ಕೆ. ಸುಧಾಕರ್ಗೆ ಮತ್ತೊಂದು ಜವಾಬ್ದಾರಿ ನೀಡಿದ ಬಿಜೆಪಿ
ಬೆಂಗಳೂರು, ನವೆಂಬರ್ 16: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರಿಗೆ ಬಿಜೆಪಿ ಹೈಕಮಾಂಡ್ ಮತ್ತೊಂದು ಪ್ರಮುಖ ಹೊಣೆಗಾರಿಕೆಯನ್ನು ವಹಿಸಿದೆ. ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಚುನಾವಣೆಯ ಬಿಜೆಪಿ ಸಹ ಪ್ರಭಾರಿಯನ್ನಾಗಿ ಸುಧಾಕರ್ ಅವರನ್ನು ನೇಮಕ ಮಾಡಲಾಗಿದೆ. ಅವರೊಂದಿಗೆ ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ಅವರನ್ನ ಕೂಡ ಸಹ ಪ್ರಭಾರಿಯನ್ನಾಗಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ.
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಭಾರಿಯನ್ನಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ನೇಮಿಸಲಾಗಿದೆ. ಸುಧಾಕರ್, ಸತೀಶ್ ರೆಡ್ಡಿ, ಮಹಾರಾಷ್ಟ್ರ ವಿಧಾನಸಭೆಯ ವಿರೋಧಪಕ್ಷದ ಮುಖ್ಯ ಸಚೇತಕ ಆಶೀಶ್ ಶೆಲರ್, ಗುಜರಾತ್ನ ಬಿಜೆಪಿ ನಾಯಕ ಪ್ರದೀಪ್ ಸಿಂಗ್ ವಘೇಲಾ ಅವರನ್ನು ಸಹ ಪ್ರಭಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿದ್ದ ಕೆ. ಸುಧಾಕರ್, ಆಗ ರಾಜೀನಾಮೆ ನೀಡಿದ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ 15 ಮಂದಿಯಲ್ಲಿ ಒಬ್ಬರು. ಬಳಿಕ ಅವರು 2019ರ ನವೆಂಬರ್ 14ರಂದು ಬಿಜೆಪಿ ಸೇರಿದ್ದರು, ಉಪ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಅವರು 2020ರ ಫೆಬ್ರವರಿಯಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದು ಒಂದು ವರ್ಷದಲ್ಲಿಯೇ ಅವರಿಗೆ ಪಕ್ಷದ ಸಂಘಟನೆಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ತಮ್ಮನ್ನು ಸಹ ಪ್ರಭಾರಿಯನ್ನಾಗಿ ನೇಮಿಸಿರುವುದಕ್ಕೆ ಕೆ. ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. 'ನನ್ನನ್ನು ಜಿಎಚ್ಎಂಸಿ ಚುನಾವಣೆಯ ಸಹ ಪ್ರಭಾರಿಯನ್ನಾಗಿ ನೇಮಿಸಿರುವುದಕ್ಕೆ ಬಿಜೆಪಿ ಹೈಕಮಾಂಡ್ಗೆ ಧನ್ಯವಾದಗಳು. ನನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಲು ಕಠಿಣ ಶ್ರಮ ಪಡುತ್ತೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ತೆಲಂಗಾಣ ವಿಧಾನಸಭೆಯ ಉಪ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿರುವ ಬಿಜೆಪಿ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಗುರಿ ಹೊಂದಿದೆ. ಈಗಿನ ಹೈದರಾಬಾದ್ ಪಾಲಿಕೆ ಅವಧಿ 2021ರ ಫೆಬ್ರವರಿ 10ರಂದು ಮುಗಿಯಲಿದೆ. ಅಷ್ಟರೊಳಗೆ ಅಲ್ಲಿನ 5 ವಲಯಗಳಲ್ಲಿನ, 18 ವೃತ್ತಗಳ 150 ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ.