ರಾಜ್ಯ ಸಂಪುಟ ಸಂಕಟ: ಮೂವರು ಪ್ರಭಾವಿ ಸಚಿವರಿಗೆ ಹೈಕಮಾಂಡ್ ಶಾಕ್!
ಬೆಂಗಳೂರು, ಸೆ. 18: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಆರ್. ಶಂಕರ್, ಎಂಟಿಬಿ ನಾಗರಾಜ್ ಹಾಗೂ ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡುವುದು ಯಡಿಯೂರಪ್ಪ ಅವರ ಉದ್ದೇಶ. ಕರ್ನಾಟಕದ ಸರ್ಕಾರದ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಹಲವು ಶರತ್ತುಗಳನ್ನು ಯಡಿಯೂರಪ್ಪ ಅವರಿಗೆ ಹಾಕಿರುವುದರಿಂದ ಸೆ. 21ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಆಗುವುದು ಕಷ್ಟ. ಹೀಗಾಗಿ ಅಕ್ಟೋಬರ್ ತಿಂಗಳಿನಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.
ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬದಲಿಗೆ ಬೇರೆಯದ್ದೆ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆಯುತ್ತಿದೆ. ಕಳಪೆ ಸಾಧನೆ ಮಾಡಿರುವ ಆರು ಸಚಿವರನ್ನು ಸಂಪುಟದಿಂದ ಕೈಬಿಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟಕ್ಕೆ ಹೊಸದಾಗಿ ಒಟ್ಟು 9 ಶಾಸಕರು ಸೇರಿಕೊಳ್ಳಲಿದ್ದಾರೆ.
ಯಡಿಯೂರಪ್ಪ ಸಂಪುಟ ವಿಸ್ತರಣೆ; ಯಾರು, ಏನು ಹೇಳಿದರು?
ಆ ಮೂಲಕ ಮೂಲ ಬಿಜೆಪಿಗರಲ್ಲಿನ ಅಸಮಾಧಾನ ತಣಿಸಲು ಹೈಕಮಾಂಡ್ ಹಾಗೂ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ಹೊಸದಾಗಿ 9 ಜನರಿಗೆ ಮಂತ್ರಿಮಂಡಲದಲ್ಲಿ ಅವಕಾಶ ಕೊಡುವ ಮೂಲಕ ಎಲ್ಲ ಅಸಮಾಧಾನ ತಣಿಸಲು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ ಎಂಬುದು ಬಿಜೆಪಿಯ ಮೂಲಗಳಿಂದಲೇ ತಿಳಿದು ಬಂದಿದೆ.
ಮೂಲ ಬಿಜೆಪಿಗರಿಗೆ ಮಣೆ!
ರಾಜ್ಯ ಮಂತ್ರಿಮಂಡಲದಲ್ಲಿ ಮೂಲ ಬಿಜೆಪಿ ಶಾಸಕರನ್ನು ಕಡೆಗಣಿಸಲಾಗಿದೆ ಎಂಬ ಹಣೆಪಟ್ಟಿಯಿಂದ ಹೊರಗೆ ಬರಲು ರಾಜ್ಯ ಹಾಗೂ ಕೇಂದ್ರ ಬಿಜೆಪಿ ತೀರ್ಮಾನ ಮಾಡಿವೆ. ಹೀಗಾಗಿ ಸಾಧನೆ ಆಧಾರದ ಮೇಲೆ ಆರು ಮಂತ್ರಿಗಳನ್ನು ಸಂಪುಟದಿಂದ ಕೈಬಿಡಲು ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸೇರಿದಂತೆ ಸಧ್ಯ ಒಟ್ಟು 28 ಸಚಿವರು ಸಂಪುಟದಲ್ಲಿದ್ದಾರೆ. ಖಾಲಿ ಇರುವ ಆರು ಸ್ಥಾನಗಳೊಂದಿಗೆ ಇನ್ನು ಮೂವರು ಸಚಿವರನ್ನು ಸಂಪುಟದಿಂದ ಕೈಬಿಡಲು ತೀರ್ಮಾನ ಮಾಡಲಾಗಿದ್ದು, ಒಟ್ಟು 9 ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕೊಡಲು ತೀರ್ಮಾನ ಮಾಡಲಾಗಿದೆ. ಆ ಮೂಲಕ ಮೂಲ ಬಿಜೆಪಿ, ಪ್ರಾದೇಶಿಕ ಅಸಮಾತನತೆ, ಹಿರಿತನ ಸೇರಿದಂತೆ ಎಲ್ಲ ಅಸಮಾಧಾನಗಳನ್ನು ತಣಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಮೂವರು ಸಚಿವರಿಗೆ ಕೋಕ್
ಸಾಧನೆ ಸೇರಿದಂತೆ ಹಲವು ಆಯಾಮಗಳ ಹಿನ್ನೆಲೆಯಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ ಅಥವಾ ಸಚಿವ ಸಿ.ಸಿ. ಪಾಟೀಲ್ ಅವರಲ್ಲಿ ಮೂವರು ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ಮಾಹಿತಿಯಿದೆ. ಹೀಗೆ ಮಾಡಿದರೆ ಒಟ್ಟು 9 ಸ್ಥಾನಗಳು ಖಾಲಿಯಾಗಲಿವೆ. ಮುಂದಿನ ಚುನಾವಣೆ ದೃಷ್ಟಿಯಿಂದ ಪೂರ್ಣ ಪ್ರಮಾಣದ ಸಂಪುಟ ರಚಿಸಲು ಬಿಜೆಪಿ ತೀರ್ಮಾನಿಸಿದೆ.
