ವಿವಾದಿತ ನಿತ್ಯಾನಂದ ಮತ್ತು ಕನ್ನಡಪರ ಸಂಘಟನೆಗಳು
ಬಿಡದಿಯ ವಿವಾದಿತ ದೇವಮಾನವ ನಿತ್ಯಾನಂದ ಮತ್ತು ಅವರ ಆಶ್ರಮಕ್ಕೆ ಪ್ರಮುಖವಾಗಿ ಪ್ರತಿಭಟನೆಯ ಬಿಸಿ ತಟ್ಟುತ್ತಾ ಇದ್ದದ್ದು ಕನ್ನಡಪರ ಸಂಘಟನೆಗಳಿಂದ.
ಬಿಡದಿ ಆಶ್ರಮದಲ್ಲಿನ ತನ್ನ ಆಟಾಟೋಪಗಳು ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದ ಸಮಯದಲ್ಲಿ ಕನ್ನಡಪರ ಸಂಘಟನೆಗಳಿಂದ ಹೆಚ್ಚುಕಮ್ಮಿ ಪ್ರತಿನಿತ್ಯ ಪ್ರತಿಭಟನೆಯ ಕಾವು ಎದುರಿಸುತ್ತಿದ್ದ ನಿತ್ಯಾ ಇದಾವುದಕ್ಕೂ ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. (ಪುರುಷತ್ವ ಪರೀಕ್ಷೆ ಎಂದರೇನು)
ಕನ್ನಡ ಭಾಷೆ ಮತ್ತು ಕನ್ನಡಪರ ಹೋರಾಟಗಾರರ ಪ್ರತಿಭಟನೆಗಳನನ್ನು ಲೇವಡಿ ಮಾಡುತ್ತಿದ್ದ ನಿತ್ಯಾ, ತನ್ನ ವಿರುದ್ದ ಕಾರ್ಯಕ್ರಮ ಬಿತ್ತರಿಸುತ್ತಿದ್ದ ಕನ್ನಡ ಸುದ್ದಿವಾಹಿನಿಗಳನ್ನೂ ಜರಿದ ಉದಾಹರಣೆಗಳೂ ಇವೆ. ಅಷ್ಟೆಲ್ಲಾ ಯಾಕೆ, ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರ ಮೇಲೂ ನಿತ್ಯಾ ಕೇಸು ಜಡಾಯಿಸಿದ್ದರು.
ಕಳೆದ ವರ್ಷ ಮತ್ತು ಈ ವರ್ಷ ಗುರು ಪೂರ್ಣಿಮಾ ಹಬ್ಬದ ಸಮಯದಲ್ಲಿ ಕನ್ನಡಪರ ಹೋರಾಟಗಾರ ಪ್ರತಿಭಟನೆಯನ್ನು ಲೆಕ್ಕಿಸಿದೇ ಬಿಡದಿ ಆಶ್ರಮದಲ್ಲೇ ಗುರುಪೂರ್ಣಿಮಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ನಿತ್ಯಾ, ಕಾರ್ಯಕ್ರಮಕ್ಕೆ ಮುನ್ನಾ ಭರ್ಜರಿ ರೋಡ್ ಶೋ ನಡೆಸಿದ್ದೂ ಇದೆ. (ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ)
ಎಲ್ಲಿ ತನ್ನ ಹೇಳಿಕೆಗಳು ತೀರಾ ವಿವಾದಕ್ಕೀಡಾದಾಗ ದೂರದ ಹರಿದ್ವಾರದಿಂದಲೋ ಅಥವಾ ದೇಶದ ಇನ್ಯಾವುದೋ ಭಾಗದಿಂದ ಸಮಜಾಯಿಷಿ ನೀಡುತ್ತಿದ್ದ ನಿತ್ಯಾ, ಪ್ರತಿಭಟನೆಗಳ ಕಾವು ಕಮ್ಮಿಯಾಗುವ ತನಕ ಬಿಡದಿ ಕಡೆ ತಲೆ ಹಾಕುತ್ತಿರಲಿಲ್ಲ.
ಇತ್ತೀಚೆಗೆ ಕನ್ನಡಪರ ಹೋರಾಟಗಾರರ ಚಳುವಳಿಗಳನ್ನು ದಿನಗೂಲಿ ಹೋರಾಟಗಾರರು ಎನ್ನುವಂತೆ ಲೇವಡಿ ಮಾಡಿದ್ದ ನಿತ್ಯಾ, ಈಗ ಕರ್ನಾಟಕವನ್ನು ಬಿಟ್ಟು ತಮಿಳುನಾಡಿನಲ್ಲಿ ನೆಲೆಸುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದದ್ದು 'ಕಾಲದ ಮುಂದೆ ಎಲ್ಲವೂ ಶೂನ್ಯ' ಎನ್ನುವುದಕ್ಕೆ ಕೊಡಬಹುದಾದ ಜ್ವಲಂತ ಉದಾಹರಣೆ.
