ಉಪ ಚುನಾವಣೆ: ಕೇಂದ್ರ ಸಮಿತಿಗೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ!
ಬೆಂಗಳೂರು, ಮಾ. 20: ಮೂರು ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯ ಮಹತ್ವದ ಸಭೆ ನಡೆದಿದೆ. ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಸಭೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಅಭ್ಯರ್ಥಿಗಳ ಕುರಿತು ಚರ್ಚಿಸಿದ್ದು, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಿದ್ದಾರೆ ಎಂದರು.
Recommended Video
ಸ್ಥಳೀಯ ಸಂಸ್ಥೆಗಳ ಚುನಾವಣೆ, ಮೀಸಲಾತಿ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಪ್ರಚಲಿತ ರಾಜಕೀಯ ಕುರಿತು ಚರ್ಚಿಸಲಾಗಿದೆ. ಬಿಜೆಪಿಯನ್ನು ಏಪ್ರಿಲ್ 6ರಂದು ಸ್ಥಾಪಿಸಲಾಯಿತು. ಮುಂದಿನ ಏಪ್ರಿಲ್ ತಿಂಗಳಿಗೆ ಬಿಜೆಪಿ 41 ವರ್ಷಗಳನ್ನು ಪೂರೈಸಲಿದೆ. ಈ ಸಂಬಂಧ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಲಾಗಿದೆ ಎಂದು ಅವರು ವಿವರಿಸಿದರು.
ಯಡಿಯೂರಪ್ಪ ಬದಲಾವಣೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ!
ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಅಜ್ಞಾತ ವಾಸ ಅನುಭವಿಸಿದ್ದಾರೆ. ಜೊತೆಗೆ ಬೆಳಗಾವಿಯಲ್ಲಿ ದಿ. ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ಕೊಡುವ ಕುರಿತಂತೆ ಕೇಂದ್ರದ ನಿರ್ಧಾರವನ್ನು ಕಾದು ನೋಡೋಣ ಎಂದು ಸಿಟಿ ರವಿ ಹೇಳಿದರು.
ತಮಿಳುನಾಡು ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಕೆ. ಅಣ್ಣಾಮಲೈ, ಖುಷ್ಬೂ ಸೇರಿದಂತೆ ಅನೇಕರು ಸ್ಪರ್ಧೆಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾರ್ಯಕ್ರಮದ ಆಧಾರದಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಳವಣಿಗೆಗೆ ಪೂರಕವಾದ ಫಲಿತಾಂಶ ಬರಲಿದೆ ಎಂದು ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.
2016ರಲ್ಲೂ ಡಿಎಂಕೆ ಪಕ್ಷದ ನಾಯಕರು ಅಧಿಕಾರ ಖಚಿತ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಅಧಿಕಾರ ಸಿಗಲಿಲ್ಲ. ಈಗಲೂ ಅದೇ ನಿರೀಕ್ಷೆ ಅವರಲ್ಲಿದೆ. ಆದರೆ, ಗೂಂಡಾ ರಾಜಕೀಯ ಮಾಡುವ ಡಿಎಂಕೆಯನ್ನು ಜನರು ತಿರಸ್ಕರಿಸಲಿದ್ದಾರೆ. ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಹೇಳಿದರು.