ಇಟ್ಟಿಗೆ ಗ್ರಾಮದಲ್ಲಿ ರಸ್ತೆ ಮಧ್ಯ ನಿಂತ ಕಾಡೆಮ್ಮೆ; ಬೆದರಿದ ಕಾರು ಚಾಲಕ
ಚಿಕ್ಕಮಗಳೂರು, ಆಗಸ್ಟ್.05: ಮಲೆನಾಡಿನಲ್ಲಿ ಆಗಾಗ ಕಾಡೆಮ್ಮೆಗಳು ಪ್ರತ್ಯಕ್ಷವಾಗುವುದು ಮಾಮೂಲು. ಇದರಲ್ಲಿ ಹೊಸತೇನೂ ಇಲ್ಲ. ಆದರೆ ಹೀಗೆ ಕಾಣಿಸಿಕೊಂಡ ಕಾಡೆಮ್ಮೆಗಳು ಒಂದೊಂದು ಬಾರಿಯೂ ಒಂದೊಂದು ಸಂಕಷ್ಟವನ್ನು ತಂದೊಡ್ಡುತ್ತವೆ.
ಶನಿವಾರ ಮೂಡಿಗೆರೆ ತಾಲೂಕಿನ ಬಸರೀಕಟ್ಟೆ ಗ್ರಾಮದ ಹತ್ತಿರ ಕಾಡೆಮ್ಮೆ ಕಾಣಿಸಿಕೊಂಡರೆ ಇಂದು ಭಾನುವಾರ ಬಾಳೆಹೊನ್ನೂರು ಸಮೀಪದ ಕೊಪ್ಪ ಆರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇಟ್ಟಿಗೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದೆ.
ಲೋಕವಳ್ಳಿಗೆ ಲಗ್ಗೆಯಿಟ್ಟ ಕಾಡೆಮ್ಮೆ: ಓಡಿಸಲು ಹರಸಾಹಸ ಪಟ್ಟ ಸ್ಥಳೀಯರು
ಹಾಗೆ ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡೆಮ್ಮೆ ರಸ್ತೆಗೆ ಅಡ್ಡಲಾಗಿ ನಿಂತಿದೆ. ಇದನ್ನು ಕಂಡು ಗಾಬರಿಗೊಂಡ ಕಾರು ಚಾಲಕ ಕಾರು ಚಲಾಯಿಸಲಾಗದೆ 15 ನಿಮಿಷಗಳ ಕಾಲ ರಸ್ತೆಯಲ್ಲೇ ನಿಂತು ಕಾಲ ಕಳೆದ ಘಟನೆ ಇಂದು ಭಾನುವಾರ ನಡೆದಿದೆ.
ಕಾಡೆಮ್ಮೆಯ ಓಡಾಟದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಕಾಡೆಮ್ಮೆ ಹಾವಳಿ ಹೆಚ್ಚಾಗಿದ್ದು, ಕಾಡಂಚಿನ ಗ್ರಾಮಗಳಲ್ಲಿ ಓಡಾಡಲು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಾಡಿನಿಂದ ಮಲೆನಾಡಿನ ಪ್ರದೇಶಕ್ಕೆ ಇದುವರೆಗೂ 25 ಕ್ಕೂ ಅಧಿಕ ಕಾಡೆಮ್ಮೆಗಳು ಲಗ್ಗೆ ಇಟ್ಟಿರುವುದು ತಿಳಿದು ಬಂದಿದೆ.