ವಿವಾದಾತ್ಮಕ ದೇವಮಾನವ ನಿತ್ಯಾನಂದ ಮತ್ತು ಅವರ ಸುತ್ತ ಸುತ್ತುತ್ತಿರುವ ವಿವಾದಗಳ ಕೆಲವು ಪ್ರಮುಖ ಘಟನೆಗಳನ್ನು ಸ್ಲೈಡಿನಲ್ಲಿ ನೀಡಲಾಗಿದೆ.
ಕನ್ನಡಪರ ಕಾರ್ಯಕರ್ತರು ಕೂಲಿ ಹೋರಾಟಗಾರರು
ನನ್ನ ವಿರುದ್ಧ ಪ್ರತಿಭಟನೆ ನಡೆಸುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಕೂಲಿ ಹೋರಾಟಗಾರರು, ನನ್ನ ಆಶ್ರಮದಲ್ಲಿ ಎಷ್ಟು ಗೇಟ್ ಗಳಿವೆ ಎಂದು ಅವರಿಗೆ ತಿಳಿದಿಲ್ಲ. ಕನ್ನಡ ಪರ ಸಂಘಟನೆಗಳು ಕೇವಲ ಹಣಕ್ಕಾಗಿ ತಮ್ಮ ಆಶ್ರಮದ ಮುಂದೆ ಪ್ರತಿಭಟನೆ ನಡೆಸುತ್ತಾರೆ. 300 ರೂ.ಗಳಿಗಾಗಿ ಮೂರು ಗಂಟೆ ಕೂಗಾಡುತ್ತಾರೆ ಎಂದು ನಿತ್ಯಾ ವ್ಯಂಗ್ಯವಾಡಿದ್ದರು.
ಫ್ಲೆಕ್ಸ್ ಸುಟ್ಟುಹಾಕಿದ್ದ ಕನ್ನಡಸೇನೆ
ನಿತ್ಯಾನಂದ ಆಶ್ರಮದಲ್ಲಿ ನಿರಂತರವಾಗಿ ತಮಿಳರನ್ನು ಓಲೈಕೆ ಮಾಡಿ ಕನ್ನಡಿಗರನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ನಡೆಸುವ ಯಾವುದೇ ಧಾರ್ಮಿಕ ವಿಧಿ ವಿಧಾನಗಳು ಕನ್ನಡ ಧಾರ್ಮಿಕ ಪರಂಪರೆಗೆ ಬದ್ಧವಾಗಿಲ್ಲ, ನಮ್ಮ ಸಂಸ್ಕೃತಿಗೆ ಬೆಲೆ ಕೊಡದ ನಿತ್ಯಾನಂದ ಹಾಗೂ ಆತನ ಬೆಂಬಲಿಗರನ್ನು ಬಹಿಷ್ಕರಿಸಬೇಕು' ಎಂದು ಆರೋಪಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಆಗ್ರಹಿಸಿ, ಭಾರೀ ಪ್ರತಿಭಟನೆ ನಡೆಸಿದ್ದರು.
ನಿತ್ಯಾನ ಆಶ್ರಮದಲ್ಲಿ ಕಪ್ಪೆ ಕುಣಿತ: ಮಾಧ್ಯಮಗಳ ಮೇಲೆ ಕೇಸ್
ಗುರು ಪೂರ್ಣಿಮೆಯಂದು ಆಶ್ರಮದಲ್ಲಿ ಆಯೋಜಿಸಿದ್ದ ಕುಂಡಿಲಿನಿ ಯೋಗದ ಕಾರ್ಯಕ್ರಮವನ್ನು ಅತ್ಯಂತ ಕೆಟ್ಟದಾಗಿ ಮಾಧ್ಯಮಗಳು ಪ್ರಸಾರ ಮಾಡಿದೆ. ಇದರಿಂದ ಭಕ್ತರ ಮನಸ್ಸಿಗೆ ನೋವುಂಟಾಗಿದೆ ಎಂದು ಈ ಸುದ್ದಿ ಪ್ರಸಾರ ಮಾಡಿದ ಚಾನೆಲ್ ಮತ್ತು ಮಾಧ್ಯಮಗಳ ವಿರುದ್ಧ ನಿತ್ಯಾ ಭಕ್ತನೊಬ್ಬ ದೂರು ದಾಖಲಿಸಿದ್ದ.
ಪೊಲೀಸರೇ ಪೀಠಕ್ಕೆ ಬಂದು ಸಹಿ ಪಡೆಯಲಿ; ನಿತ್ಯಾನಂದ
ಬಂಧನದ ನಂತರ ಪ್ರತಿ 15 ದಿನಗಳಿಗೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕುವ ಬದಲು ಪೊಲೀಸರೇ ನನ್ನ ಆಶ್ರಮಕ್ಕೆ ಬಂದು ಸಹಿ ಪಡೆಯಲಿ ಎಂದು ರಾಸಲೀಲೆ ಪ್ರಕರಣದ ಆರೋಪಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದೂ ಇದೆ.
ಸಿಎಂ ಮೇಲೆ ಕೇಸು ದಾಖಲಿಸಿದ್ದ ನಿತ್ಯಾ
ವಿವಾದಾತ್ಮಕ ದೇವಮಾನವ ಬಿಡದಿಯ ಧ್ಯಾನಪೀಠಂ ಆಶ್ರಮದ ನಿತ್ಯಾನಂದ ಸ್ವಾಮಿ ಆ ಕಾಲದಲ್ಲಿ ಸಿಎಂ ಆಗಿದ್ದ ಸದಾನಂದ ಗೌಡರ ವಿರುದ್ದವೇ 10 ಕೋಟಿ ರೂಪಾಯಿಯ ಮಾನನಷ್ಟ ಕೇಸ್ ದಾಖಲಿಸಿದ್ದರು.
ನಿತ್ಯಾನ ಆಶ್ರಮದಲ್ಲಿ ಕಾಂಡೋಮ್, ಗಾಂಜಾ, ಮದ್ಯ
ಬಿಡದಿಯಲ್ಲಿರುವ ನಿತ್ಯಾನಂದ ಧ್ಯಾನಪೀಠ ಅಕ್ರಮ ಚಟುವಟಿಕೆಗಳ ತಾಣವಾಗಿತ್ತು ಎನ್ನುವುದಕ್ಕೆ ಪ್ರಬಲ ಸಾಕ್ಷಿ ಎನ್ನುವಂತೆ ಶೋಧ ಕಾರ್ಯದ ವೇಳೆ ಆಶ್ರಮದಲ್ಲಿ ಕಾಂಡೋಮ್, ಡಿವಿಡಿಗಳು, ಎಂಪಿತ್ರೀ ಸಿಡಿಗಳು, ಗಾಂಜಾ ಮತ್ತು ಮದ್ಯದ ಬಾಟಲಿಗಳು ಸಿಕ್ಕಿದ್ದವು.
ಪತ್ರಕರ್ತನನ್ನು ಗೋಷ್ಠಿಯಿಂದ ಹೊರದಬ್ಬಿದ ನಿತ್ಯಾನಂದ
ಆರತಿ ರಾವ್ ಎಂಬುವವರು ಮಾಡಿರುವ ಅತ್ಯಾಚಾರದ ಆರೋಪಕ್ಕೆ ಪ್ರತಿಯಾಗಿ ಬಿಡದಿ ಧ್ಯಾನಪೀಠಂ ಆಶ್ರಮದಲ್ಲಿ ಸ್ವಾಮಿ ನಿತ್ಯಾನಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಸುವರ್ಣ ವಾಹಿನಿಯ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯಿಂದ ರೊಚ್ಚಿಗೆದ್ದ ನಿತ್ಯಾನಂದ ಆ ಪತ್ರಕರ್ತನನ್ನು ಗೋಷ್ಠಿಯಿಂದ ಹೊರಹಾಕಿದ್ದರು.
ಕಾಮುಕ ನಿತ್ಯಾನಂದನ ಆಶ್ರಮದಲ್ಲಿ ಬೆಂಕಿ
ನಿತ್ಯಾನಂದನ ಸಿಡಿಗಳು ಬಹಿರಂಗಗೊಳ್ಳುತ್ತಿದ್ದಂತೆಯೇ, ನಿತ್ಯಾನಂದನ ಆಶ್ರಮದ ಮೂರು ಕುಟೀರಗಳಿಗೆ ಬೆಂಕಿ ಇಡಲಾಗಿತ್ತು. ನಿತ್ಯಾ ವಿರುದ್ಧ ಸಿಡಿದೆದ್ದಿರುವ ಸಾರ್ವಜನಿಕರು ಮಠಕ್ಕೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಆಶ್ರಮದ ಹೊರಗೆ ನೆರೆದಿರುವ ಜನ ನಿತ್ಯಾನಂದನ ಚಿತ್ರವಿದ್ದ ಬ್ಯಾನರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.