ರಾಜ್ಯಪಾಲರಿಗೆ ಬಿಜೆಪಿ ದೂರು : ಆರ್.ಬಿ.ತಿಮ್ಮಾಪುರ ಹೇಳುವುದೇನು?
ಬೆಂಗಳೂರು, ಸೆಪ್ಟೆಂಬರ್ 01 : 'ಒಬ್ಬ ದಲಿತ ವ್ಯಕ್ತಿ ಸಚಿವನಾಗುವುದನ್ನು ಸಹಿಸದ ಮನುವಾದಿಗಳು ರಾಜ್ಯಪಾಲರಿಗೆ ದೂರು ನೀಡುತ್ತಿದ್ದಾರೆ' ಎಂದು ನಿಯೋಜಿತ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ತಿಮ್ಮಾಪುರ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದು, ರಾಜ್ಯಪಾಲರು ಸಚಿವ ಟಿ.ಬಿ.ಜಯಚಂದ್ರ ಬಳಿ ವಿವರಣೆ ಕೇಳಿದ್ದಾರೆ.
ಶುಕ್ರವಾರ ಸಂಜೆ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು.
ಸಚಿವರಾಗುವ ಮೊದಲೇ ತಿಮ್ಮಾಪುರಗೆ ಬಿಜೆಪಿ ಅಡ್ಡಗಾಲು
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಯಾವ ಖಾತೆಯ ನಿರೀಕ್ಷೆಯೂ ಇಲ್ಲ. ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಕಡಿಮೆ ಅವಧಿ ಇದ್ದರೂ ಸಮರ್ಥವಾಗಿ ಕೆಲಸ ಮಾಡುತ್ತೇನೆ' ಎಂದರು.
ಕೊನೆ ಕ್ಷಣದಲ್ಲಿ ಕೆ.ಷಡಕ್ಷರಿ ಕೈ ತಪ್ಪಿದ ಸಚಿವ ಸ್ಥಾನ!
'ಮನುವಾದಿಗಳು ಒಬ್ಬ ದಲಿತ ಸಚಿವ ಆಗುವುದನ್ನು ಸಹಿಸುತ್ತಿಲ್ಲ. ಆದ್ದರಿಂದ ರಾಜ್ಯಪಾಲರಿಗೆ ದೂರು ಕೊಡುವ ನಾಟಕವಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಇದಕ್ಕೆಲ್ಲ ಹೆದರುವುದಿಲ್ಲ' ಎಂದು ಹೇಳಿದರು.
ಆರ್.ಬಿ.ತಿಮ್ಮಾಪುರ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ವರದಿ ನೀಡಿದ್ದರು. ಅವರು ಈಗ ಬೆಂಗಳೂರಿನ ಮತದಾರರು. ಆದರೆ, ಬಾಗಲಕೋಟೆಯ ವಿಳಾಸ ನೀಡಿ ವಿಧಾನಪರಿಷತ್ ಭತ್ಯೆ ಪಡೆಯುತ್ತಿದ್ದಾರೆ ಎಂದು ಆಯೋಗಕ್ಕೆ ನೀಡಿದ್ದ ವರದಿಯಲ್ಲಿ ತಿಳಿಸಿದ್ದರು.
ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಅವರು ತಪ್ಪು ಮಾಡಿರುವುದು ವರದಿಯಲ್ಲಿ ಸಾಬೀತಾಗಿದೆ. ಆದ್ದರಿಂದ, ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಬಿಜೆಪಿ ದೂರು ನೀಡಿದೆ.
ವಿವರಣೆ ಕೇಳಿದ ರಾಜ್ಯಪಾಲರು ? : ರಾಜ್ಯಪಾಲ ವಜುಭಾಯಿ ವಾಲಾ ಈ ದೂರಿನ ಬಗ್ಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಬಳಿ ವಿವರಣೆ ಕೇಳಿದ್ದಾರೆ. ರಾಜಭವನಕ್ಕೆ ತುರ್ತು ಭೇಟಿ ನೀಡಿದ ಜಯಚಂದ್ರ ಅವರು ವಿವರಣೆ ನೀಡಿದ್ದಾರೆ. ಇಂದು ಸಂಜೆ 5 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದೆ.