ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ಸಿಎನ್ಆರ್ ರಾವ್ - ಕರ್ನಾಟಕ ವರ್ಷದ ವ್ಯಕ್ತಿ 2014

By Prasad
|
Google Oneindia Kannada News

ಬೆಂಗಳೂರು, ಡಿ. 31 : ಕನ್ನಡ ನಾಡಿನ ಖ್ಯಾತ ವಿಜ್ಞಾನಿ, 63 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದ ಮೇಧಾವಿ 'ಭಾರತ ರತ್ನ' ಡಾ. ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ (ಸಿಎನ್ಆರ್ ರಾವ್) ಅವರನ್ನು ಒನ್ಇಂಡಿಯಾ ಕನ್ನಡದ ಓದುಗರು 'ಕರ್ನಾಟಕ ವರ್ಷದ ವ್ಯಕ್ತಿ 2014' ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಸಿಎನ್ಆರ್ ರಾವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಓದುಗರಿಗೆ ಮನದಂತರಾಳದ ಧನ್ಯವಾದಗಳು.

2013ರಲ್ಲಿ ಕೂಡ ಡಾ. ಸಿಎನ್ಆರ್ ರಾವ್ (80) ಅವರು ಕರ್ನಾಟಕ ವರ್ಷದ ವ್ಯಕ್ತಿ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದರು. ಆದರೆ, ಕೂದಲೆಳೆಯ ಅಂತರದಲ್ಲಿ ಈ ಪ್ರಶಸ್ತಿ, ಭ್ರಷ್ಟಾಚಾರದ ವಿರುದ್ಧ ಏಕಾಂಗಿ ಹೋರಾಟ ನಡೆಸಿರುವ ಸಾಮಾಜಿಕ ಚಳವಳಿಗಾರ ಎಸ್ಆರ್ ಹಿರೇಮಠ ಅವರ ಪಾಲಾಗಿತ್ತು. ಇದೇ ವರ್ಷದ ಆರಂಭದಲ್ಲಿ ಹಿರೇಮಠ ಅವರನ್ನು ನಮ್ಮ ಕಚೇರಿಗೆ ಬರಮಾಡಿ ಸನ್ಮಾನ ಮಾಡಲಾಗಿತ್ತು.

ಈ ಬಾರಿ, ಒನ್ಇಂಡಿಯಾ ಕನ್ನಡ ಆನ್ ಲೈನ್ ಮೂಲಕ ನಡೆಸಿದ ಈ ಚುನಾವಣೆಯಲ್ಲಿ ಶೇ.38.36ರಷ್ಟು ಅಂಕ ಪಡೆದು ಸಿಎನ್ಆರ್ ರಾವ್ ಅವರು ಪ್ರಥಮ ಸ್ಥಾನದಲ್ಲಿದ್ದರೂ, ರೌಡಿಶೀಟರ್ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಗುಂಡಿಗೆ ಬಲಿಯಾದ 'ಕಲಬುರಗಿ ಸಿಂಗಂ' ಮಲ್ಲಿಕಾರ್ಜುನ ಬಂಡೆ ಅವರು ಓದುಗರ ಹೃದಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಮೆಂಟ್ ಬಾಕ್ಸಲ್ಲಿ ಮಲ್ಲಿಕಾರ್ಜು ಬಂಡೆ ಅವರಿಗೇ ಈ ಪ್ರಶಸ್ತಿ ಸಿಗಬೇಕು ಎಂದು ಹಲವಾರು ಓದುಗರು ಅಭಿಪ್ರಾಯ ಮಂಡಿಸಿದ್ದಾರೆ. (ಕೆಲ ಅಭಿಪ್ರಾಯಗಳು ಕೆಳಗಿವೆ ಓದಿರಿ)

Bharat Ratna Prof CNR Rao - Oneindia Kannada Person of the Year 2014

ಅಚ್ಚರಿಯ ಸಂಗತಿಯೆಂದರೆ, ಈ ಬಾರಿ ಡಾ. ಸಿಎನ್ಆರ್ ರಾವ್ ಮತ್ತು ಮಲ್ಲಿಕಾರ್ಜುನ ಬಂಡೆ ಅವರ ನಡುವೆ ಮೊದಲಿನಿಂದಲೂ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಒಂದು ಕಡೆ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮೇಲುಗೈಯಾಗುತ್ತಿದ್ದರೆ, ಮತ್ತೊಂದೆಡೆ ಪ್ರಾಣದ ಹಂಗು ತೊರೆದು ಹೋರಾಡಿದ ವ್ಯಕ್ತಿಯ ಮೇಲಿದ್ದ ಭಾವುಕತೆ ಮೇಲುಗೈ ಸಾಧಿಸುತ್ತಿತ್ತು. ಇಬ್ಬರೂ ಈ ಪ್ರಶಸ್ತಿಗೆ ಅರ್ಹರಿದ್ದರೂ ಮತಗಳ ಆಧಾರದ ಮೇಲೆ ಡಾ. ಸಿಎನ್ಆರ್ ರಾವ್ ಅವರು ಕರ್ನಾಟಕ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಪ್ರಸಕ್ತ ವರ್ಷ ವಿಭಿನ್ನ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ, ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆಯ ಆಧಾರದ ಮೇಲೆ ಡಾ. ಸಿಎನ್ಆರ್ ರಾವ್, ಮಲ್ಲಿಕಾರ್ಜುನ ಬಂಡೆ ಸೇರಿದಂತೆ ಆರು ಜನರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಸ್ಪರ್ಧೆಯಲ್ಲಿದ್ದ ಉಳಿದವರೆಂದರೆ, ಪೇಜಾವರ ಶ್ರೀಗಳಾದ ವಿಶ್ವೇಶ್ವರ ತೀರ್ಥರು, ಮೂಢನಂಬಿಕೆ ಪಿಡುಗಿನ ವಿರುದ್ಧ ಹೋರಾಡುತ್ತಿರುವ ನಿಡುಮಾಮಿಡಿ ಶ್ರೀ, ಕರ್ನಾಟಕಕ್ಕೆ ಅಭೂತಪೂರ್ವ ಯಶಸ್ಸು ತಂದುಕೊಡುತ್ತಿರುವ ಕ್ರಿಕೆಟರ್ ವಿನಯ್ ಕುಮಾರ್ ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ.

ಸ್ಪರ್ಧೆ ಸಿಎನ್ಆರ್ ರಾವ್ ಮತ್ತು ಮಲ್ಲಿಕಾರ್ಜುನ ಬಂಡೆ ನಡುವೆ ಏರ್ಪಟ್ಟಿದ್ದರೂ ಉಳಿದ ಸಾಧಕರು ಮಾಡಿದ ಸಾಧನೆಯನ್ನು ತೆಗೆದುಹಾಕುವಂತಿಲ್ಲ. ಇಂಥವರ ನಿಸ್ವಾರ್ಥದ ದುಡಿಮೆಯೇ ನಮಗೆ ಸ್ಫೂರ್ತಿಯ ಚಿಲುಮೆ. ಯಾರ್ಯಾರಿಗೆ ಎಷ್ಟೆಷ್ಟು ಮತ ಬಂದಿವೆ ಎಂಬುದನ್ನು ಕೆಳಗಿನ ಚಿತ್ರ ತೋರಿಸುತ್ತದೆ.

Bharat Ratna Prof CNR Rao - Oneindia Kannada Person of the Year 2014

ಓದುಗರ ಕೆಲ ಕಾಮೆಂಟುಗಳು ಹೀಗಿವೆ...

ವೀರ ಆರಕ್ಷಕ ರಾದ ಶ್ರೀ ಮಲ್ಲೀಕರ್ಜುನ್ ಬಂಡೆ ಅವರಿಗೆ ಕೊಡ್ಬೇಕು. ಅಂತಹ ವೀರ ಯೋಧನಿಗೆ ಜನ್ಮ ನೀಡಿದ ತಾಯಿಗೆ ವಂದನೆ ........ ಮತ್ತೆ ಹುಟ್ಟಿ ಬನ್ನಿ ಎಂದು ಹಾರೈಸೋಣ - ಸುನೀಲ್ ಕುಮಾರ್.

ಡಾ. ಸಿಎನ್ಆರ್ ರಾವ್ ಅವರಿಗಾದರೇ ಮುಂದೊಂದು ದಿನ ಕೊಡಬಹುದು, ಆದರೆ ಮಲ್ಲಿಕಾರ್ಜುನ ಬಂಡೆ ಅವರನ್ನು ನಾವು ಮೆರೆತು ಹೋಗುತ್ತೇವೆ. - ಹರೀಶ್.

ಹೌದು! ಈ ಸನ್ಮಾನ ಗುಂಡಿಗೆ ಬಲಿಯಾದ ಬಂಡೆ ಅವರಿಗೆ ಸಲ್ಲಬೇಕು. ಜೀವದ ಹಂಗು ತೊರೆದು ಕರ್ನಾಟಕಕ್ಕೆ ಕೀರ್ತಿ ತರುವ ಕೆಲಸವನ್ನು ಅವರು ಮಾಡಿದ್ದಾರೆ. ಹಾಟ್ಸ್ ಆಫ್. ಆವರಿಗೊಂದು ಸಲಾಮ - ಪ್ರಿಯಾ

ಮಲ್ಲಿಕಾರ್ಜುನ್ ಬಂಡೆ ಈಸ್ ಓನ್ಲಿ ಫಿಟ್ ಫಾರ್ that. ಲೇಟ ಹಿಸ್ ಸೋಲ್ ರೆಸ್ಟ್ ಇನ್ ಪೀಸ್ ... - ಸಂತೋಷ್ ಕೊರ್ಬು.

ಚಿ ನಾ ರಾ ರಾವ್ ಅವರೇ ವರ್ಷದ ವ್ಯಕ್ತಿಯಾಗಲಿ. ಧನ್ಯವಾದಗಳು. - ದಶರಥ ರೆಡ್ಡಿ

ವಿನಯ್ ಕುಮಾರ್ ನಿಮ್ಮ ಕ್ಯಾಪ್ಟನ್ ಶಿಪ್ ನಲ್ಲಿ ರಣಜಿ ಟ್ರೋಫಿ ಮತ್ತು ಅನೇಕ ಟೂರ್ನಮೆಂಟ್ಗಳನ್ನು ಗೆದ್ದಿದೇವೆ. - ರವಿ ಕುಮಾರ್ ಜಿ.

English summary
Bharat Ratna (2013- Indian Chemist) Prof C N R Rao chosen Oneindia Kannada Person of the year - 2014. CNR Rao is National Research Professor Linus Pauling Research Professor & Honorary President Jawaharlal Nehru Centre for Advanced Scientific Research, Bangalore, India. Prof Rao joins the illustrious company of Bharat Ratna recipients from Karnataka. Sir C.V. Raman (1954 - Physics) Sir, M Vishweshwaraiah (1955 - Civil Engineering), Pandit Bhimsen Joshi (2008 - Hindustani Classical Music).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X