ಮೂರೇ ದಿನಕ್ಕೆ ವಿಧಾನ ಮಂಡಲ ಮಳೆಗಾಲದ ಅಧಿವೇಶನ ಮೊಟಕು?
ಬೆಂಗಳೂರು, ಸೆ. 21: ಇಂದಿನಿಂದ ವಿಧಾನ ಮಂಡಲ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, 10 ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನ ಮಾಡಲಾಗಿದೆ. ಆದರೆ 10 ದಿನಗಳ ಅಧಿವೇಶನವನ್ನು ಮೂರೇ ದಿನಗಳಿಗೆ ಮೊಟಕು ಮಾಡಲು ಬಿಜೆಪಿ ಸರ್ಕಾರ ತೀರ್ಮಾನ ಮಾಡಿದೆ ಎನ್ನಲಾಗಿದೆ. ಕೊರೊನಾ ವೈರಸ್ ಹರಡುವ ಆತಂಕದ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನದಲ್ಲಿ ಭಾಗವಹಿಸಲು ವಿಧಾನಸಭೆ ಸಚಿವಾಲಯ ಅನುಕೂಲ ಮಾಡಿಕೊಟ್ಟಿದೆ. ಆದರೂ ಸರ್ಕಾರ ಅಧಿವೇಶನ ಮೊಟಕುಗೊಳಿಸಲು ಮುಂದಾಗಿದೆ.
ಉಭಯ ಸನದನಗಳಲ್ಲಿ ಪ್ರತಿಭಟನೆಗೆ ಇಳಿಯದೇ ವಿಧೇಯಕಗಳ ಮೇಲೆ ಚರ್ಚೆ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತೀರ್ಮಾನ ಮಾಡಿದೆ. ಬೆಂಗಳೂರು ಗಲಭೆ, ಡ್ರಗ್ಸ್ ವಿಚಾರ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿ ಹಗರಣದ ಆರೋಪದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಇದರಿಂದ ನಿರಾಸೆಯಾಗಿದೆ. ವಿರೋಧ ಪಕ್ಷಗಳು ಪ್ರತಿಭಟನೆಗೆ ಇಳಿದಷ್ಟು ಸರ್ಕಾರಕ್ಕೆ ಲಾಭವಾಗುತ್ತಿತ್ತು. ಆದರೆ ಇದೀಗ ವಿರೋಧ ಪಕ್ಷ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಸರ್ಕಾರ ಪ್ರತಿತಂತ್ರ ರೂಪಿಸಿದೆ.
ಮೂರು ದಿನಗಳ ಅಧಿವೇಶನ ಮಾತ್ರ?
ಕೊರೊನಾ ವೈರಸ್ ನೆಪದಲ್ಲಿ 10 ದಿನಗಳ ಕಾಲ ಕರೆದಿರುವ ಅಧಿವೇಶನವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವತ್ತು ವಿಧಾನಸೌಧದಲ್ಲಿ ನಡೆಯುವ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೊಂದಿಗೆ ಇದೇ ವಿಚಾರವನ್ನು ಸಿಎಂ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.
ಇಂದಿನಿಂದ ಮಳೆಗಾಲದ ಅಧಿವೇಶನ ಕಾಂಗ್ರೆಸ್ ಪಕ್ಷದ ರಣತಂತ್ರ ಏನು ಗೊತ್ತಾ?
ಕೊರೊನಾ ವೈರಸ್ ಹರಡುವ ಆತಂಕವಿರುವುದರಿಂದ ಪ್ರತಿಪಕ್ಷಗಳು ಸದನ ಮೊಟಕುಗೊಳಿಸಲು ಸಹಕಾರ ಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಕೇಳಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಚರ್ಚೆ ನಡೆಸದೇ ಹಣಕಾಸು ಸೇರಿದಂತೆ ಎಲ್ಲ ವಿಧೇಯಕಗಳಿಗೆ ಚರ್ಚೆಯಿಲ್ಲದೆ ಅಂಗೀಕಾರ ಪಡೆದುಕೊಳ್ಳುವುದು ಸರ್ಕಾರದ ತಂತ್ರ.
