ಕೋರ್ಟ್ ಮೊರೆ ಹೋಗುತ್ತಿರುವ ಸಚಿವರಿಗೆ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ!
ಬೆಂಗಳೂರು, ಮಾ. 06: ರಾಜ್ಯ ಬಿಜೆಪಿ ಸರ್ಕಾರದ ಡಜನ್ಗಟ್ಟಲೇ ಸಚಿವರು ಏಕಾಏಕಿ ಕೋರ್ಟ್ ಮೊರೆ ಹೋಗುತ್ತಿರುವುದಕ್ಕೆ ಬಿಜೆಪಿ ಹೈಕಮಾಂಡ್ ಗರಂ ಆಗಿದೆ ಎಂಬ ಮಾಹಿತಿ ಬಂದಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡುಗಡೆ ಬಳಿದ ರಾಜ್ಯ ಬಿಜೆಪಿ ಸರ್ಕಾರದಲ್ಲಿನ ವಲಸೆ ಸಚಿವರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಸಂಪುಟದ 6 ಸಚಿವರು ತಮ್ಮ ವಿರುದ್ಧ ಯಾವುದೇ ಅವಹೇಳನಕಾರಿ ವಿಚಾರಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡದಂತೆ ತಡೆ ಕೋರಿ ನಿನ್ನೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಜೊತೆಗೆ ಇವತ್ತು ಮುಂಬೈ ಮಿತ್ರ ಮಂಡಳಿಯ ಎಲ್ಲ ಸಚಿವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸ್ವತಃ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾಹಿತಿ ಕೊಟ್ಟಿದ್ದು, ನಾವು ಭಯದಿಂದ ಕೋರ್ಟ್ ಮೊರೆ ಹೋಗಿಲ್ಲ. ಆದರೆ ಇಷ್ಟು ವರ್ಷ ಸಂಪಾದಿಸಿರುವ ಗೌರವವನ್ನು ತಂತ್ರಜ್ಞಾನ ಉಪಯೋಗಿಸಿಕೊಂಡು ಹಾಳು ಮಾಡುವ ಸಾಧ್ಯತೆಯಿದೆ. ಹಾಗೆ ಆಗದಂತೆ ತಡೆಯಲು ಕೋರ್ಟ್ ಮೊರೆ ಹೋಗಿದ್ದೇವೆ. ಇಂದು ಇನ್ನಷ್ಟು ಸಚಿವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಆದರೆ ಏಕಾಏಕಿ ಎಲ್ಲ ವಲಸೆ ಸಚಿವರು ಕೋರ್ಟ್ಗೆ ಅರ್ಜಿ ಹಾಕಿರುವುದು ಬಿಜೆಪಿ ನಾಯಕರನ್ನು ಮುಜುಗುರಕ್ಕೀಡು ಮಾಡಿದೆ. ಇದೇ ವಿಚಾರದ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ ಕೊಟ್ಟಿದೆ. ಏನದು ಹೈಕಮಾಂಡ್ ಸೂಚನೆ?
ಸಿಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್
ಸಿಡಿ ಪ್ರಕರಣದಲ್ಲಿ ಬಿಜೆಪಿ ಹೈಕಮಾಂಡ್ ಗಮನಿಸಿದ ಕಾರಣ ಕೂಡಲೇ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆಯುವ ಕೆಲಸ ಆಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರ ವಿಚಾರದಲ್ಲಿ ಹೈಕಮಾಂಡ್ ನಮ್ಮಲ್ಲಿ ವರದಿ ಕೇಳಿದ್ದರು.
ಅಂದು ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿಗಳು ನಮ್ಮಲ್ಲಿ ಮಾಹಿತಿ ಕೇಳಿದ್ದರು. ಮಾಧ್ಯಮ ವರದಿ ಆಧಾರಿತವಾಗಿ ನಾವು ವರದಿ ಕೊಟ್ಟಿದ್ದೆವು. ಇಂತಹ ಆರೋಪಗಳು ಎದುರಾದಾಗ ಮಂತ್ರಿಗಳು ತನಿಖೆಗೆ ಸಹಕಾರ ನೀಡಬೇಕು. ಕೇಂದ್ರದ ಸೂಚನೆಯಂತೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ ಎಂದು ಡಿವಿಎಸ್ ಸ್ಪಷ್ಟವಾಗಿ ಹೇಳಿದ್ದಾರೆ.
ಅಸಮಾಧಾನ ವ್ಯಕ್ತಪಡಿಸಿದ ಸದಾನಂದಗೌಡ
ಆರು ಜನ ಸಚಿವರು ಏಕಾಏಕಿ ಕೋರ್ಟ್ ಮೊರೆ ಹೋಗಿರುವ ವಿಚಾರವನ್ನು ಬಿಜೆಪಿ ನಾಯಕರನ್ನು ಮುಜುಗುರಕ್ಕೀಡು ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಸಚಿವ ಸದಾನಂದಗೌಡ ಅವರು, ಅವರ ಭಾವನೆಗಳನ್ನು ವ್ಯಕ್ತಪಡಿಸಲು ಹವಲು ಜನರು ನ್ಯಾಯಾಲಯಕ್ಕೆ ಹೋಗುತ್ತಾರೆ. ಅದಕ್ಕೆ ಬೇಡ ಎಂದು ನಾವು ಮಧ್ಯಪ್ರವೇಶ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ಪ್ರತಿಯೊಬ್ಬ
ವ್ಯಕ್ತಿಗೆ
ಕೂಡಾ
ತನ್ನ
ಭವಿಷ್ಯದ
ಯೋಚನೆ
ಇರುತ್ತದೆ,
ಅದನ್ನು
ನೋಡಿಕೊಂಡು
ಅವರು
ಹೆಜ್ಜೆ
ಇಡುತ್ತಾರೆ.
ಅದು
ಅವರವರಿಗೆ
ಬಿಟ್ಟಿದ್ದು.
ಆದರೆ
ಅನಾವಶ್ಯಕವಾಗಿ
ಕೋರ್ಟ್ಗೆ
ಹೋಗುವುದು
ಒಳ್ಳೆಯದಲ್ಲ.
ಕೋರ್ಟ್ಗೆ
ಹೋಗಿ
ಮತ್ತಷ್ಟು
ಗೋಜಲಾಗಿಸುವುದು
ಒಳ್ಳೆಯ
ಬೆಳವಣಿಗೆ
ಅಲ್ಲ.
ಸಚಿವರ
ನಡೆಯಿಂದ
ಸ್ವಲ್ಪ
ಮಟ್ಟಿಗೆ
ಮುಜುಗರ
ಇದೆ,
ಇಲ್ಲಾ
ಅಂತಾ
ಹೇಳುತ್ತಿಲ್ಲ
ಎಂದು
ಸಚಿವರು
ಕೋರ್ಟ್ಗೆ
ಹೋಗುತ್ತಿರುವುದಕ್ಕೆ
ಸದಾನಂದಗೌಡ
ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ಹಾಗಂತ ಎಲ್ಲವನ್ನೂ ಸೃಷ್ಟಿ ಮಾಡಿದ್ದಾರೆ ಎಂದಲ್ಲ!
ರಾಜಕೀಯ ಡೊಂಬರಾಟದಲ್ಲಿ ಸಿಡಿಗಳು ತನ್ನದೇ ಪ್ರಭಾವ ಬೀರುವುದನ್ನು ನೋಡುತ್ತಿದ್ದೇವೆ. ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಅದರಿಂದ ಏನು ಬೇಕಾದರೂ ಸೃಷ್ಟಿ ಮಾಡಬಹುದು. ಹಾಗಂತ ಈಗ ಆಗಿದ್ದೆಲ್ಲವೂ ಮ್ಯಾನುಪ್ಯುಲೇಟ್ ಎಂದು ನಾನು ಹೇಳುತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರ ಬರಲಿದೆ. ಜೊತೆಗೆ ನೈತಿಕತೆಗೆ ಪ್ರಾಮುಖ್ಯತೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ನೈತಿಕತೆಗೆ ತೊಂದರೆ ಬಂದಾಗ ಸಾಮಾಜಿಕ ವ್ಯವಸ್ಥೆ ಕೂಡಾ ಅಧಃಪತನದ ಅಂಚಿಗೆ ಹೋಗುತ್ತದೆ. ಇಂತಹ ವಿಚಾರ ಬಂದಾಗ ರಾಜಕೀಯ ಲಾಭ ಪಡೆಯುವುದರಿಂದ ಒಳ್ಳೆಯದಾಗುವುದಿಲ್ಲ, ಅದರಿಂದ ಆಡಳಿತಕ್ಕೂ ಇದು ತೊಂದರೆ ಆಗುತ್ತದೆ ಎಂದು ಸದಾನಂದಗೌಡ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
Recommended Video
ಕೋರ್ಟ್ ಬಾಗಿಲು ತಟ್ಟುತ್ತಿರುವವರಿಗೆ ಹೈಕಮಾಂಡ್ ಎಚ್ಚರಿಕೆ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಳಿಕ ಡಜನ್ ಗಟ್ಟಲೇ ಸಚಿವರು ಕೋರ್ಟ್ ಮೊರೆ ಹೋಗುತ್ತಿರುವುದು ಬಿಜೆಪಿ ನಾಯಕರಿಗೆ ಮುಜುಗುರವನ್ನುಂಟು ಮಾಡಿದೆ. ಈ ವಿಚಾರ ಬಿಜೆಪಿ ಹೈಕಮಾಂಡ್ ಗಮನಕ್ಕೂ ಬಂದಿದೆ. ಹೀಗಾಗಿ ರಾಜ್ಯ ಬಿಜೆಪಿ ಘಟಕದಿಂದ ಈ ಬಗ್ಗೆ ಕೇಂದ್ರದ ಬಿಜೆಪಿ ನಾಯಕರು ವರದಿ ಕೇಳಿದ್ದು, ವರದಿಯನ್ನು ಸಲ್ಲಿಸಲಾಗಿದೆ ಎಂಬ ಮಾಹಿತಿಯಿದೆ.
ಒಬ್ಬರಾದ ಮೇಲೊಬ್ಬರು ಕೋರ್ಟ್ಗೆ ಅರ್ಜಿ ಸಲ್ಲಿಸುತ್ತಿರುವುದು ರಾಜ್ಯದ ಜನರಲ್ಲಿ ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಜೊತೆಗೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮೇಲೂ ಈ ವಿಚಾರ ಪ್ರಭಾವ ಬೀರಲಿದೆ. ಹೀಗಾಗಿ ಈ ವಿಚಾರದಲ್ಲಿ ಬಿಜೆಪಿಗೆ ಮುಜುಗುರವಾಗುವಂತೆ ನಡೆದುಕೊಂಡಲ್ಲಿ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ ಎಂಬ ವರದಿಗಳಿವೆ.
ಏನೂ ಇಲ್ಲದಿದ್ದರೆ ಹೀಗೇಕೆ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ ಎಂಬ ಸಂಶಯ ಜನರಲ್ಲಿ ಮೂಡುವುದು ಸಹಜ. ಅದರ ನೇರ ಪರಿಣಾಮ ಪಕ್ಷದ ಮೇಲಾಗುತ್ತದೆ. ಹೀಗಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ವರದಿ ನೀಡುವಂತೆ ರಾಜ್ಯ ಬಿಜೆಪಿ ಘಟಕಕ್ಕೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎಂಬ ಮಾಹಿತಿ ಬಂದಿದೆ.