ಇಂದಲ್ಲಾ, ನಾಳೆ ಸಂಪುಟ ಪುನರ್ ರಚನೆಯಾದಾರೆ, ಈ ನಾಲ್ವರಿಗೆ ಕೊಕ್?
9 ಜನರಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾಗಿರುವ ಆರ್. ಶಂಕರ್, ಎಂಟಿಬಿ ನಾಗರಾಜ್ ಹಾಗೂ ಎಚ್. ವಿಶ್ವನಾಥ್ ಅವರು ಮಂತ್ರಿಯಾಗಲಿದ್ದಾರೆ. ಈಗಾಗಲೇ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಸಂಪುಟ ಸೇರಿ ಡಿಸಿಎಂ ಆಗಿದ್ದಾರೆ. ಹೀಗಾಗಿ ಕೋಟ ಶ್ರೀನಿವಾಸ ಪೂಜಾರ್ ಅವರೂ ಸಂಪುಟದಲ್ಲಿ ಸೇರಿಸಿದರೆ ಪರಿಷತ್ನಿಂದಲೇ 5 ಜನರಿಗೆ ಅವಕಾಶ ಕೊಟ್ಟಂತಾಗುತ್ತದೆ. ಹೀಗಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ.
ಯೋಗೇಶ್ವರ್ಗಿಲ್ಲ ಮಂತ್ರಿ ಪದವಿ
ಇನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಂಪುಟ ಸೇರುವ ಅದೃಷ್ಟವನ್ನು ಹೊಂದಿಲ್ಲ. ಪರಿಷತ್ ಸದಸ್ಯತ್ವವವನ್ನು ಅವರಿಗೆ ಕೊಡಲಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿ ವಿಧಾನ ಪರಿಷತ್ಗೆ ಹೆಚ್ಚಿನ ಅವಕಾಶ ಕೊಟ್ಟರೆ ಅದು ಒಳ್ಳೆಯದಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ. ಹೀಗಾಗಿ ಸಿ.ಪಿ. ಯೋಗೇಶ್ವರ್ ಅವರು ಮಂತ್ರಿಯಾಗುವುದು ಬೇಡ ಎಂದು ಹೈಕಮಾಂಡ್ ತೀರ್ಮಾನ ಮಾಡಿದೆ ಎನ್ನಲಾಗಿದೆ.
ಮುನೆನಕೊಪ್ಪ ಅಥವಾ ನಿರಾಣಿ
ಇನ್ನು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ನವಲಗುಂದ ಶಾಸಕ ಶಂಕರ್ ಪಾಟೀಲ್ ಮುನೆನಕೊಪ್ಪ, ಬೀಳಗಿ ಶಾಸಕ ಮುರುಗೇಶ್ ನಿರಾಣಿ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಸುರಪುರ ಶಾಸಕ ರಾಜೂ ಗೌಡ ಅವರು ಸಂಪುಟ ಸೇರಲಿದ್ದಾರೆ. ಪ್ರಾದೇಶಿಕ ಕೋಟಾದಡಿ ರೇಣುಕಾಚಾರ್ಯ, ರಾಜೂ ಗೌಡ ಅವರು ಸಂಪುಟ ಸೇರುತ್ತಿದ್ದಾರೆ.
ಪಂಚಮಸಾಲಿ ಲಿಂಗಾಯತ ಕೋಟಾದಡಿ ಸಚಿವ ಸಿ.ಸಿ. ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಟ್ಟಲ್ಲಿ ಶಂಕರ್ ಪಾಟೀಲ್ ಮುನೆನಕೊಪ್ಪ ಹಾಗೂ ಮುರುಗೇಶ್ ನಿರಾಣಿ ಇಬ್ಬರಲ್ಲಿ ಒಬ್ಬರು ಸಚಿವರಾಗಲಿದ್ದಾರೆ. ಸಿ.ಸಿ. ಪಾಟೀಲ್ ಅವರು ಮಂತ್ರಿಸ್ಥಾನ ಉಳಿಸಿಕೊಂಡರೆ ನಿರಾಣಿ ಅಥವಾ ಪಾಟೀಲ್ ಇಬ್ಬರಲ್ಲಿ ಒಬ್ಬರು ಸಚಿವರಾಗಲಿದ್ದಾರೆ. ಬಿಜೆಪಿಯಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ 13 ಶಾಸಕರಿದ್ದಾರೆ. ಅವರಲ್ಲಿ ಸಿ.ಸಿ. ಪಾಟೀಲ್ ಸಚಿವರಾಗಿದ್ದಾರೆ. ಹೀಗಾಗಿ ಒಟ್ಟು ಇಬ್ಬರಿಗೆ ಸಚಿವಸ್ಥಾನದ ಭರವಸೆ ಸಿಕ್ಕಿದೆ.