ಸರ್ಕಾರದ ಸಲಹೆ ಒಪ್ಪುವ ಮಾತೇ ಇಲ್ಲ!
ಕಲಾಪ ಮೊಟಕುಗೊಳಿಸುವ ಸರ್ಕಾರದ ಸಲಹೆಯನ್ನು ಒಪ್ಪುವ ಮಾತೇ ಇಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಪಕ್ಷ ಈಗಾಗಲೇ ಬಂದಿದೆ. ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಪಕ್ಷದ ಸದಸ್ಯರು ಸರ್ಕಾರಕ್ಕೆ ಈಗಾಗಲೇ 1200 ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ ಚುಕ್ಕೆ ಗುರುತಿನ 100 ಪ್ರಶ್ನೆಗಳಿಗೆ ಸರ್ಕಾರ ಸದನದಲ್ಲಿ ಉತ್ತರಿಸಬೇಕಿದೆ. ಉಳಿದವುಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಬೇಕಿದೆ.
ಜೊತೆಗೆ 19 ಸುಗ್ರೀವಾಜ್ಞೆಗಳು, 10 ತಿದ್ದುಪಡಿ ವಿಧೇಯಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಮಂಡನೆಯಾಗಿರುವ 2 ವಿಧೇಯಕಗಳಿಗೆ ಸರ್ಕಾರ ಅಂಗೀಕಾರ ಪೊಡೆಉಕೊಳ್ಳಬೇಕಿದೆ. ಅವುಗಳಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ, ಭೂಸುಧಾರಣಾ ತಿದ್ದುಪಡಿ ವಿಧೇಯಕ, ಕಾರ್ಮಿಕ ತಿದ್ದುಪಡಿ ಕಾಯಿದೆ, ಸೇರಿದಂತೆ ಹಲವು ಸುಗ್ರೀವಾಜ್ಞೆಗಳು ಸೇರಿವೆ. ಹೀಗಾಗಿ ಕಲಾಪ ಮೊಟಕುಗೊಳಿಸುವ ಸರ್ಕಾರದ ಸಲಹೆಯನ್ನು ಒಪ್ಪದಿರಲು ಕಾಂಗ್ರೆಸ್ ತೀರ್ಮಾನ ಮಾಡಿದೆ.
ತಿದ್ದುಪಡಿ ವಿಧೇಯಕಗಳ ಮೇಲೆ ಚರ್ಚೆ
ಉಭಯ ಸದನಗಳಲ್ಲಿ ಚರ್ಚೆಯ ಮೂಲಕ 41 ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬಿಜೆಪಿ ಸರ್ಕಾರ ಬಂದಿದ್ದು, ಹೀಗಾಗಿ ಚರ್ಚೆಯಿಲ್ಲದೆ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಂಡು ಅಧಿವೇಶನ ಮುಂದಕ್ಕೆ ಹಾಕಲು ತೀರ್ಮಾನ ಮಾಡಲಾಗಿದೆ. ಹಾಗೆ ಮಾಡಲು ಸರ್ಕಾರ ಮುಂದಾದಲ್ಲಿ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗಲಿದೆ.
ಸಚಿವರು, ಶಾಸಕರಿಗೂ ಕೋವಿಡ್ ನೆಗಟಿವ್ ಪರೀಕ್ಷಾ ವರದಿ ಕಡ್ಡಾಯ
ವಿರೋಧ ಪಕ್ಷಗಳು ಧರಣಿಗೆ ಮುಂದಾಗದೆ ಚರ್ಚೆಗೆ ಮುಂದಾಗಿರುವುದು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ನಿರ್ಣಾಯಕವಾಗಲಿದೆ. ಸದನದಲ್ಲಿ ಗಲಾಟೆ ನಡೆದರೆ ಸ್ಪೀಕರ್ ನೇತೃತ್ವದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸಂಧಾನ ಸಬೆಯ ಮೂಲಕ ತೀರ್ಮಾನಕ್ಕೆ ವಿಧಾನಸಭೆ ಸಭಾಧ್ಯಕ್ಷರು ಬರಬಹುದು. ಆದರೆ ಸದನ ಮುಂದೂಡುವ ವಿಚಾರದಲ್ಲಿ ಸ್ಪೀಕರ್ ಮಾತನ್ನು ಕೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿಲ್ಲ ಎನ್ನಲಾಗಿದೆ.
ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕಲಾಪ ಮೊಟಕು?
ಕೇವಲ ಮೂರೇ ದಿನಗಳಿಗೆ ಸದನ ಕಡಿತ ಮಾಡಲು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದಾರೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಖಡಕ್ಕಾಗಿ ತಿಳಿಸಲು ಪ್ರತಿಪಕ್ಷ ಕಾಂಗ್ರೆಸ್ ತಿರ್ಮಾನ ಮಾಡಿದೆ. ನಿಗದಿಯಂತೆ ಸದನ ನಡೆಸಲು ಕಾಂಗ್ರೆಸ್ ಒತ್ತಾಯ ಮಾಡಲಿದೆ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೊರೊನಾ ವೈರಸ್ ನೆಪದಲ್ಲಿ ಸದನ ಮೊಟಕು ಮಾಡಲು ಸರ್ಕಾರ ತಂತ್ರ ಮಾಡಿದೆ. ಸರ್ಕಾರದ ತಂತ್ರವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಕಾಂಗ್ರೆಸ್ ನಾಯಕರಿಂದ ಆಡಳಿತ ಪಕ್ಷಕ್ಕೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.
Recommended Video
18 ಶಾಸಕರಿಗೆ ಕೊರೊನಾ ಸೋಂಕು
ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಜೊತೆಗೆ 13 ಶಾಸಕರಿಗೂ ಕೊರೊನಾ ವೈರಸ್ ದೃಢಪಟ್ಟಿದೆ. ಶಾಸಕರಾದ ಎನ್.ಎ. ಹ್ಯಾರಿಸ್, ಎಚ್.ಪಿ. ಮಂಜುನಾಥ, ಕೆ. ಮಹಾದೇವ, ಬಿ. ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಬಸನಗೌಡ ದದ್ದಲ್, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ, ಉಮಾನಾಥ್ ಕೊಟ್ಯಾನ್, ಡಿ.ಸಿ. ಗೌರಿಶಂಕರ, ಎಂ.ಪಿ. ಕುಮಾರಸ್ವಾಮಿ, ಕುಸುಮಾ ಶಿವಳ್ಳಿ ಹಾಗೂ ಬಿ.ಕೆ. ಸಂಗಮೇಶ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಗೈರು ಹಾಜರಾಗುತ್ತಿದ್ದಾರೆ.
ಇತಿಹಾಸ ನಿರ್ಮಿಸಲಿದೆ ಈ ಮಳೆಗಾಲದ ವಿಧಾನ ಮಂಡಲ ಅಧಿವೇಶನ!
ಕೊರೊನಾ ವೈರಸ್ ಸೋಂಕು ಪಾಸಿಟಿವ್ ಆಗಿರುವವರು ಅಧಿವೇಶನದಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಈಗಾಗಲೇ ವಿಧಾನಸಭೆ ಸಚಿವಾಲಯ ಸೂಚಿಸಿದೆ. ಹೀಗಾಗಿ ಪ್ರಮುಖ ವಿಧೇಯಕಗಳನ್ನು ಮತಕ್ಕೆ ಹಾಕುವ ಸಂದರ್ಭ ಬಂದಲ್ಲಿ ಏನು ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಇದೇ ವಿಚಾರವನ್ನಿಟ್ಟುಕೊಂಡು ವಿಧಾನ ಮಂಡಲ ಅಧಿವೇಶನ ಮೊಟಕು ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.