ಎಚ್ಡಿಕೆ ಯನ್ನು ಭೇಟಿ ಮಾಡಿದ ಬಿಜೆಪಿ ಅತೃಪ್ತ ಶಾಸಕರು: ಭಿನ್ನಮತದ ಸೂಚನೆ
Recommended Video
ಬೆಂಗಳೂರು, ಫೆಬ್ರವರಿ 20: ಬಿಜೆಪಿ ಭಿನ್ನಮತೀಯ ಶಾಸಕರು ಕೆಲವರು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ರಾಜಕೀಯ ಚರ್ಚೆ ನಡೆಸಿದ್ದಾರೆ.
ಸಚಿವ ಸ್ಥಾನ ಸಿಗದೇ ಪಕ್ಷದ ಮೇಲೆ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಮುರಗೇಶ ನಿರಾಣಿ ಹಾಗೂ ಗೂಳಿಹಟ್ಟಿ ಶೇಖರ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿ ವಿಧಾನಸೌಧ ಮೊಗಸಾಲೆಯಲ್ಲಿ ಹರಿದಾಡುತ್ತಿದೆ.
ಕೊರೊನಾ ವೈರಸ್ ಅಂಟಿಕೊಂಡಿತಾ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ?
ಪಕ್ಷಕ್ಕೆ ಬಂದ ಹೊಸಬರಿಗೆ ಅವಕಾಶ ಕೊಟ್ಟು ಮೂಲ ಬಿಜೆಪಿಗರನ್ನು ಕಡೆಗಣಿಸಿದ್ದಾರೆ ಎಂದು ಈಗಾಗಲೇ ಹಲವು ಮೂಲ ಬಿಜೆಪಿಗರು ರಾಜ್ಯ ಬಿಜೆಪಿ ನಾಯಕತ್ವದ ಮೇಲೆ ಸಿಟ್ಟಾಗಿದ್ದಾರೆ. ಇದೇ ಕಾರಣಕ್ಕೆ ಕೆಲವರು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿ ಆಗಿ 'ಭವಿಷ್ಯ'ದ ಚರ್ಚೆ ಮಾಡಿದ್ದಾರೆ.
ಸರ್ಕಾರ ಕೆಡವುವ ಕಾರ್ಯಕ್ಕೆ ನನ್ನನ್ನು ಕರೆಯಬೇಡಿ: ಎಚ್ಡಿಕೆ
ಮುಂದಿನ ದಿನಗಳಲ್ಲಿ ಭಿನ್ನಮತ ಹೆಚ್ಚಾಗಿ ಸರ್ಕಾರ ಕೆಡವುವ ಪರಿಸ್ಥಿತಿ ನಿರ್ಮಾಣವಾದರೆ ತಾವು ಬೆಂಬಲ ನೀಡಬೇಕು ಎಂದು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಅವರು ಸರ್ಕಾರ ಕೆಡವಲು ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ಸುದ್ದಿಯನ್ನು ಅಲ್ಲಗಳೆದಿರುವ ನಿರಾಣಿ
ಆದರೆ ಈ ಸುದ್ದಿಯನ್ನು ಅಲ್ಲಗಳೆದಿರುವ ಮುರಗೇಶ ನಿರಾಣಿ, 'ನಮ್ಮ ರಾಜಕೀಯ ಭವಿಷ್ಯಕ್ಕಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇವೆ ಎಂಬುದು ಸುಳ್ಳು, ನಮಗೆ ಯಡಿಯೂರಪ್ಪ ನಾಯಕತ್ವದ ಮೇಲೆ ವಿಶ್ವಾಸವಿದೆ' ಎಂದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಕಾರ್ಯ ನಡೆದಿದೆ
'ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೈ-ಕುಲುಕಿ ಶುಭ ಹಾರೈಸಿದ್ದೇವೆ ವಿನಃ ರಾಜಕೀಯ ಚರ್ಚೆ ಮಾಡಿಲ್ಲ' ಎಂದು ನಿರಾಣಿ ಹೇಳಿದ್ದಾರೆ.
ಸ್ವಾಮೀಜಿ ನೇತೃತ್ವದಲ್ಲಿ ಶಾಸಕರ ಗುಪ್ತ ಸಭೆ
ನಿರಾಣಿ ನಾಯಕತ್ವದಲ್ಲಿ ಬಿಜೆಪಿಯ ಪಂಚಮಸಾಲಿ ಲಿಂಗಾಯತ ಶಾಸಕರು ಹಾಗೂ ಇನ್ನೂ ಕೆಲವು ಅತೃಪ್ತ ಶಾಸಕರು ಸ್ವಾಮೀಜಿ ಒಬ್ಬರ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಗುಪ್ತ ಸಭೆ ನಡೆಸಿ, ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.