ಪೇಜಾವರ ಶ್ರೀ ಹೇಳಿಕೆ ಪರಿಣಾಮ: ಸರ್ಕಾರದ ಸಾಧನೆ ಪ್ರಚಾರಕ್ಕೆ ಮುಂದಾದ ಬಿಜೆಪಿ
Recommended Video
ಬೆಂಗಳೂರು, ಜೂನ್ 4: ಪ್ರಧಾನಿ ನರೇಂದ್ರ ಮೋದಿ ಅವರ ಅಡಳಿತ ತೃಪ್ತಿ ತಂದಿಲ್ಲ ಎಂಬ ಪೇಜಾವರ ಶ್ರೀಗಳ ಹೇಳಿಕೆಯಿಂದ ಕಸಿವಿಸಿಗೊಂಡಿರುವ ಬಿಜೆಪಿ, ಅದರಿಂದ ಉಂಟಾಗಬಹುದಾದ ನಕಾರಾತ್ಮಕ ಪರಿಣಾಮವನ್ನು ಸರಿಪಡಿಸಲು ಮುಂದಾಗಿದೆ.
ರಾಜ್ಯದ ಪ್ರಭಾವಿ ಸ್ವಾಮೀಜಿಗಳಲ್ಲಿ ಒಬ್ಬರಾಗಿರುವ ಪೇಜಾವರ ಶ್ರೀಗಳು ಮೋದಿ ಅವರ ಆಡಳಿತದ ಕುರಿತು ನೀಡಿರುವ ಹೇಳಿಕೆಯನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.
ಉಡುಪಿ ಮಠದಲ್ಲಿ ಈ ಬಾರಿಯೂ ಇಫ್ತಾರ್ ಕೂಟ: ಪೇಜಾವರ ಶ್ರೀ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಕೇಂದ್ರದ ಪ್ರಮುಖ ನಾಯಕರು ಪ್ರಚಾರ ನಡೆಸಿದ್ದರೂ ಬಿಜೆಪಿ ಬಹುಮತ ಪಡೆದುಕೊಳ್ಳುವಲ್ಲಿ ಸಫಲವಾಗಿರಲಿಲ್ಲ. ಇದು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಇದರ ನಡುವೆಯೇ ಪೇಜಾವರ ಶ್ರೀಗಳ ಹೇಳಿಕೆಯಿಂದ ಬಿಜೆಪಿ ತೀವ್ರ ಮುಜುಗರಕ್ಕೆ ಸಿಲುಕಿದೆ. ರಾಜ್ಯದಲ್ಲಿನ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉದ್ದೇಶಕ್ಕೆ ಇದು ಹಿನ್ನಡೆ ಉಂಟುಮಾಡಲಿದೆ.
ಹೀಗಾಗಿ ಮೋದಿ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಗಳನ್ನು ಪ್ರಮುಖ ಗಣ್ಯರಿಗೆ ತಿಳಿಸಲು ಬಿಜೆಪಿ ಮುಂದಾಗಿದೆ.
ಪೇಜಾವರ ಸ್ವಾಮೀಜಿ ಅವರು ಬಿಜೆಪಿ ಜತೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಆದರೆ ಸರ್ಕಾರದ ಆಡಳಿತದ ಬಗ್ಗೆ ಅವರಿಗೆ ಮಾಹಿತಿ ಸರಿಯಾಗಿ ನೀಡುವಲ್ಲಿ ಪಕ್ಷ ವಿಫಲವಾಗಿದೆ. ಇದರಿಂದ ಅವರು ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿರಬಹುದು. ಆದರೆ, ಇದು ಒಟ್ಟಾರೆಯಾಗಿ ಪಕ್ಷಕ್ಕೆ ಹೊಡೆತ ನೀಡಲಿದೆ ಎಂಬ ಕಳವಳ ವ್ಯಕ್ತವಾಗಿದೆ.
ಜನಸಾಮಾನ್ಯರಿಗೂ ಸರ್ಕಾರದ ಕಾರ್ಯವೈಖರಿ ಮತ್ತು ಸಾಧನೆಗಳ ಕುರಿತು ಮಾಹಿತಿ ಸಿಗದೆ ಇರಬಹುದು. ಈ ಕಾರಣಗಳಿಂದ ವ್ಯಾಪಕವಾಗಿ ಪ್ರಚಾರ ಅಭಿಯಾನ ನಡೆಸಲು ಬಿಜೆಪಿ ಮುಂದಾಗಿದೆ.
ಜನಸಾಮಾನ್ಯರಿಗೆ ಮತ್ತು ಗಣ್ಯ ವ್ಯಕ್ತಿಗಳಿಗೆ ಎನ್ಡಿಎ ಸರ್ಕಾರ ಮಾಡಿರುವ ಕೆಲಸ ಕಾರ್ಯಗಳ ಕುರಿತು ಮನವರಿಕೆ ಮಾಡುವಂತೆ ಹೈಕಮಾಡ್, ರಾಜ್ಯ ಘಟಕಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಆಡಳಿತ ತೃಪ್ತಿ ತಂದಿಲ್ಲ. ಕಪ್ಪು ಹಣವನ್ನು ಹೊರತರದೆ ಇರುವುದು ಮತ್ತು ಗಂಗಾ ನದಿಯ ಶುದ್ಧೀಕರಣ ವಾಗದೆ ಇರುವುದು ಸರ್ಕಾರಕ್ಕೆ ಹಿನ್ನಡೆ ಉಂಟುಮಾಡಿದೆ ಎಂದು ಪೇಜಾವರ ಸ್ವಾಮೀಜಿ ಹೇಳಿದ್ದರು.