ಎಂಎಲ್ಸಿ ತುಳಸಿ ಮುನಿರಾಜುಗೌಡಗೆ ಬಿಗ್ ರಿಲೀಫ್, 2 ಕ್ರಿಮಿನಲ್ ಕೇಸ್ ರದ್ದು
ಬೆಂಗಳೂರು, ಆ.17. ವಿಧಾನಪರಿಷತ್ ಸದಸ್ಯ ತುಳಸೀ ಮುನಿರಾಜುಗೌಡಗೆ ಹೈಕೋರ್ಟ್ ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಅವರ ವಿರುದ್ಧ ಎರಡು ಕೇಸುಗಳನ್ನು ಹೈಕೋರ್ಟ್ ರದ್ದು ಮಾಡಿದೆ.
2014 ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಹಾಲಿ ವಿಧಾನಪರಿಷತ್ ಸದಸ್ಯ ಪಿ.ಎಂ.ಮುನಿರಾಜುಗೌಡ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
ಎಂಎಲ್ಸಿ ತುಳಸಿ ಮುನಿರಾಜೇಗೌಡ ವಿರುದ್ಧದ ಪ್ರಕರಣ ರದ್ದು
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಮುನಿರಾಜುಗೌಡ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ರದ್ದುಗೊಳಿಸಿ ಆದೇಶಿಸಿತು.
'2014ರ ಲೋಕಸಭಾ ಚುನಾವಣೆ ವೇಳೆ ಮುನಿರಾಜುಗೌಡ, ಕನಕಪುರ ತಾಲ್ಲಕು ಮರಳವಾಡಿ ಹೋಬಳಿ ಗ್ರಾಮದಲ್ಲಿ 2014ರ ಏಪ್ರಿಲ್ 4ರಂದು ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡುತ್ತಿದ್ದರು. ಈ ಕರಪತ್ರಗಳಲ್ಲಿ ಹಳೆಯ ದಿನಾಂಕವಾದ 2014 ಫೆ. 27 ಅನ್ನು ನಮೂದು ಮಾಡಲಾಗಿತ್ತು' ಎಂದು ಒಟ್ಟು 350 ಕರಪತ್ರ ವಶಪಡಿಸಿಕೊಂಡಿದ್ದ ಸ್ಥಳೀಯ ಚುನಾವಣಾಧಿಕಾರಿ ಚುನಾವಣೆ ನಿಯಮ ಉಲ್ಲಂಘನೆ ಆರೋಪ ಹೊರಿಸಿ ಜನತಾ ಪ್ರಾತಿನಿಧ್ಯ ಕಾಯ್ದೆ-1951ರ ಕಲಂ 127 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
2ನೇ ಪ್ರಕರಣವೂ ರದ್ದು: 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಎಂ. ಮುನಿರಾಜುಗೌಡ ಪರ ಕೆಲ ಯುವಕರು 'ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನೂ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ರದ್ದುಗೊಳಿಸಿದೆ.
'ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯ ಎಚ್ಎಂಟಿ ಲೇಔಟ್ನ ಚೌಡೇಶ್ವರಿ ದೇವಾಲಯದ ಬಳಿ ಮುನಿರಾಜುಗೌಡ ಪರ ಸಂತೋಷ್, ಮಾರುತಿ, ಚೇತನ್ ಕುಮಾರ್, ಮಂಜುನಾಥ್ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪಿಸಲಾಗಿತ್ತು. 'ಅಭ್ಯರ್ಥಿ ಪರ ಪ್ರಚಾರ ನಡೆಸುವವರು 2018ರ ಮೇ 26ರಂದೇ ಮತಕ್ಷೇತ್ರ ಬಿಟ್ಟು ತೆರಳುವಂತೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ನಾಲ್ವರು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಪ್ರಚಾರ ನಡೆಸಿದ್ದಾರೆ' ಎಂದು ಆರೋಪಿಸಲಾಗಿತ್ತು.
Recommended Video