ಗಂಟುಮೂಟೆ ಕಟ್ಟಲು ಸಿದ್ಧರಾಗಿ : ಬಿಜೆಪಿ, ಕಾಂಗ್ರೆಸ್ಸಿಗೆ ಎಎಪಿ ಎಚ್ಚರಿಕೆ
ಡೊನೇಷನ್ ಗೇಟ್ ಹಗರಣಕ್ಕೆ ಸಂಬಂಧಿಸದಂತೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ, "ಕಾಂಗ್ರೆಸ್, ಬಿಜೆಪಿ ಪರಸ್ಪರ ಕಾನೂನು ದಾಳಿಯನ್ನೂ ನಡೆಸಿಲ್ಲ. ಪರಸ್ಪರ ದೂರನ್ನೂ ನೀಡಿಲ್ಲ. ಇದು ಕೇವಲ ವಾಗ್ದಾಳಿ. ಗಂಡ ಹೆಂಡತಿ ಜಗಳ ಎಂದು ಎಎಪಿ ಕುಟುಕಿದೆ.
ಬೆಂಗಳೂರು, ಫೆಬ್ರವರಿ 25: ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ 'ಡೊನೇಷನ್ ಗೇಟ್' ಗಲಾಟೆಯನ್ನು ಗಂಡ ಹೆಂಡತಿ ಜಗಳ ಎಂದು ಎಎಪಿ ವ್ಯಂಗ್ಯವಾಡಿದೆ.
ಡೊನೇಷನ್ ಗೇಟ್ ಹಗರಣಕ್ಕೆ ಸಂಬಂಧಿಸದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಆಮ್ ಆದ್ಮಿ ಪಕ್ಷ, "ಕಾಂಗ್ರೆಸ್, ಬಿಜೆಪಿ ಪರಸ್ಪರ ಕಾನೂನು ದಾಳಿಯನ್ನೂ ನಡೆಸಿಲ್ಲ. ಪರಸ್ಪರ ದೂರನ್ನೂ ನೀಡಿಲ್ಲ. ಇದು ಕೇವಲ ವಾಗ್ದಾಳಿ. ಗಂಡ ಹೆಂಡತಿ ಜಗಳ ಎಂದು ಎಎಪಿ ಕುಟುಕಿದೆ. [ಗೋವಿಂದರಾಜ್ ಡೈರಿ ಸ್ಪೋಟ: ಕೋಟಿ ಕೋಟಿ ಹಣದ ಸಂಪೂರ್ಣ ವಿವರ]
ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತೀ ಚುನಾವಣೆ ಸಮಯದಲ್ಲಿ ಜನರಿಗೆ ಹಣ ಹೆಂಡ ಹಂಚುತ್ತಾ ಮತದಾರರನ್ನು ಓಲೈಸಲು ಯತ್ನಿಸಿ ಸಿಕ್ಕಿಬೀಳುತ್ತಿದ್ದರು, ಆದರೆ ಆ ಹಣದ ಮೂಲ ಯಾರಿಗೂ ತಿಳಿಯುತ್ತಿರಲಿಲ್ಲ. ಈ ಭ್ರಷ್ಟ ರಾಜಕೀಯ ಪಕ್ಷಗಳು ಯಾವ ಮೂಲದಿಂದ ಹಣವನ್ನು ಕ್ರೋಡಿಕರಿಸುತ್ತಾರೆ ಎಂಬುದು ಇದೀಗ ಇವರಿಬ್ಬರ ಪರಸ್ಪರ ಕೆಸರೆರಚಾಟದಿಂದ ಬಹಿರಂಗಗೊಳ್ಳುತ್ತಿದೆ ಎಂದು ಅದು ಹೇಳಿದೆ. ['ಡೊನೇಶನ್ ಗೇಟ್' ಹಗರಣದ ಕೇಂದ್ರ ಬಿಂದು, ಯಾರು ಈ ಗೋವಿಂದರಾಜ್?]
ಆತಂಕಕಾರಿ ಮಾಹಿತಿ
ಮಾನ್ಯ ಸಿದ್ದರಾಮಯ್ಯನವರ ಸಂಸದೀಯ ಕಾರ್ಯದರ್ಶಿ ಕಾಂಗ್ರೆಸ್ ಎಂ.ಎಲ್.ಸಿ ಗೋವಿಂದರಾಜು ಮನೆಯಲ್ಲಿ ವಶಪಡಿಸಲಾಗಿರುವ ಡೈರಿಯಲ್ಲಿ ಅತ್ಯಂತ ಆತಂಕಕಾರಿ ಮಾಹಿತಿಗಳು ಹೊರಬಂದಿವೆ. ರಾಜ್ಯದ ಪ್ರಭಾವಿ ಸಚಿವರು, ಕಾಂಗ್ರೆಸ್ ಮುಖಂಡರ ಹೆಸರನ್ನು ಬಿಂಬಿಸುವ ಇನಿಶಿಯಲ್ಸ್ ಇದರಲ್ಲಿದೆ.
ಹಗಲು ದರೋಡೆಯ ಅನಾವರಣ
ಈ ಡೈರಿಯಲ್ಲಿ 2014ರ ಲೋಕಸಭೆ ಚುನಾವಣೆ, ಬಿಬಿಎಂಪಿ ಹಾಗೂ ಪಂಚಾಯತಿ ಚುನಾವಣೆಯ ಸಮಯದಲ್ಲಿ ಕೋಟ್ಯಾಂತರ ರೂಪಾಯಿಯನ್ನು ಕಾಂಗ್ರೆಸ್ನ ಹೈಕಮಾಂಡ್ಗೆ ನೀಡಲಾಗಿರುವ ಹಣದ ಲೆಕ್ಕ ಬರೆದಿಡಲಾಗಿದೆ. ಇದು ರಾಜ್ಯದಲ್ಲಿ ನಡೆಯುತ್ತಿರುವ ಹಗಲು ದರೋಡೆಯ ಅನಾವರಣ ಎಂದು ಹೇಳಿದೆ.
ತನಿಖೆಯ ಹಾದಿ ತಪ್ಪಿಸುತ್ತಿದೆ ಬಿಜೆಪಿ
ಈ ವಿಷಯವನ್ನು ಕಠಿಣ ತನಿಖೆಯ ಮೂಲಕ ಹೊರತೆಗೆದು, ಭ್ರಷ್ಟಾಚಾರ ನಡೆಸಿದವರನ್ನು ಕೂಡಲೇ ಜೈಲಿಗಟ್ಟಬೇಕಾಗಿತ್ತು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದ್ದ ರಾಜ್ಯದ ಬಿಜೆಪಿ ಮುಖಂಡರು ಇದಾವುದನ್ನೂ ಮಾಡದೇ, ತನಿಖೆಯ ಹಾದಿಯನ್ನು ಹಳ್ಳ ಹಿಡಿಸಿದ್ದಾರೆ.
