ಮಕ್ಕಳ ಕಳ್ಳರೆಂಬ ಸುಳ್ಳು ವದಂತಿ, ಇಬ್ಬರ ಜೀವ ಉಳಿಸಿದ ಎಸ್.ಪಿ ದೇವರಾಜ್
ಬೀದರ್, ಜುಲೈ 15: ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಅಪಘಾತ ಹೊಂದಿದ ಕಾರಿನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆಯಲ್ಲಿ ಇಬ್ಬರು ಅಮಾಯಕರ ಜೀವ ಉಳಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುರ್ಕಿ ಗ್ರಾಮದ ಬಳಿ ಅತೀ ವೇಗವಾಗಿ ಬಂದ ಕಾರನಲ್ಲಿದ್ದ ಮೂವರು ಉಮೇಶ ಬಿರಾದರ ಎಂಬಾತರ ಬೈಕ್ ಮೇಲೆ ಡಿಕ್ಕಿ ಮಾಡಿ ಅಪಘಾತಕ್ಕಿಡಾದರು. ಈ ವೇಳೆಯಲ್ಲಿ ಪಲ್ಟಿಯಾದ ಕಾರಿನಲ್ಲೆ ಮೂವರನ್ನು ಸುತ್ತುವರಿದ ಸ್ಥಳೀಯರು ಸುಮಾರು ಎರಡು ಗಂಟೆಗಳ ಕಾಲ ಕಾರಿನ ಮೇಲೆ ಹಲ್ಲೆ ಯತ್ನ ಮಾಡಿದ್ದಾರೆ.
ಬಳ್ಳಾರಿ: ಮಕ್ಕಳ ಕಳ್ಳರ ವದಂತಿ ನಂಬಿ ವ್ಯಕ್ತಿಯ ಹೊಡೆದು ಕೊಂದ ಬೃಹತ್ ಜನಸಮೂಹ
ಇದೇ ವೇಳೆಯಲ್ಲಿ ಕಮಲನಗರ ಪೊಲೀಸರು ಘಟನಾ ಸ್ಥಳಕ್ಕೆ ಭೆಟಿ ಕೊಟ್ಟಿದ್ದು ಸಾವಿರಾರು ಜನರನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ಜಮಾಯಿಸಿದ ಜನರ ಗುಂಪು ಕಾರಿನ ಸವಾರರ ಮೇಲೆ ಹಲ್ಲೆಗೆ ಮುಂದಾದರು ಈ ವೇಳೆಯಲ್ಲಿ ಪೊಲೀಸರನ್ನು ಥಳಿಸಿದ ಜನರ ಗುಂಪನ್ನು ಸತತ ಎರಡು ಗಂಟೆಗಳ ಕಾಲ ಕಲ್ಲುಗಳ ಏಟು ತಿಂದ ಔರಾದ್ ಪಿಎಸ್ ಐ.ನಾನಾಗೌಡ, ಪೇದೆ ರಜನಿಕಾಂತ ಇನ್ನೂ ಇಬ್ಬರು ಗಾಯಗೊಂಡಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತದಲ್ಲಿ ಸಕಾಲಕ್ಕೆ ಭೇಟಿಕೊಟ್ಟ ಎಸ್.ಪಿ.ದೇವರಾಜ್ ಅವರು ಸಾವಿರಾರು ಜನರ ಸೇರಿದ್ದ ಗುಂಪಿನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿ ಪಲ್ಟಿಯಾದ ಕಾರಿನ ಅವಶೆಷ ಅಡಿಯಲ್ಲಿ ಸಿಲುಕಿದ್ದ ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದು ಘಟನೆಯಲ್ಲಿ ಕಾರನಲ್ಲಿದ್ದ ಒಬ್ಬ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಕಾರಿನಲ್ಲಿ ಬಂದ ಈ ಮೂವರು ಹೈದ್ರಾಬಾದ್ ಮೂಲದವರಾಗಿದ್ದು ಹಂದಿಖೆರಾ ಗ್ರಾಮದ ಬಸೀರಸಾಬ್ ಎಂಬಾತರ ಮನೆಗೆ ಊಟಕ್ಕೆ ಬಂದಿದ್ದರು ಎನ್ನಲಾಗಿದ್ದು ಊಟ ಮುಗಿಸಿ ಸಂಜೆ ಮಹಾರಾಷ್ಟ್ರದ ಉದಗಿರ ಕಡೆ ಹೊಗುವಾಗ ಬೊಟಕುಳ ತಾಂಡ ಹತ್ರ ವಿಧ್ಯಾರ್ಥಿನಿಯರಿಗೆ ಚಾಕಲೇಟ್ ಕೊಟ್ಟಿದ್ದಾರೆ. ಇದನ್ನೆ ಅಪಾರ್ಥ ಮಾಡಿಕೊಂಡ ಕೆಲವರು ಮಕ್ಕಳ ಕಳ್ಳರು ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದವರು ಮುರ್ಕಿಯಲ್ಲಿ ಅಪಘಾತಕ್ಕೀಡಾಗಿದ್ದಾರೆ. ನಂತರ ಇವರನ್ನು ಮಕ್ಕಳ ಕಳ್ಳರು ಎಂದು ಸುಳ್ಳು ವದಂತಿ ಹರಡಿಸಿ ಸಿಕ್ಕಾಪಟ್ಟೆ ಗದ್ದಲ ಎಬ್ಬಿಸಿ ಜನರು ಜಮಾಯಿಸುವ ಹಾಗೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಘಟನಾ ಸ್ಥಳಕ್ಕೆ ಕಲ್ಬುರ್ಗಿ ಐಜಿ ಮುರುಗನ್ ಭೇಟಿ ನೀಡಿದ್ದು ಇದಕ್ಕೆ ಸಂಬಂಧಿಸಿದಂತೆ 30 ಕ್ಕೂ ಹೆಚ್ಚು ಕೀಡಿಗೇಡಿಗಳನ್ನು ಬಂಧಿಸಿರುವ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಮಕ್ಕಳ ಕಳ್ಳರು ಸುಳ್ಳು ವದಂತಿ- ಕೇಸ್ ದಾಖಲು.
ಈ ಘಟನೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ನಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸುಳ್ಳು ವದಂತಿ ಹರಡಿಸಿ ಮುರ್ಕಿ ಗ್ರಾಮದಲ್ಲಿನ ಘಟನೆಗೆ ಕಾರಣರಾದ ವಾಟ್ಸ್ ಆಪ್ ಅಡ್ಮಿನ್ ಹಾಗೂ ಫೇಸ್ ಬುಕ್ ಖಾತೆದಾರರನ್ನು ಕೂಡ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.