ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪುಟ್ಟಸ್ವಾಮಿ ದಾಖಲೆ ಬಿಡುಗಡೆ : ಬಿಎಸ್ವೈ
Recommended Video
ಬಾಗಲಕೋಟೆ, ಅಕ್ಟೋಬರ್ 06: ಬಿಜೆಪಿ ಎಂಎಲ್ಸಿ ಬಿ.ಜೆ ಪುಟ್ಟಸ್ವಾಮಿಯವರು ಸಿದ್ದರಾಮಯ್ಯ ಸರಕಾರದ ಹಗರಣಗಳನ್ನು ಬಯಲು ಮಾಡುವ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರದಂದು ಹೇಳಿದರು.
ಐಟಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಇದು ಸಿದ್ದರಾಮಯ್ಯನವರ ಮೂರ್ಖತನದ ಪರಮಾವಧಿ, ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಅಪಹಾಸ್ಯಕ್ಕೆ ಈಡಾಗುವಂತದ್ದು ಎಂದರು.
ಇನ್ನು ಕೆಲ ಸಚಿವರ ಮನೆ ಮೇಲೆ ದಾಳಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಭಯದಿಂದ ಸಿದ್ದರಾಮಯ್ಯ ಈ ರೀತಿ ಮಾಡಲು ಮುಂದಾಗುತ್ತಿದ್ದಾರೆ ಎಂದು ಹೇಳಿದರು.
ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸರ್ಕಾರದ ಖಜಾನೆಯನ್ನು ಲೂಟಿ ಮಾಡುವ ಹಗಲು ದರೋಡೆ ಕೆಲಸದಲ್ಲಿ ಸಿದ್ದರಾಮಯ್ಯ ಸರ್ಕಾರ ನಿರತವಾಗಿದೆ. ಈಗಾಗಲೇ ಸರ್ಕಾರದ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇವೆ.
ನಾಳೆ ನಾಡಿದ್ದರಲ್ಲಿ ಪುಟ್ಟಸ್ವಾಮಿ ಅವರು ಬಹಳ ಗುರುತರವಾದ ದಾಖಲೆಯೊಂದನ್ನು ಬಿಡುಗಡೆ ಮಾಡಲಿದ್ದಾರೆ. ಸಿದ್ದರಾಮಯ್ಯ ಹಾಗೂ ಕೆಜೆ ಜಾರ್ಜ್ ವಿರುದ್ಧ ನೀಡಿರುವ ದೂರನ್ನು ಜಾರಿ ನಿರ್ದೇಶನಾಲಯವು ಪರಿಗಣಿಸಿದ್ದು, ಶೀಘ್ರದಲ್ಲೆ ನೋಟಿಸ್ ಜಾರಿಯಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ಅವರ ಜತೆ ಕೆಎಸ್ ಈಶ್ವರಪ್ಪ,ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.