ಬಿಜೆಪಿಯ ಸಿಎಎ ಜನ ಜಾಗೃತಿ ಅಭಿಯಾನ ಜ.26ರ ತನಕ ವಿಸ್ತರಣೆ
ಬೆಂಗಳೂರು, ಜನವರಿ 20 : ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕೈಗೊಂಡಿದ್ದ ಜನ ಜಾಗೃತಿ ಅಭಿಯಾನವನ್ನು ಕರ್ನಾಟಕ ಬಿಜೆಪಿ ವಿಸ್ತರಣೆ ಮಾಡಿದೆ. ಜನವರಿ 26ರ ತನಕ ರಾಜ್ಯದಲ್ಲಿ ಅಭಿಯಾನ ಮುಂದುವರೆಯಲಿದೆ. ಸಿಎಎಗೆ ಕರ್ನಾಟಕದಲ್ಲಿ ವಿರೋಧವೂ ವ್ಯಕ್ತವಾಗಿತ್ತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ಪಕ್ಷ ಕೈಗೊಂಡಿದ್ದ ಜನ ಜಾಗೃತಿ ಅಭಿಯಾನ ಸೋಮವಾರ ಕೊನೆಗೊಳ್ಳಬೇಕಿತ್ತು. ಅದನ್ನು ಜನವರಿ 26ರ ತನಕ ವಿಸ್ತರಣೆ ಮಾಡಲಾಗಿದೆ" ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ: ಪ್ರಧಾನಿಗೆ ಪಿ.ಚಿದಂಬರಂ ಡಿಫರೆಂಟ್ ಸಲಹೆ
ಜನವರಿ 26ರಂದು ಗಣರಾಜ್ಯೋತ್ಸವ ಇದೆ. ಅಂದು ಬೆಳಗ್ಗೆ 9.30 ರಿಂದ 10.30ರ ತನಕ ರಾಜ್ಯದ 58 ಸಾವಿರ ಬಿಜೆಪಿ ಬೂತ್ಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಅಭಿಯಾನವನ್ನು ಮುಕ್ತಾಯಗೊಳಿಸಲಾಗುತ್ತದೆ.
ಸಿಎಎ ಸಂಬಂಧ ಕೇಂದ್ರದ ವಿರುದ್ಧ ಕೇರಳ ಸಿಎಂ ಸಿಡಿಮಿಡಿ
"ಧ್ವಜಾರೋಹಣ ನಡೆಸುವ ಮೂಲಕ ಸಿಎಎ ಇಂದ ದೇಶದ ಜನರಿಗೆ ನೆಮ್ಮದಿ ತಂದುಕೊಟ್ಟ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಹಾಗೂ 'ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು' ಎಂಬ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ" ಎಂದು ಎನ್. ರವಿ ಕುಮಾರ್ ಹೇಳಿದ್ದಾರೆ.
ವಿವಿಧ ಕಾರ್ಯಕ್ರಮಗಳ ಆಯೋಜನೆ
ಕರ್ನಾಟಕ ಬಿಜೆಪಿ ಘಟಕ ಡಿಸೆಂಬರ್ 25ರಿಂದ ಸಿಎಎ ಕುರಿತು ಜನ ಜಾಗೃತಿ ಮೂಡಿಸುವ ಅಭಿಯಾನವನ್ನು ರಾಜ್ಯದಲ್ಲಿ ನಡೆಸುತ್ತಿದೆ. ಇದರ ಭಾಗವಾಗಿ ವಿವಿಧ ಕಾರ್ಯಕ್ರಮಗಳು ನಡೆದಿವೆ. ಮನೆ-ಮನೆಗೆ ತೆರಳಿ ಕರಪತ್ರಗಳನ್ನು ಸಹ ಹಂಚಲಾಗಿದೆ.
30 ಲಕ್ಷ ಮನೆಗಳನ್ನು ತಲುಪುವ ಗುರಿ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನ ಜಾಗೃತಿ ಮೂಡಿಸಲು ಬಿಜೆಪಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿತ್ತು. ರಾಜ್ಯದ 30 ಲಕ್ಷ ಮನೆಗಳನ್ನು ತಲುಪುವ ಗುರಿಯನ್ನು ಹೊಂದಿತ್ತು. ಶಕ್ತಿ ಕೇಂದ್ರ, ಮಂಡಲದ ಮೂಲಕ ಮನೆ-ಮನೆಗೂ ಕರಪತ್ರಗಳನ್ನು ವಿತರಣೆ ಮಾಡಲಾಗಿದೆ.
ಹುಬ್ಬಳ್ಳಿ ಸಮಾವೇಶ
ಜನವರಿ 18ರಂದು ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬೃಹತ್ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಗೋಲಿಬಾರ್ಗೆ 2 ಬಲಿ
ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮಂಗಳೂರು, ಬೆಂಗಳೂರು, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಮಂಗಳೂರಿನಲ್ಲಿ ಪ್ರತಿಭಟನೆ ವೇಲೆ ಗಲಭೆ ನಡೆದು ಪೊಲೀಸರು ನಡೆಸಿದ ಗೋಲಿಬಾರ್ಗೆ ಇಬ್ಬರು ಬಲಿಯಾಗಿದ್ದರು.