ಅಕ್ಟೋಬರ್ ಮೊದಲ ವಾರ
ಎಲ್ಲವೂ ಬಿಜೆಪಿ ಲೆಕ್ಕಾಚಾರದಂತೆ ನಡೆದರೆ ಬರುವ ಅಕ್ಟೋಬರ್ 5 ಅಥವಾ 6 (ಸೋಮವಾರ ಮಧ್ಯಾಹ್ನದ ಬಳಿಕ ಅಥವಾ ಮಂಗಳವಾರ ಬೆಳಗ್ಗೆ) ರಂದು ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಿದರೆ ಅದರ ಪರಿಣಾಮ ಸರ್ಕಾರದ ಮೇಲಾಗಲಿದೆ. ಮೊದಲೇ ಲಾಕ್ಡೌನ್, ಕೊರೊನಾ ಸಂದರ್ಭದ ವೈದ್ಯಕೀಯ ಸಲಕರಣೆಗಳ ಖರೀದಿ ಹಗರಣ, ಕಳೆದ ಐದು ತಿಂಗಳುಗಳಲ್ಲಿ ಸುಗ್ರೀವಾಜ್ಞೆ ಮೂಲಕ 20ಕ್ಕೂ ಹೆಚ್ಚು ಕಾಯಿದೆಗಳಿಗೆ ತಿದ್ದುಪಡಿ, ಡ್ರಗ್ಸ್ ಹಗರಣ, ಬೆಂಗಳೂರು ಗಲಭೆ ಸೇರಿದಂತೆ ಹಲವು ಸವಾಲುಗಳನ್ನು ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಎದುರಿಸಬೇಕಿದೆ.
Recommended Video
ಸುಗ್ರೀವಾಜ್ಞೆಗಳ ಸವಾಲು
20ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳು, ಹೊಸದಾಗಿ ಮಂಡನೆ ಆಗಲಿರುವ 10ಕ್ಕು ಹೆಚ್ಚು ತಿದ್ದುಪಡಿ ವಿಧೇಯಕಗಳು ಹಾಗೂ ಕಳೆದ ಅಧಿವೇಶನದಲ್ಲಿ ಮಂಡನೆ ಮಾಡಿರುವ ಎರಡು ವಿಧೇಯಕಗಳು ಸೇರಿದಂತೆ ಒಟ್ಟು 32ಕ್ಕು ಹೆಚ್ಚು ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಳ್ಳಬೇಕಿದೆ. ಮುಖ್ಯವಾಗಿ ಭೂಸುಧಾರಣಾ ತಿದ್ದುಪಡಿ ವಿಧೇಯಕ, ಎಂಪಿಎಂಸಿ ತಿದ್ದುಪಡಿ ವಿಧೇಯಕಗಳಿಗೆ ವಿರೋಧ ಪಕ್ಷಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ಗದ್ದಲಕ್ಕೆ ಆಸ್ಪದ ಕೊಡದಂತೆ ಚರ್ಚೆಯಲ್ಲಿ ಭಾಗವಹಿಸಲು ಈಗಾಗಲೇ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂದು ಹೈಕಮಾಂಡ್ ತೀರ್ಮಾನಕ್ಕೆ ಬಂದಿದೆ. ಸಿಎಂ ಯಡಿಯೂರಪ್ಪ ಅವರೂ ಅದನ್ನು ಒಪ್ಪಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿಯೇ (ಸೆ. 17) ಈ ಎಲ್ಲ ವಿಚಾರಗಳು ಬಿಜೆಪಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಧ್ಯೆ ವಿನಿಮಯವಾಗಿವೆ. ಹೀಗಾಗಿ ಸಧ್ಯಕ್ಕೆ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತಷ್ಟು ಹಿಡಿತ ಸಾಧಿಸಿದ್ದು, ನಾಯಕತ್ವ ಬದಲಾವಣೆ ಎಂದವರಿಗೆ ಬಲವಾದ ಏಟು ಕೊಟ್ಟಿದ್ದಾರೆ. ಹೀಗಾಗಿ ಅಕ್ಟೋಬರ್ ಮೊದಲ ವಾರದಲ್ಲಿಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವುದು ಖಚಿತವಾಗಿದೆ.