ಇದು 2ನೇ ಬಾರಿ: ರಾಜ್ಯ ಘಟಕದ ಶಿಫಾರಸಿಗೆ ಬೆಲೆಯೇ ಕೊಡದ ಬಿಜೆಪಿ ಹೈಕಮಾಂಡ್
ಕರ್ನಾಟಕದಿಂದ, ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಬಹುಷಃ ರಾಜ್ಯ ಬಿಜೆಪಿ ನಾಯಕರು ಈ ಇಬ್ಬರು ನಾಯಕರ ಹೆಸರನ್ನು ಪ್ರಕಟಿಸಬಹುದು ಎಂದು ಊಹಿಸಿರಲಿಕ್ಕಿಲ್ಲ.
ಕಳೆದ ಶನಿವಾರ ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿಯ ಸದಸ್ಯರು ಮೂವರ ಹೆಸರನ್ನು ಶಿಫಾರಸು ಮಾಡಿ, ಬಿಜೆಪಿ ವರಿಷ್ಠರಿಗೆ ಕಳುಹಿಸಿತ್ತು. ಪ್ರಭಾಕರ ಕೋರೆ, ರಮೇಶ್ ಕತ್ತಿ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿಯವರ ಹೆಸರನ್ನು ಶಿಫಾರಸು ಮಾಡಲಾಗಿತ್ತು.
ರಾಜ್ಯಸಭೆ: ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
ಈ ಮೂವರಲ್ಲಿ ಯಾರಾದರೂ ಇಬ್ಬರಿಗೆ ಟಿಕೆಟ್ ಸಿಗುವುದು ಖಾತ್ರಿ ಎಂದು ಹೇಳಲಾಗಿತ್ತಿತ್ತು. ಆದರೂ, ಈ ಹೆಸರನ್ನು ಬಿಟ್ಟು, ಬಿಜೆಪಿ ಕೇಂದ್ರದ ನಾಯಕರು ಬೇರೆ ಹೆಸರನ್ನು ಪ್ರಕಟಿಸಬಹುದು ಎನ್ನುವ ಅನುಮಾನವೂ ರಾಜ್ಯ ನಾಯಕರಿಗೆ ಕಾಡುತ್ತಿತ್ತು. ಅದು ನಿಜವಾಗಿದೆ.
ದೇವೇಗೌಡ್ರು ಕಣಕ್ಕಿಳಿದರೆ ಬಿಜೆಪಿಯದ್ದು ಒಂದು ಲೆಕ್ಕಾಚಾರ, ಇಲ್ಲದಿದ್ದರೆ ಇನ್ನೊಂದು
ಪಕ್ಷ ನಿಷ್ಠರಿಗೆ ಬಿಜೆಪಿಯ ವರಿಷ್ಠರು ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಫಾರಸಿಗೆ ಬಿಜೆಪಿಯ ಕೇಂದ್ರದ ನಾಯಕರು ಮಣೆಹಾಕಿದ್ದಾರೆಯೇ ಎನ್ನುವ ಪ್ರಶ್ನೆ ಏಳಲಾರಂಭಿಸಿದೆ. ರಾಜ್ಯ ಬಿಜೆಪಿ ನಾಯಕರಿಗೆ ಹೀಗಾಗುತ್ತಿರುವುದು ಇದು ಎರಡನೇ ಬಾರಿ.
ಪ್ರಭಾಕರ ಕೋರೆ ಮತ್ತು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ
ಬೆಳಗಾವಿ ಜಿಲ್ಲೆಯ ಇಬ್ಬರು ಪ್ರಭಾವೀ ಮುಖಂಡರಾದ ಪ್ರಭಾಕರ ಕೋರೆ ಮತ್ತು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಬಿಜೆಪಿ ಟಿಕೆಟಿನ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅದರಲ್ಲೂ, ಉಮೇಶ್ ಕತ್ತಿ ಒಂದು ಹಂತದಲ್ಲಿ ಬಂಡಾಯವನ್ನೂ ಎದ್ದಿದ್ದರು. ಆದರೆ, ಬಿಜೆಪಿ ವರಿಷ್ಠರು ಇದಕ್ಕೆ ಸೊಪ್ಪು ಹಾಕಲಿಲ್ಲ.
ಬೆಳಗಾವಿಯ ಈರಣ್ಣ ಕಡಾಡಿ
ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ರಾಜ್ಯಸಭಾ ಟಿಕೆಟ್ ಘೋಷಣೆ ಮಾಡುವ ಮೂಲಕ, ಅಶಿಸ್ತು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಿದೆ. ಆರ್ ಎಸ್ ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈರಣ್ಣ ಅಚ್ಚರಿಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಈರಣ್ಣ ಸಂಘಟನೆಯ ಮತ್ತು ಪಕ್ಷದ ಹಲವು ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ.
ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಅಶೋಕ್ ಗಸ್ತಿ
ಇನ್ನೊಂದು ಸ್ಥಾನಕ್ಕೆ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಅಶೋಕ್ ಗಸ್ತಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಅಶೋಕ್ ಗಸ್ತಿ ಸವಿತಾ ಸಮಾಜದವರಾಗಿದ್ದರೆ, ಈರಳ್ಳ ಕಡಾಡಿ ಲಿಂಗಾಯತ ಸಮುದಾಯದವರು. ಬಿಜೆಪಿ ವರಿಷ್ಠರು ಈ ರೀತಿ, ರಾಜ್ಯ ನಾಯಕರಿಗೆ ಶಾಕ್ ಕೊಡುತ್ತಿರುವುದು ಇದು ಎರಡನೇ ಸಲ.
ತೇಜಸ್ವಿನಿ ಅವರಿಗೆ ಟಿಕೆಟ್ ನೀಡದೆ ತೇಜಸ್ವಿ ಸೂರ್ಯಗೆ ಟಿಕೆಟ್
ಕಳೆದ ಲೋಕಸಭಾ ಚುನಾವಣೆಯಲ್ಲೂ ಪ್ರತಿಷ್ಟಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಿ, ರಾಜ್ಯ ಬಿಜೆಪಿ ಘಟಕ ಕಳುಹಿಸಿತ್ತು. ಆದರೆ, ರಾಜ್ಯ ನಾಯಕರ ಮಾತಿಗೆ ಮನ್ನಣೆ ನೀಡದೇ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು.