ಏಳಕ್ಕೆ ಏಳು ರಿಸರ್ವ್ ಸೀಟು ಕ್ಲೀನ್ ಸ್ವೀಪ್ ಮಾಡಿದರೂ ಒಬ್ಬರಿಗೂ ಮಂತ್ರಿ ಸ್ಥಾನ ಸಿಗಲಿಲ್ಲ
ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ ಮಂತ್ರಿ ಮಂಡಲವನ್ನು ರಚನೆ ಮಾಡಿಯಾಗಿದೆ. ಅದರ ಜೊತೆಗೆ, ಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯ ನೀಡಲಾಗಿದೆ ಎನ್ನುವ ಚರ್ಚೆಯೂ ಆರಂಭವಾಗಿದೆ.
ಕರ್ನಾಟಕದ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಮೂರು ಸೀಟುಗಳನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಬಿಜೆಪಿ ಜಯಭೇರಿ ಬಾರಿಸಿತ್ತು. ಮಂಡ್ಯ (ಪಕ್ಷೇತರ), ಬೆಂಗಳೂರು ಗ್ರಾಮಾಂತರ (ಕಾಂಗ್ರೆಸ್) ಮತ್ತು ಹಾಸನ (ಜೆಡಿಎಸ್) ಕ್ಷೇತ್ರಗಳಲ್ಲಿ ಬಿಜೆಪಿಯೇತರ ಅಭ್ಯರ್ಥಿಗಳು ಜಯಗಳಿಸಿದ್ದರು.
ಹಲವು ಘಟಾನುಗಟಿ ನಾಯಕರುಗಳು ಈ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಬಿಜೆಪಿಗೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕ್ಷೇತ್ರವನ್ನು ಮತದಾರ ನೀಡಿದ್ದ. ರಾಜ್ಯದ 28ಕ್ಷೇತ್ರಗಳಲ್ಲಿ ಏಳು ಮೀಸಲು ಕ್ಷೇತ್ರಗಳು. ಈ ಎಲ್ಲಾ ಸೀಟುಗಳನ್ನು ಬಿಜೆಪಿ ಗೆದ್ದದ್ದು ವಿಶೇಷ.
ಬಿಜೆಪಿಯ 'ಲೂಸ್ ಟಾಕ್' ಸಂಸದರಿಗೆ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಸಿಗಲೇ ಇಲ್ಲ
ಆದರೆ, ಮೀಸಲು ಕ್ಷೇತ್ರದಿಂದ ಗೆದ್ದ ಯಾರಿಗೂ ನರೇಂದ್ರ ಮೋದಿ ಸರಕಾರದಲ್ಲಿ ಅವಕಾಶ ಸಿಗಲಿಲ್ಲ ಎನ್ನುವ ಕೂಗು ಅಲ್ಲಲ್ಲಿ ಆರಂಭವಾಗಿದೆ. ಇವರಲ್ಲಿ ಕೆಲವರು ಬಹಿರಂಗವಾಗಿಯೇ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದರು. ಯಾರು ಆಕಾಂಕ್ಷಿಯಾಗಿದ್ದರು? ಮುಂದೆ ಓದಿ..
ವೈ ದೇವೇಂದ್ರಪ್ಪ, ಕಾಂಗ್ರೆಸ್ಸಿನ ವಿ ಎಸ್ ಉಗ್ರಪ್ಪ ಅವರನ್ನು ಸೋಲಿಸಿದ್ದರು
ಬಳ್ಳಾರಿ ಕ್ಷೇತ್ರದಿಂದ ಆಯ್ಕೆಯಾದ ವೈ ದೇವೇಂದ್ರಪ್ಪ, ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ಸಿನ ವಿ ಎಸ್ ಉಗ್ರಪ್ಪ ಅವರನ್ನು ಸೋಲಿಸಿದ್ದರು. ಎಸ್ ಟಿ ಮೀಸಲು ಕ್ಷೇತ್ರವಾಗಿರುವ ಬಳ್ಳಾರಿಯಲ್ಲಿ ಬಿಜೆಪಿ 616,388 ಮತಗಳನ್ನು ಪಡೆದು ಉಗ್ರಪ್ಪ ಅವರನ್ನು 55,707 ಮತಗಳ ಅಂತರದಿಂದ ಸೋಲಿಸಿದ್ದರು. ದೇವೇಂದ್ರಪ್ಪ ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ.
ನೂತನವಾಗಿ ಆಯ್ಕೆಯಾದ ರಾಜ್ಯದ 28 ಸಂಸದರ ಜಾತಿ ಲೆಕ್ಕಾಚಾರ
ಬಿಜೆಪಿಯ ರಮೇಶ್ ಜಿಗಜಿಣಗಿ ಮತ್ತೆ ಉಳಿಸಿಕೊಂಡಿದ್ದಾರೆ
ವಿಜಯಪುರ ಎಸ್ ಸಿ ಕ್ಷೇತ್ರವನ್ನು ಬಿಜೆಪಿಯ ರಮೇಶ್ ಜಿಗಜಿಣಗಿ ಮತ್ತೆ ಉಳಿಸಿಕೊಂಡಿದ್ದಾರೆ. ಮೋದಿ ಸರಕಾರದ ಮೊದಲ ಅವಧಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣದ ಕೇಂದ್ರ ಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದ ಜಿಗಜಿಣಗಿ, ಈ ಬಾರಿಯೂ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು. ಜಿಗಜಿಣಗಿ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ಸಿನ ಸುನೀತಾ ಚವಾಣ್ ಅವರನ್ನು 258,038 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.
ಕಾಂಗ್ರೆಸ್ಸಿನಿಂದ ಕ್ಷೇತ್ರವನ್ನು ಗೆದ್ದ ಶ್ರೀನಿವಾಸ ಪ್ರಸಾದ್
ಕಾಂಗ್ರೆಸ್ ಮುಖಂಡರ ಜೊತೆಗೆ ಮುನಿಸಿಕೊಂಡು ಬಿಜೆಪಿ ಸೇರಿದ್ದ ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್, ಚಾಮರಾಜನಗರ ಎಸ್ ಸಿ ಕ್ಷೇತ್ರದಿಂದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ತನ್ನದೇ ಶಿಷ್ಯ ಧ್ರುವನಾರಾಯಾಣ್ ಅವರನ್ನು ಸೋಲಿಸಿ, ಲೋಕಸಭೆಗೆ ಆಯ್ಕೆಯಾದರು. ಕೇವಲ 1,817 ಮತಗಳ ಅಂತರದಿಂದ ಗೆದ್ದಿದ್ದ ಶ್ರೀನಿವಾಸಪ್ರಸಾದ್ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು.
ಬೆಂಗಳೂರು ಆನೇಕಲ್ ಮೂಲದ ಎ ನಾರಾಯಣಸ್ವಾಮಿ
ಬೆಂಗಳೂರು ಆನೇಕಲ್ ಮೂಲದ ಎ ನಾರಾಯಣಸ್ವಾಮಿ ಚಿತ್ರದುರ್ಗ ಎಸ್ ಸಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಬಿ ಎನ್ ಚಂದ್ರಪ್ಪ ಅವರನ್ನು 80,178 ಮತಗಳ ಅಂತರದಿಂದ ಸೋಲಿಸಿದ್ದರು. ನಾರಾಯಣಸ್ವಾಮಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ.
ಖರ್ಗೆ ಸೋಲಿಸಿದ ಜಾಧವ್
ಅಚ್ಚರಿಯ ಫಲಿತಾಂಶದಲ್ಲಿ ಕಲಬುರಗಿ ಎಸ್ ಸಿ ಕ್ಷೇತ್ರದಿಂದ ಬಿಜೆಪಿಯ ಡಾ. ಉಮೇಶ್ ಜಾಧವ್ ಗೆದ್ದಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಜಾಧವ್ ಆಯ್ಕೆಯಾಗಿದ್ದರಿಂದ, ಕೇಂದ್ರದಲ್ಲಿ ಸಚಿವಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಜಾಧವ್ ಅವರು ಖರ್ಗೆಯವರನ್ನು 95,452 ಮತಗಳ ಅಂತರದಿಂದ ಸೋಲಿಸಿದ್ದರು.
ಮುನಿಯಪ್ಪ ಅವರನ್ನು ಎಸ್ ಮುನಿಸ್ವಾಮಿ ಸೋಲಿಸಿದ್ದುರು
ಈ ಬಾರಿಯ ಚುನಾವಣೆಯ ಮತ್ತೊಂದು ಅಚ್ಚರಿಯ ಫಲಿತಾಂಶ ಕೋಲಾರ (ಎಸ್ ಸಿ). ಸೋಲಿಲ್ಲದ ಸರದಾರ ಕೆ ಎಚ್ ಮುನಿಯಪ್ಪ ಅವರನ್ನು ಬೆಂಗಳೂರು ಕಾರ್ಪೋರೇಟರ್ ಆಗಿದ್ದ ಎಸ್ ಮುನಿಸ್ವಾಮಿ ಸೋಲಿಸಿದ್ದರು. 210,021 ಮತಗಳ ಭಾರೀ ಲೀಡ್ ನಿಂದ ಮುನಿಸ್ವಾಮಿ ಗೆದ್ದಿದ್ದರು. ಇವರು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ.
ರಾಜಾ ಅಮರೇಶ್ವರ ನಾಯಕ್ ಜಯಭೇರಿ
ರಾಯಚೂರು (ಎಸ್ ಟಿ) ಕ್ಷೇತ್ರದಿಂದ ರಾಜಾ ಅಮರೇಶ್ವರ ನಾಯಕ್, ಕಾಂಗ್ರೆಸ್ಸಿನ ಬಿ ವಿ ನಾಯಕ್ ಅವರನ್ನು 117,716 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ಇವರೇನೂ ಸಚಿವಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಒಟ್ಟು ಏಳು ಮೀಸಲು ಕ್ಷೇತ್ರದಲ್ಲಿ ಆಯ್ಕೆಯಾಗಿದ್ದವರ ಪೈಕಿ ಮೂವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು.