ಸಿಎಂ ಗುರುವಾರ ದೆಹಲಿಗೆ: ಬಿಜೆಪಿ ಪಾಳಯದಲ್ಲಿ ಮತ್ತೆ ಮುನ್ನೆಲೆಗೆ ಬಂತು ಸಂಪುಟ ವಿಸ್ತರಣೆ
ಬೆಂಗಳೂರು, ಜೂ. 22: ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಭೇಟಿ ಯಶಸ್ಸು ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದೆಹಲಿ ಕರೆ ಬಂದಿದೆ. ಕೇಂದ್ರ ಬಿಜೆಪಿ ವರಿಷ್ಠರ ಕರೆ ಹಿನ್ನೆಲೆಯಲ್ಲಿ ಪುನಃ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಲಿದ್ದಾರೆ.
ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆತಂಕಕ್ಕೆ ಒಳಗಾಗಿದ್ದರು. ಯಾವ ಕಾರ್ಯಕ್ರಮದಲ್ಲಿ ಏನು ಎಡವಟ್ಟು ಆಗುತ್ತೋ ? ನನ್ನ ಆಡಳಿತದ ಮೇಲೆ ಏನು ನಕಾರಾತ್ಮಕ ಪರಿಣಾಮ ಬೀರುತ್ತೋ ಎಂಬ ಆತಂಕಕದಲ್ಲಿ ಮುಳಗಿದ್ದರು. ಪ್ರಧಾನಿ ಮೋದಿ ಅವರ ಬೆಂಗಳೂರು ಕಾರ್ಯಕ್ರಮಗಳು ಯಶಸ್ವಿ ಆಯಿತು. ಮೈಸೂರಿನಲ್ಲಿ ಆಯೋಜಿಸಿದ್ದ ಯೋಗ ದಿನವೂ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಸಂತಸದಲ್ಲಿ ದೆಹಲಿಗೆ ತೆರಳಲಿದ್ದಾರೆ.
ಈ ಸಲ ದೆಹಲಿ ಕರೆ ಗುಟ್ಟೇನು ? ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಕರ್ನಾಟಕ ಭೇಟಿ, ಕಾರ್ಯಕ್ರಮಗಳ ಆಯೋಜನೆ, ವಿಶ್ವ ಯೋಗ ದಿನಾಚರಣೆ ಯಶಸ್ವಿಯಾಗಿ ನಡೆಯಿತು. ಹೀಗಾಗಿ ಬೊಮ್ಮಾಯಿ ಅವರ ಈ ಕಾರ್ಯಶೈಲಿಯನ್ನು ಮೆಚ್ಚಿ ಶಹಬ್ಬಾಸ್ ಗಿರಿ ನೀಡಲು ಬಿಜೆಪಿ ಕೇಂದ್ರ ವರಿಷ್ಠರು ಕರೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ದೆಹಲಿ ನಾಯಕರಿಂದ ಗ್ರೀನ್ ಸಿಗ್ನಲ್
ಸಂಪುಟದ ಕಥೆ ಪ್ರಸ್ತಾಪವಾಗುತ್ತಾ? ಇನ್ನು ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಹೋದಾಗಲೆಲ್ಲಾ ರಾಜ್ಯದಲ್ಲಿ ಸಂಪುಟ ಪುನಾರಚನೆ ಚರ್ಚೆ ಗರಿಗೆದರುತ್ತದೆ. ಈ ಭಾರಿ ಬೊಮ್ಮಾಯಿ ಅವರಿಗೆ ಸಂಪುಟ ಪುನಾರಚನೆ ಬಗ್ಗೆ ಕೇಂದ್ರ ವರಿಷ್ಠರು ಮಾರ್ಗಸೂಚಿ ನೀಡುತ್ತಾರಾ. ? ಸಂಪುಟ ವಿಸ್ತರಣೆಗೆ ಅವಕಾಶ ಕೊಡುತ್ತಾರಾ ಎಂಬ ಪ್ರಶ್ನೆಗಳು ಇದೀಗ ಬಿಜೆಪಿ ಪಾಳಯದಲ್ಲಿ ಚರ್ಚೆ ಶುರುವಾಗಿದೆ.
ಬೊಮ್ಮಾಯಿ ಖಾಲಿ ಕೈಯಲ್ಲಿ ಬರ್ತಾರಾ?
ಸಚಿವ ಸ್ಥಾನಕ್ಕಾಗಿ ಬಿಜೆಪಿಯ ಕೆಲ ಶಾಸಕರು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸಂಪುಟ ಪುನಾರಚನೆಯಾಗುತ್ತೆ. ನಾನು ಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡೇ ತಿರುಗಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಬಂದ್ರೂ ನಾವು ಗೆದ್ದು ಮಂತ್ರಿಯಾಗುತ್ತೇವೆ ಎಂದು ಹೇಳಲಿಕ್ಕೂ ಸಾಧ್ಯವಿಲ್ಲ. ಹೀಗಾಗಿ ಕೊನೆ ಕಾಲದಲ್ಲಿ ಒಮ್ಮೆಯಾದರೂ ಮಂತ್ರಿಯಾಗಬೇಕೆಂದು ಆಸೆ ಇಟ್ಟುಕೊಂಡಿರುವರು ಬೊಮ್ಮಾಯಿ ಮೇಲೆ ಸಾಕಷ್ಟು ಪ್ರಭಾವ ಹಾಕುತ್ತಲೇ ಇದ್ದಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಹತ್ತು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ಪ್ರತಿ ಭಾರಿಯೂ ಖಾಲಿ ಕೈಯಲ್ಲಿ ವಾಪಸು ಬಂದಿದ್ದಾರೆ.
ಬಿಜೆಪಿ ವರಿಷ್ಠರ ಮುಂದೆ ಇರುವ ಪಸ್ತಾಪವೇನು?
ಅಚ್ಚರಿ ಬದಲಾವಣೆ ಆದ್ರೂ ಹೇಳೋಕೆ ಆಗಲ್ಲ: ಇನ್ನು ಬಿಜೆಪಿಯಲ್ಲಿ ವರಿಷ್ಠರು ಯಾವ ಕ್ಷಣದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಸಂಪುಟ ವಿಸ್ತರಣೆ ಬೇಡ ಎನ್ನುವ ಸಮಯದಲ್ಲಿ ಕೇಂದ್ರ ವರಿಷ್ಠರು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮೂಲಕ ಜನಪರ ಆಡಳಿತಕ್ಕೆ ವೇಗ ನೀಡುವ ತೀರ್ಮಾನ ತೆಗೆದಕೊಂಡರೂ ಅಚ್ಚರಿ ಪಡಬೇಕಿಲ್ಲ. ರಾಜ್ಯಸಭಾ ಸದಸ್ಯರ ಚುನಾವಣೆ ವೇಳೆ ಸಹ ಅನಿರೀಕ್ಷಿತ ತೀರ್ಮಾನ ಬಿಜೆಪಿ ಹೈಕಮಾಂಡ್ ತೆಗೆದುಕೊಂಡ ನಿದರ್ಶನ ಕಣ್ಣು ಎದುರು ಇದೆ. ಇಂತಹ ಅನೇಕ ತೀರ್ಮಾನಗಳನ್ನು ಬಿಜೆಪಿ ವರಿಷ್ಠರು ಸಾಕಷ್ಟು ಬಾರಿ ತೆಗೆದುಕೊಂಡಿದ್ದಾರೆ. ಆ ಲೆಕ್ಕಾಚಾರದಲ್ಲಿ ನೋಡುವುದಾದರೆ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿದರೂ ಅಚ್ಚರಿ ಪಡಬೇಕಿಲ್ಲ.
ಇರುವಂತೆ ಕಾಲ ತಳ್ಳಲು ಬಿಜೆಪಿ ಪ್ಲಾನ್ :
ರಾಜ್ಯದಲ್ಲಿ ಬೊಮ್ಮಾಯಿ ಅಡಳಿತದ ಬಗ್ಗೆ ಕೇಂದ್ರ ವರಿಷ್ಠರಿಗೆ ಯಾವುದೇ ಬೇಸರವಿಲ್ಲ. ಅದರಲ್ಲೂ ಮೋದಿ ಬಂದು ಹೋದ ಬಳಿಕ ಮತ್ತಷ್ಟು ಭರವಸೆ ಬಂದಿದೆ. ಸಂಪುಟ ವಿಸ್ತರಣೆ, ಪುನಾರಚನೆ ಮತ್ತೆ ಪಕ್ಷದಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಬಹುದು. ಈಗ ಇರುವ ಸ್ಥಿತಿಯಲ್ಲಿ ಮುಂದಿನ ಒಂದು ವರ್ಷ ಅಡಳಿತ ಪೂರ್ಣಗೊಳಿಸಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಹೈಕಮಾಂಡ್ ತೀರ್ಮಾನಿಸಿದೆ. ಹೀಗಾಗಿ ಸಂಪುಟ ಪುನಾರಚನೆ, ವಿಸ್ತರಣೆ ಸಾಧ್ಯತೆಗಳು ತೀರಾ ಕಡಿಮೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ. ಹೀಗಾಗಿ ಬೊಮ್ಮಾಯಿ ದೆಹಲಿಗೆ ಹೋಗುತ್ತಿರುವ ಬೆನ್ನಲ್ಲೇ ರಾಜ್ಯದ ಸಂಪುಟ ವಿಸ್ತರಣೆ ವಿಚಾರ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ.
Recommended Video