ಕಾಂಗ್ರೆಸ್ ಬಿಜೆಪಿ ಒಳ ಒಪ್ಪಂದ
ಕಾಂಗ್ರೆಸ್ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು, ಕೇವಲ ವಾಗ್ದಾಳಿಗೆ ತಮ್ಮ ಕಾರ್ಯವನ್ನು ಸೀಮಿತಿಗೊಳಿಸಿ, ಜನರ ಮುಂದೆ ಬದ್ಧವೈರಿಗಳಂತೆ ಬೂಸಿ ಬಿಡುತ್ತಾ, ತಮ್ಮ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಬಿಜೆಪಿಯವರು ಮುಳುಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರೂ ಆಗಿರುವ ಯಡಿಯೂರಪ್ಪ ಹಾಗೂ ಬಿಜೆಪಿ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆಯಲ್ಲಿ ಅವರುಗಳೇ ಖುದ್ದು, ಬಿಜೆಪಿ ಹೈಕಮಾಂಡ್ಗೆ ತಾವೂ ಹಣ ನೀಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಸಹರಾ ಬಿರ್ಲಾ ಡೈರಿ ಒಪ್ಪಿಕೊಳ್ಳಿ
ಇವರುಗಳ ವಿರುದ್ದವೂ ಯಾವುದೇ ತನಿಖೆಯಾಗುವುದಿಲ್ಲ, ಯಾರೂ ಬಂಧಿತರಾಗುವುದಿಲ್ಲ. ಐಟಿ ದಾಳಿಯಲ್ಲಿ ಸಿಕ್ಕಿರುವ ಎಂ.ಎಲ್.ಸಿ ಗೋವಿಂದರಾಜುರವರ ಡೈರಿಯನ್ನು ಒಪ್ಪುವುದಾದರೆ, ಅದೇ ಐಟಿ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಸಹರಾ ಬಿರ್ಲಾ ಡೈರಿಯಲ್ಲಿ ನಮೂದಾಗಿರುವ ನರೇಂದ್ರ ಮೋದಿಯವರಿಗೆ ನೀಡಲಾಗಿರುವ ಲಂಚವನ್ನೂ ಬಿಜೆಪಿ ಒಪ್ಪಬೇಕು ಎಂದು ಆಮ್ ಆದ್ಮಿ ಪಾರ್ಟಿ ಕರ್ನಾಟಕ ಘಟಕ ಆಗ್ರಹಿಸಿದೆ.
ಗಂಟೂ ಮೂಟೆ ಕಟ್ಟಿಸಲು ನಾವು ಸಿದ್ದ
ರಾಜ್ಯದ ಜನರಿಗೆ ಮೋಸ ಮಾಡುತ್ತಾ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿವೆ. ಬರದಿಂದಾಗಿ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಬಗ್ಗೆ ಕಿಂಚಿತ್ತೂ ಯೋಚಿಸದೇ, ರಾಜ್ಯದ ಜನರ ಹಗಲು ದರೋಡೆಗೆ ನಿಂತಿವೆ. ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಿ ತಮ್ಮ ಹೈಕಮಾಂಡ್ಗಳಿಗೆ 'ಕಪ್ಪ' ಸಲ್ಲಿಸುತ್ತಿರುವ ಈ ಎರಡೂ ಭ್ರಷ್ಟ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಗಂಟೂ ಮೂಟೆ ಕಟ್ಟಿಸಲು ನಾವು ಸಿದ್ದವಿದ್ದೇವೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿಕೊಂಡಿದೆ.
ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ
ಸಿದ್ದರಾಮಯ್ಯನವರು ಜನರಿಗೆ ನೀಡಿದ ತಮ್ಮ ಮಾತನ್ನು ಮರೆಯದೇ, ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ. ಇನ್ನು ಬಿಜೆಪಿಯ ರಾಜ್ಯಾದ್ಯಕ್ಷರಾಗಿರುವ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಉಳಿದಿದ್ದರೆ ಜನಪ್ರತಿನಿಧಿ ಸ್ಥಾನದಿಂದ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಹೇಳಿದೆ.
ಮೋದಿಗೆ ಟಾಂಗ್
ಪ್ರಧಾನ ನರೇಂದ್ರ ಮೋದಿಯವರಿಗೆ ತಮ್ಮ ಪಕ್ಷದಲ್ಲೇ ಇರುವ ಭ್ರಷ್ಟರು ಇಂದಿಗೂ ಕಾಣದಾಗಿದ್ದರೆ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವ ಕ್ಷಮತೆಯಿಲ್ಲದಿದ್ದರೆ, ನೀವೂ ದೇಶದಲ್ಲಿರುವ ಸಮಸ್ಯೆಗಳನ್ನು ಹೇಗೆ ಗುರುತಿಸಿ ಅದಕ್ಕೆ ಪರಿಹಾರ ನೀಡುತ್ತೀರಿ? ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.