ಪಕ್ಷದ ವಿರುದ್ಧವೇ ವಾಗ್ದಾಳಿ: ಬಸನಗೌಡ ಯತ್ನಾಳ್ಗೆ ಬಿಜೆಪಿ ನೋಟಿಸ್
ವಿಜಯಪುರ, ಅಕ್ಟೋಬರ್ 4: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಂಕಷ್ಟ ಎದುರಾಗಿದೆ. ತಮ್ಮದೇ ಪಕ್ಷದ ವಿರುದ್ಧ ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿರುವ ಅವರಿಗೆ ಬಿಜೆಪಿ ನೋಟಿಸ್ ನೀಡಿದೆ.
ಸ್ವಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ಹರಿಹಾಯ್ದ ಕಾರಣಕ್ಕೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿಯಿಂದ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ವಿಜಯಪುರ ವಿಧಾನಸಭೆಯ ಪ್ರತಿನಿಧಿಯಾದ ನೀವು ಭಾರತೀಯ ಜನತಾ ಪಕ್ಷದ ಹಾಲಿ ಶಾಸಕರಾಗಿ ಅ. 1 ಮತ್ತು 3ರಂದು ಬಹಿರಂಗವಾಗಿ ಟಿವಿ ವಾಹಿನಿಗಳಿಗೆ ಸಂದರ್ಶನ ನೀಡಿದ್ದೀರಿ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ರಾಜ್ಯ, ಕೇಂದ್ರ ಸಚಿವರ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಚಾಟಿ
ನೋಟಿಸ್ಗೆ ಹತ್ತು ದಿನಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯದ ನಾಯಕರ ವಿರುದ್ಧ ಟೀಕೆ ಮಾಡಿರುವುದೇಕೆ? ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತೆ ಜನರನ್ನು ಪ್ರಚೋದನೆ ಮಾಡಿದ್ದೇಕೆ? ಪರಿಹಾರ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದೀರಾ? ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಸರ್ಕಾರದ ಪ್ರಯತ್ನ ಅವಮಾನಿಸಿದ್ದೀರಿ
ಕರ್ನಾಟಕದಲ್ಲಿ ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸೂಕ್ತ ಸಮಯದಲ್ಲಿ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ನಿಮ್ಮದೇ ಸರ್ಕಾರವು ನಡೆಸಿದ ಕಠಿಣ ಪ್ರಯತ್ನಗಳನ್ನು ಅವಮಾನಿಸಿದ್ದೀರಿ ಮತ್ತು ಟೀಕಿಸಿದ್ದೀರಿ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ದೈಹಿಕ ಹಿಂಸಾಚಾರಕ್ಕೆ ಪ್ರಚೋದನೆ
ಪಕ್ಷದ ನಾಯಕರಿಗೆ ಬಾರಿಸುವ ಮೂಲಕ ಪಾಠ ಕಲಿಸಿ ಎಂದು ಕರ್ನಾಟಕದ ಜನರಿಗೆ ಸಲಹೆ ನೀಡುವ ಮೂಲಕ ಪಕ್ಷ ಮತ್ತು ಅದರ ನಾಯಕರಿಗೆ ಬೆದರಿಕೆ ಒಡ್ಡಿದ್ದೀರಿ. ಇದು ಸುಳ್ಳುಗಳನ್ನು ಹರಡುವ ಮೂಲಕ ಜನರಲ್ಲಿ ಕ್ಷೋಭೆಯನ್ನು ಉಂಟುಮಾಡುವ ಹಾಗೂ ದೈಹಿಕ ಹಿಂಸೆಗೆ ಪ್ರಚೋದನೆ ನೀಡಿರುವ ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ನೆರೆಗೆ ಕೇಂದ್ರದ ನೆರವಿನ ಅಗತ್ಯವಿಲ್ಲ ಎಂದ ತೇಜಸ್ವಿ ಸೂರ್ಯ ವಿರುದ್ಧ ಶಾಸಕ ಯತ್ನಾಳ ಕಿಡಿ
ಪಕ್ಷ ಮತ್ತು ನಾಯಕತ್ವದ ವಿರುದ್ಧ ಆರೋಪ
ಶಕ್ತಿ ಕೇಂದ್ರಗಳು ಎಂದು ಕರೆಯುವ ಮೂಲಕ ಸುಳ್ಳುಗಳನ್ನು ಹರಡಿ ಹಾಗೂ ಪಕ್ಷದ ನಾಯಕತ್ವದ ವಿರುದ್ಧ ಆರೋಪಗಳನ್ನು ಮಾಡಿರುವುದಲ್ಲದೆ, ವಾಸ್ತವ ಹಾಗೂ ಸತ್ಯಕ್ಕೆ ವಿರುದ್ಧವಾಗಿ ಕರ್ನಾಟಕದ ಸಮಸ್ಯೆಗಳಿಗೆ ಪಕ್ಷದ ನಾಯಕತ್ವವು ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ಕೂಡ ಆರೋಪಿಸಿದ್ದೀರಿ ಎಂಬುದಾಗಿ ಹೇಳಲಾಗಿದೆ.
ಸುಳ್ಳು ಮತ್ತು ವದಂತಿ ಹಬ್ಬಿಸುವ ಪ್ರಯತ್ನ
ಟಿವಿ ಚಾನೆಲ್ಗಳಲ್ಲಿನ ನಿಮ್ಮ ಸಂದರ್ಶನಗಳು ಮತ್ತು ಇತರೆ ಹೇಳಿಕೆಗಳು ಪಕ್ಷ, ಅದರ ನಾಯಕರು ಹಾಗೂ ಹಿಂದಿನ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ರಾಜಕೀಯ ಹಾಗೂ ಆಡಳಿತಾತ್ಮಕ ಬಿಕ್ಕಟ್ಟುಗಳಿಂದ ಕರ್ನಾಟಕವನ್ನು ಮೇಲೆತ್ತಲು ನಡೆಸುತ್ತಿರುವ ಪ್ರಯತ್ನಗಳ ವಿರುದ್ಧ ಸುಳ್ಳುಗಳನ್ನು ಮತ್ತು ವದಂತಿಗಳನ್ನು ಹಬ್ಬಿಸುವ ಪ್ರಯತ್ನವಾಗಿ ಕಾಣಿಸುತ್ತಿದೆ ಎಂದು ನೋಟಿಸ್ ಹೇಳಿದೆ.
ಬಿಜೆಪಿ ಪ್ರಭಾವಿ ಬಿ.ಎಲ್.ಸಂತೋಷ್ ವಿರುದ್ಧವೇ ಶಾಸಕ ಯತ್ನಾಳ್ ವಾಗ್ದಾಳಿ
ನಿಯಮ ಉಲ್ಲಂಘನೆಯ ಗಂಭೀರ ಪ್ರಕರಣ
ಪಕ್ಷ ಮತ್ತು ಅದರ ನಾಯಕರ ವಿರುದ್ಧದ ನಿಮ್ಮ ಉದ್ದೇಶ, ಹೇಳಿಕೆಗಳು ಹಾಗೂ ಆರೋಪಗಳು ಬಿಜೆಪಿಯ ನಿಯಮಗಳು ಹಾಗೂ ಸಂವಿಧಾನದ ಪ್ಯಾರಾ 10 (ಎ) ಮತ್ತು 10 (ಎಫ್) ಅಡಿ ವಿವರಿಸಿರುವಂತೆ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ ಗಂಭೀರ ಪ್ರಕರಣವಾಗಿದೆ. ನಿಮ್ಮ ವಿರುದ್ಧ ಪಕ್ಷವು ಏಕೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ಕೇಳಲಾಗಿದೆ.
ಉತ್ತರ ನೀಡದೆ ಇದ್ದರೆ...
ಈ ನೋಟಿಸ್ ತಲುಪಿದ ಹತ್ತು ದಿನಗಳಲ್ಲಿ ನೀವು ಯಾವುದೇ ವಿವರಣೆ ನೀಡದೆ ಇದ್ದರೆ ಈ ವಿಚಾರದಲ್ಲಿ ನೀವು ಹೇಳುವುದು ಏನೂ ಇಲ್ಲ ಎಂದು ಭಾವಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕೇಂದ್ರ ಶಿಸ್ತು ಸಮಿತಿಯು ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ನೋಟಿಸ್ನಲ್ಲಿ ಹೇಳಿದ್ದಾರೆ.