ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್?
ಬೆಂಗಳೂರು, ಫೆ. 12: ರಾಜ್ಯ ಬಿಜೆಪಿಯಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಷೋಕಾಸ್ ನೋಟಿಸ್ ಕೊಟ್ಟಿದೆ ಎನ್ನಲಾಗಿದ್ದು, ತಕ್ಷಣ ಸ್ಪಷ್ಟನೆ ಕೊಡುವಂತೆ ಸೂಚಿಸಿದೆ.
ಸದ್ಯದಲ್ಲಿಯೇ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಆಗಲಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರು ಕೇಳಗಿಳಿಯುತ್ತಾರೆ ಎಂದು ಶಾಸಕ ಯತ್ನಾಳ್ ಅವರು ಆಗಾಗ ಹೇಳಿಕೆ ನೀಡಿದ್ದರು. ಇದು ಪಕ್ಷ ಹಾಗೂ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗುರವನ್ನುಂಟು ಮಾಡಿತ್ತು. ಸಿಎಂ ಯಡಿಯೂರಪ್ಪ ಅವರಿಗಂತೂ ಯತ್ನಾಳ್ ಅವರ ಹೇಳಿಕೆಗಳಿಂದ ಸಾಕಷ್ಟು ಮುಜುಗುರ ಉಂಟಾಗಿತ್ತು.
ಸಿಡಿ ಇಟ್ಟುಕೊಂಡವರಿಗೆ ಸಚಿವಸ್ಥಾನ ಕೊಡಲಾಗಿದೆ. ಜೊತೆಗೆ ಶಾಸಕರ ಸಭೆಯಲ್ಲಿ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಸಿಎಂ ಯಡಿಯೂರಪ್ಪ ಅವರು ತಾರತಮ್ಯ ಮಾಡುತ್ತಿದ್ದಾರೆಂದು ಅವರ ಎದುರೇ ಯತ್ನಾಳ್ ಹರಿಹಾಯ್ದಿದ್ದರು ಎನ್ನಲಾಗಿತ್ತು. ಯತ್ನಾಳ್ ಅವರ ಹೇಳಿಕೆಗಳಿಂದ ರಾಜ್ಯ ಬಿಜೆಪಿ ನಾಯಕರಿಗೂ ಇರುಸು ಮುರುಸಾಗಿತ್ತು. ಹೀಗಾಗಿ ಅಂತಿಮವಾಗಿ ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
Recommended Video
ತಕ್ಷಣವೇ ಉತ್ತರಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಾವ ರೀತಿಯಾಗಿ ಉತ್ತರವನ್ನು ಕೊಡುತ್ತಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.