೇಶದಲ್ಲಿ ಎಲ್ಲದಕ್ಕೂ ಗುಜರಾತ್ ಮಾದರಿ ಎಂದು ಸಮರ್ಥಿಸಿಕೊಳ್ಳುವ ಬಿಜೆಪಿ ನಾಯಕರು, ಇದೀಗ ಸಿಎಂ ಬದಲಾವಣೆ ಹಾಗೂ ಹೊಸ ಸಿಎಂ ನೇಮಕದಲ್ಲಿಯೂ ಅದನ್ನೆ ಅನುಸರಿಸುತ್ತಾರಂತೆ. ಹೀಗಾಗಿಯೇ ಕಳೆದೆರಡು ದಿನಗಳಿಂದ ಯಡಿಯೂರಪ್ಪ ಅವರ ವಿರೋಧಿ ಬಣವೂ ನಿರಾಸೆಗೊಂಡಿದೆ ಎನ್ನಲಾಗುತ್ತಿದೆ. ಅದಕ್ಕೆ ಕಾರಣ ಗುಜರಾತ್ನಂತಯೇ ಇಲ್ಲಿಯೂ ಸಿಎಂ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧಾರ ಮಾಡಿರುವುದು.
ವಯಸ್ಸಿನ ಆಧಾರದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿ ಬೆನ್ ಪಟೇಲ್ ಅವರನ್ನು ಕೆಳಗಿಳಿಸಲಾಗಿತ್ತು. ಆನಂದಿ ಬೆನ್ ಅವರು ಗುಜರಾತ್ ರಾಜ್ಯದ ಪ್ರಬಲ ಪಟೇಲ್ ಸಮುದಾಯಕ್ಕೆ ಸೇರಿದವರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರನ್ನು ಬದಲಾವಣೆ ಮಾಡಿ ನೂತನ ಮುಖ್ಯಮಂತ್ರಿಯನ್ನು ಹೈಕಮಾಂಡ್ ನೇಮಕ ಮಾಡಿತ್ತು. ಅದೇ ರೀತಿ ಕರ್ನಾಟಕದಲ್ಲಿಯೂ ಬಿಜೆಪಿ ಹೈಕಮಾಂಡ್ ಈಗ ಹೊಸ ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಿದೆ. ಗುಜರಾತ್ನಲ್ಲಿ ಪ್ರಬಲ ಪಟೇಲ್ ಸಮುದಾಯದ ಆನಂದಿ ಬೆನ್ ಅವರ ಬದಲಿಗೆ ಯಾವ ಸಮುದಾಯದವರನ್ನು ನೇಮಕ ಮಾಡಲಾಗಿತ್ತು ಎಂಬ ಮಾಹಿತಿ ಮುಂದಿದೆ.
ಸಣ್ಣ ಸಮುದಾಯಕ್ಕೆ ಹೈಕಮಾಂಡ್ ಮಣೆ?
ಆನಂದಿ ಬೆನ್ ಅವರ ಉತ್ತರಾಧಿಕಾರಿಯಾಗಿ ಮೊದಲು ನಿತಿನ್ ಪಟೇಲ್ ಅವರನ್ನು ಮೊದಲು ಆಯ್ಕೆ ಮಾಡಲಾಗಿತ್ತು. ಇನ್ನೇನು ನಿತಿನ್ ಪಟೇಲ್ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾದರು ಎಂಬ ಸ್ಥಿತಿಯಿತ್ತು. ಆದರೆ ದಿಢೀರ್ ನಿರ್ಧಾರ ಬದಲಿಸಿದ ಬಿಜೆಪಿ ಹೈಕಮಾಂಡ್ ನಿತಿನ್ ಪಟೇಲ್ ಬದಲಿಗೆ ವಿಜಯ ರೂಪಾಣಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿತು. ಪಟೇಲ್ ಸಮುದಾಯದ ಒತ್ತಡದ ಮಧ್ಯೆಯೂ ಅಲ್ಪಸಂಖ್ಯಾತ ಜೈನ ಸಮುದಾಯದ ವಿಜಯ ರೂಪಾಣಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿತು.
ಗುಜರಾತ್ನಲ್ಲಿ ಜೈನ ಸಮುದಾಯದ ಜನಸಂಖ್ಯೆ ಇರುವುದು ಕೇವಲ ಶೇಕಡಾ 1.5ರಷ್ಟು ಮಾತ್ರ. ಅರಂತೆಯೆ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ನೇಮಕ ಮಾಡಲಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿದೆ. ರಾಜಕೀಯ ಮಾಡಲು ಸಮುದಾಯದ ಬೆಂಬಲ ತೀರಾ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಹೈಕಮಾಂಟ್ ಬಂದಿದೆ. ಆದರೆ ಹೈಕಮಾಂಡ್ನ ಈ ನಿರ್ಧಾರ ಯಡಿಯೂರಪ್ಪ ಅವರ ವಿರೋಧಿಗಳ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಯಾವ ಸಮುದಾಯಕ್ಕೆ ಸಿಗಲಿದೆ ಮುಖ್ಯಮಂತ್ರಿ ಸ್ಥಾನ?
ಗುಜರಾತ್ನಲ್ಲಿ ಪ್ರಬಲ ಸಮುದಾಯವನ್ನು ನಿರ್ಲಕ್ಷಿಸಿ, ಸಣ್ಣ ಸಮುದಾಯಕ್ಕೆ ಸೇರಿದ ವಿಜಯ ರೂಪಾಣಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರೂ ಕೂಡ ಬಿಜೆಪಿ ಅಲ್ಲಿನ ಪ್ರಬಲ ಪಟೇಲ್ ಸಮುದಾಯದ ಬೆಂಬಲ ಉಳಿಸಿಕೊಳ್ಳಲು ತಕ್ಕ ಮಟ್ಟಿಗೆ ಸಫಲವಾಗಿತ್ತು. ಅದಕ್ಕೆ ಕಾರಣ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು.
ಗುಜರಾತ್ನಂತೆಯೆ ಕರ್ನಾಟಕದಲ್ಲಿ ಜನಸಂಖ್ಯೆ ಆಧಾರದಲ್ಲಿ ಸಣ್ಣ ಸಮುದಾಯಕ್ಕೆ ಮನ್ನಣೆ ಸಿಕ್ಕಿರುವ ಮಾಹಿತಿ ದಟ್ಟವಾಗಿದೆ. ಹೀಗಾಗಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅಥವಾ ಕರ್ನಾಟಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಂದಿನ ಮುಖ್ಯಮಂತ್ರಿ ಆಗಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ಹಾಕಿದೆಯಂತೆ. ಆದರಿಂದ ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತ ಬಂದಿದ್ದ ಬಿಜೆಪಿಯಲ್ಲಿನ ಲಿಂಗಾಯತ ಸಮುದಾಯದ ನಾಯಕರಿಗೆ ನಿರಾಸೆಯಾಗಿದೆ ಎನ್ನಲಾಗುತ್ತಿದೆ. ಗುಜರಾತ್ನಂತೆಯೆ ಕರ್ನಾಟಕದಲ್ಲಿಯೂ ಯಾವುದೇ ಒಂದು ಸಮುದಾಯಕ್ಕೆ ಮಹತ್ವ ಕೊಡದಿರಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ಯಡಿಯೂರಪ್ಪ ವಿರೋಧಿಗಳೂ ಕೂಡ ಈಗ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ಸಮುದಾಯದ ಓಲೈಕೆ ಸಲ್ಲ!
ಬಿಜೆಪಿ ಹೈಕಮಾಂಡ್ ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಈ ತೀರ್ಮಾನಕ್ಕೆ ಬಂದಿದೆ ಎಂಬ ವಿವರಣೆಯಿದೆ. ಒಂದು ರಾಷ್ಟ್ರೀಯ ಪಕ್ಷ ಯಾವುದೇ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಹೀಗಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ವಿರೋಧವನ್ನು ತಣಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಗುಜರಾತ್ ಮಾದರಿ ನೇಮಕ ತೀರ್ಮಾನವನ್ನು ಗಮನಿಸಿದ ಬಳಿಕ, ಬಿಜೆಪಿಯಲ್ಲಿನ ಸಿಎಂ ಯಡಿಯೂರಪ್ಪ ವಿರೋಧಿ ಬಣದ ನಾಯಕರೂ ಚಿಂತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರನ್ನು ಕೆಳಗೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ ಬಳಿಕ ಒಂದೊಮ್ಮೆ ಬೇರೆ ಸಮುದಾಯಕ್ಕೆ ಸಿಎಂ ಪಟ್ಟ ಕೊಟ್ಟಲ್ಲಿ ಅದರ ಪರಿಣಾಮವನ್ನು ನಾವು ಬಣ ಎದುರಿಸಬೇಕಾಗುತ್ತದೆ. ಒಂದು ಕಡೆಗೆ ಅಧಿಕಾರವೂ ಇಲ್ಲ, ಮತ್ತೊಂದೆಡೆ ತಮ್ಮದೇ ಸಮುದಾಯ ನಾಯಕನಿಗೆ ಅಧಿಕಾರ ತಪ್ಪಿಸಿದ ಆರೋಪವನ್ನೂ ಎದುರಿಸಬೇಕು. ಹೀಗಾಗಿ ಮುಂದೇನು ಎಂಬ ಆತಂಕ ರಾಜ್ಯ ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿ ಬಣಕ್ಕೆ ಎದುರಾಗಿದೆ ಎಂಬ ಮಾಹಿತಿ ಬಂದಿದೆ.
ಬಿಜೆಪಿಗಿದೆ ಲಿಂಗಾಯತ ಸಮುದಾಯದ ಬೆಂಬಲ
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎರಡು ಬಾರಿ ಅಸ್ತಿತ್ವಕ್ಕೆ ಬರಲು ಲಿಂಗಾಯತ ಸಮುದಾಯದ ಬೆಂಬಲ ಕಾರಣ ಎಂಬ ವಿಚಾರ ಬಿಜೆಪಿ ಹೈಕಮಾಂಡ್ಗೆ ಗೊತ್ತಿರದ ಸಂಗತಿ ಏನಲ್ಲ. ಹಾಗಂತ ರಾಷ್ಟ್ರೀಯ ಪಕ್ಷವಾಗಿ ಒಂದೇ ಸಮುದಾಯಕ್ಕೆ ಮಣೆ ಹಾಕುವುದಕ್ಕೆ ಕೂಡ ಬಿಜೆಪಿ ಹೈಕಮಾಂಡ್ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಬಂದಿದ್ದನ್ನು ಎದುರಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದು, ಅಚ್ಚರಿಯ ಮುಖ್ಯಮಂತ್ರಿಯನ್ನು ನೇಮಕ ಮಾಡಲಾಗುತ್ತಿದೆ ಎನ್ನಲಾಗಿದೆ.
ಹೀಗಾಗಿ ಸ್ಥಳೀಯ ನಾಯಕತ್ವದ ಬದಲು ರಾಷ್ಟ್ರೀಯ ನಾಯಕತ್ವದಿಂದಲೇ ಕರ್ನಾಟಕದಲ್ಲಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿಯನ್ನು ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ. ಆದರಿಂದ ಲಿಂಗಾಯತ, ಒಕ್ಕಲಿಗ ಅಥವಾ ಕುರುಬ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಮಾಡುವ ಸಾಧ್ಯತೆಗಳು ತೀರಾ ಕಡಿಮೆ ಎಂಬ ಮಾಹಿತಿ ಬಂದಿದೆ.
ಗುಜರಾತ್ ಮಾದರಿ ರಾಜ್ಯದಲ್ಲಿ ಸಫಲವಾಗುತ್ತಾ?
ಗುಜರಾತ್ ಮಾದರಿಯ ರಾಜಕೀಯವನ್ನು ಕರ್ನಾಟಕದಲ್ಲಿ ಪ್ರಯೋಗ ಮಾಡುವುದರಿಂದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊಡುಗೆಯೂ ಸಾಕಷ್ಟಿದೆ ಎಂಬುದು ಗಮನಿಸಬೇಕಾದ ಅಂಶ. ಹೀಗಾಗಿ ಕರ್ನಾಟಕಕ್ಕೆ ತೆಗೆದುಕೊಳ್ಳು ನಿರ್ಣಯದಿಂದ ದಕ್ಷಿಣದ ಇತರ ರಾಜ್ಯಗಳಾದ ತಮಿಳುನಾಡು, ಆಂದ್ರ, ತೆಲಂಗಾಣ, ಕೇರಳ ಸೇರಿದಂತೆ ಅನೇಕ ರಾಜ್ಯಗಳ ಮೇಲೆ ಪರಿಣಾಮ ಬೀರುತ್ತದೆ.
ಹೀಗಾಗಿ ಈಗಾಗಲೇ ಕರ್ನಾಟಕ ಪಕ್ಕದ ಮಹಾರಾಷ್ಟ್ರದಲ್ಲಿಯೂ ತನ್ನದೆ ತಪ್ಪುಗಳಿಂದ ಬಿಜೆಪಿ ಅಧಿಕಾರವಂಚಿತವಾಗಿದೆ. ಜೊತೆಗೆ 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಬಳಿಕ 2024ರಲ್ಲಿ ಲೋಕಸಭಾ ಚುನಾವಣೆಯೂ ಎದುರಾಗಲಿದೆ. ಕೊರೊನಾ ವೈರಸ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ತನ್ನ ಜನಪ್ರೀಯತೆ ಕಳೆದುಕೊಂಡಿರುವುದು ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಗುಜರಾತ್ ಮಾದರಿ ಅಳವಡಿಕೆ ಫಲಿತಾಂಶಕ್ಕಾಗಿ 2023ರ ವಿಧಾನಸಭಾ ಚುನಾವಣೆ ಫಲಿತಾಂಶದ ವರೆಗೆ ಕಾಯಲೇಬೇಕು!