ವಿಧಾನಸೌಧವನ್ನು ಹಾಸನಕ್ಕೆ ಶಿಫ್ಟ್ ಮಾಡಿದರೆ ಆಶ್ಚರ್ಯವಿಲ್ಲ: ಬಿಜೆಪಿ ಟೀಕೆ
ಬೆಂಗಳೂರು, ಸೆಪ್ಟೆಂಬರ್ 5: ಬೆಳಗಾವಿಯಲ್ಲಿರುವ ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸಲು ಹೊರಟಿರುವ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಿರುವ ಬೆಳಗಾವಿಯ ಸುವರ್ಣಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಬೆಳಗಾವಿಯಲ್ಲಿದ್ದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆಶಿಪ್) ವಿಭಾಗ ಮಟ್ಟದ ಕಚೇರಿಯನ್ನು ಹಾಸನಕ್ಕೆ ಶಿಫ್ಟ್ ಮಾಡುವಂತೆ ಆದೇಶ ಹೊರಡಿಸಿದೆ. ಕೇವಲ ಕೆಶಿಪ್ ಕಚೇರಿ ಮಾತ್ರವಲ್ಲ ವಿಧಾನಸೌಧವನ್ನೇ ಹಾಸನಕ್ಕೆ ಸ್ಥಳಾಂತರಿಸಿದರೂ ಯಾವುದೇ ಆಶ್ಚರ್ಯ ಇಲ್ಲ ಎಂದು ಟ್ವಿಟ್ಟರ್ ನಲ್ಲಿ ಈ ಕುರಿತು ಬಿಜೆಪಿ ಕರ್ನಾಟಕ ಬರೆದುಕೊಂಡಿದೆ.
Cong-JDS govt is shifting KSHIP office from Belagavi to Hassan. At this rate don’t be surprised if they shift Vidhana Soudha also to Hassan. Kumaraswamy’s govt is time & again ensuring other districts are deprived of all facilities & moving them to Mandya, Hassan or Ramnagara.
— BJP Karnataka (@BJP4Karnataka) September 5, 2018
ಕೇವಲ 24 ಗಂಟೆಯಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಟ್ಟ ಕುಮಾರಸ್ವಾಮಿ
ಉ.ಕ ಅಭಿವೃದ್ಧಿಯ ಹೊಣೆ ತಾವೇ ಹೊರುವುದಾಗಿ ಕಳೆದ ವಾರವೇ ಹೇಳಿಕೆ ನೀಡಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ನುಡಿದಂತೆ ನಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜ್ಯ ಹೆದ್ದಾರಿ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿರುವಾಗಲೇ ಕೆಶಿಪ್ ವಿಭಾಗ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪವಿಭಾಗ ಮಟ್ಟದ ಕಚೇರಿಯನ್ನು ಮಡಿಕೇರಿಗೆ ಶಿಫ್ಟ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸರ್ಕಾರದ ಮೂರು ಕಚೇರಿ ಬೆಳಗಾವಿಗೆ ಶಿಫ್ಟ್: ಎಚ್ಡಿಕೆ ಘೋಷಣೆ
ಈ ರೀತಿ ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸಿದರೆ ಉತ್ತರ ಕರ್ನಾಟಕದ ಜನರ ನಂಬಿಕೆ, ಅವರ ಆಸೆಗಳು ಮಣ್ಣುಪಾಲಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರೆ, ಹಾಸನ ಜನರು ಕೂಡ ಕೆಶಿಪ್ ಕಚೇರಿ ಹಾನಕ್ಕೆ ಬರಲಿ ಎಂದು ಒತ್ತಡ ಹೇರಿದ್ದರು ಅದಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಬಿಜೆಪಿಯವರು ಒಂದು ತಿಂಗಳ ಮೊದಲೇ ವಿರೋಧಿಸಬೇಕಿತ್ತು ಎನ್ನುವ ಹಾರಿಕೆ ಉತ್ತರವನ್ನು ಟಿಎ ಶರವಣ ನೀಡಿದ್ದಾರೆ.
ಸರ್ಕಾರದ ಆದೇಶದಲ್ಲೇನಿದೆ?
ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಜೂನ್ 11 ಮತ್ತು 25 ರಂದು ಅಧಿಕಾರಿಗಳ ಸಭೆಯಲ್ಲಿ ಈ ಕಚೇರಿಗಳನ್ನು ಬೆಳಗಾವಿಯಿಂದ ಸ್ಥಳಾಂತರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ ಜುಲೈ 27 ರಂದು ಬೆಳಗಾವಿಯ ಕೆ-ಶಿಪ್ ವಿಭಾಗೀಯ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪವಿಭಾಗದ ಕಚೇರಿಯನ್ನು ಮಡಿಕೇರಿಗೆ ಹುದ್ದೆಗಳ ಸಮೇತ ಸ್ಥಳಾಂತರಿಸುವಂತೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಸಚಿವ ರೇವಣ್ಣ ಅವರ ಮೇಲೆ ಆರೋಪ
ಬೆಳಗಾವಿ ಕೆಶಿಪ್ ವಿಭಾಗೀಯ ಮಟ್ಟದ ಕಚೇರಿ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. ಶೇ.70ರಷ್ಟುಕಾಮಗಾರಿ ಪೂರ್ಣಗೊಂಡಿದ್ದು, ಶೇ.30 ರಷ್ಟುಕಾಮಗಾರಿ ನಡೆಯಬೇಕಿದೆ. ಇದೀಗ ತಕ್ಷಣ ಹುದ್ದೆಗಳ ಸಮೇತ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.. ಇದರ ಹಿಂದೆ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರ ಪ್ರಭಾವ ಕೆಲಸ ಮಾಡಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಮಂಡ್ಯ, ರಾಮನಗರದಲ್ಲಿರುವ ಕಚೇರಿಗಳು ಸ್ಥಳಾಂತರವಾಗುವುದೇ?
ಹಾಗಾದರೆ ಇದೀಗ ಮಂಡ್ಯ, ರಾಮನಗರ ಭಾಗದಲ್ಲಿರುವ ಇಲಾಖೆಗಳು ಕಾರ್ಯವನ್ನು ಕೈಬಿಡುತ್ತದೆಯೇ ಎನ್ನುವುದು ಕೂಡ ಒಂದು ಪ್ರಶ್ನೆಯಾಗಿದೆ. ಬೆಳಗಾವಿಯಿಂದ ಬೇರೆ ಜಿಲ್ಲೆಗೆ ಬೇಕಾದರೆ ವರ್ಗಾಯಿಸಬಹುದಾಗಿತ್ತು ಆದರೆ ಹಾಸನಕ್ಕೇ ಯಾಕೆ ವರ್ಗಾವಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ಹಿಂದೆ ಹಾಸನದಲ್ಲಿ ಕೆಶಿಪ್ ಕಾರ್ಯ ನಿರ್ವಹಿಸುತ್ತಿರಲಿಲ್ಲ.
ಕೆ-ಶಿಪ್ ಹಾಸನ ಕಚೇರಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅರಕಲಗೂಡು, ಆಲೂರು, ಬೇಲೂರು, ಸಕಲೇಶಪುರ ಉಪ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ, ಮಡಿಕೇರಿ ಉಪವಿಭಾಗದ ಕಚೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ಈ ಹಿಂದೆ ಹಾಸನದಲ್ಲಿ ಕೆಶಿಪ್ ಕಚೇರಿ ಕಾರ್ಯನಿರ್ವಹಿಸುತ್ತಿರಲಿಲ್ಲ.