ನಾಳೆ ನಾಡಿದ್ದು ಮುಷ್ಕರ: ಖಾಸಗಿ ಶಾಲೆಗಳಿಗೆ ರಜೆ, ಬ್ಯಾಂಕ್ ಕೂಡ ಬಂದ್?
ಬೆಂಗಳೂರು, ಜನವರಿ 7: ಮೋಟಾರು ವಾಹನ ತಿದ್ದುಪಡಿ ಮಸೂದೆ 2017ಅನ್ನು ಹಿಂದಕ್ಕೆ ಪಡೆಯುವುದು, ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ 12 ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ಇಲಾಖೆ ಮತ್ತು ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಭಾರತ್ ಬಂದ್ಗೆ ಕರೆ ನೀಡಿವೆ.
ಮಂಗಳವಾರ ಮತ್ತು ಬುಧವಾರ ಬೆಳಿಗ್ಗೆ ಆರರಿಂದ ಸಂಜೆ ಐದರವರೆಗೂ ಬಂದ್ ನಡೆಯಲಿವೆ. ಈ ವೇಳೆ ಬಸ್ಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಲಿದೆ.
ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡಬೇಕಾಗುವುದರಿಂದ ರಾಜ್ಯದ ಎಲ್ಲ ಖಾಸಗಿ ಶಾಲೆಗಳಿಗೆ ಎರಡು ದಿನಗಳ ಕಾಲ ರಜೆ ನೀಡಲು ನಿರ್ಧರಿಸಿರುವುದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ?
ಸರ್ಕಾರಿ ಶಾಲೆಗಳಿಗೆ ರಜೆ ನೀಡಬೇಕೇ ಅಥವಾ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಬ್ಯಾಂಕ್ ಸಿಬ್ಬಂದಿ ಬೆಂಬಲ
ಮುಷ್ಕರಕ್ಕೆ ಭಾರತೀಯ ಬ್ಯಾಂಕ್ ನೌಕರರ ಸಂಘಟನೆ ಬೆಂಬಲ ಪ್ರಕಟಿಸಿದೆ. ಇದರಿಂದ ಎರಡು ದಿನಗಳ ಕಾಲ ಬ್ಯಾಂಕ್ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಬ್ಯಾಂಕ್ಗಳು ಬಾಗಿಲು ತೆರೆದಿದ್ದರೂ ಸಿಬ್ಬಂದಿ ಕಚೇರಿಗೆ ಬರುವುದು ಖಾತರಿ ಇಲ್ಲ. ಬ್ಯಾಂಕ್ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಬ್ಯಾಂಕ್ ವ್ಯವಹಾರಗಳು ನಡೆಯುವುದು ಅನುಮಾನ.
ಎಸ್ಬಿಐ ನೌಕರರು ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಅದರ ಬ್ಯಾಂಕಿಂಗ್ ವಹಿವಾಟಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?
ಖಾಸಗಿ ಬಸ್ಗಳೂ ಇಲ್ಲ
ರಾಜ್ಯದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿಯ ಎಲ್ಲ ವಲಯಗಳ ಬಸ್ಗಳ ಓಡಾಟ ಇರುವುದಿಲ್ಲ. ಸುಮಾರು 14 ಸಾವಿರ ಸರ್ಕಾರಿ ಬಸ್ಗಳು ಸಂಚಾರ ಸ್ಥಗಿತಗೊಳಿಸಲಿವೆ. ಜೊತೆಗೆ ಮಲೆನಾಡು, ಕರಾವಳಿ ಭಾಗಗಳಲ್ಲಿ ಹೆಚ್ಚಾಗಿರುವ ಖಾಸಗಿ ಬಸ್ಗಳೂ ಬಂದ್ಗೆ ಬೆಂಬಲ ಸೂಚಿಸಿರುವುದರಿಂದ ಅವು ರಸ್ತೆಗೆ ಇಳಿಯುವುದು ಖಚಿತವಿಲ್ಲ.
ಜನವರಿ 8 ಮತ್ತು 9ರಂದು ಕೆಎಸ್ಆರ್ಟಿಸಿ ನೌಕರರ ಮುಷ್ಕರ
ಆಟೋಗಳು ಭಾಗಶಃ ಇಲ್ಲ
ಬೆಂಗಳೂರಿನಲ್ಲಿ ಇರುವ ಸುಮಾರು 1.60 ಲಕ್ಷ ಆಟೋಗಳಲ್ಲಿ ಒಂದು ಲಕ್ಷದಷ್ಟು ಆಟೋಗಳನ್ನು ಒಳಗೊಂಡಿರುವ ಹತ್ತು ಸಂಘಟನೆಗಳು ಬಂದ್ ಅನ್ನು ಬೆಂಬಲಿಸಿವೆ. ಉಳಿದ 60 ಸಾವಿರ ಆಟೋಗಳಿಂದ ಬೆಂಬಲ ದೊರಕಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಆಟೋ ಸಂಚಾರ ಇರುವುದಿಲ್ಲ.
ಟ್ಯಾಕ್ಸಿ ಸಂಘಟನೆ ಬಂದ್ಗೆ ಬೆಂಬಲ ನೀಡಿಲ್ಲ. ಉಬರ್, ಓಲಾ ಸೇರಿದಂತೆ ಇತರೆ ಟ್ಯಾಕ್ಸಿ ಸೌಲಭ್ಯಗಳು ಅಬಾಧಿತವಾಗಿರುತ್ತವೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರಕ್ಕೂ ಅಡ್ಡಿಯಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ದೈನಂದಿನ ಸೇವೆಗಳು ಅಬಾಧಿತ
ಎಪಿಎಂಸಿ ಲಾರಿಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ. ಆದರೆ, ಉಳಿದ ಸರಕು ಸಾಗಾಣಿಕೆ ಲಾರಿಗಳ ಓಡಾಟ ಎಂದಿನಂತೆ ಇರಲಿವೆ ಎನ್ನಲಾಗಿದೆ. ಆಸ್ಪತ್ರೆ, ಔಷಧ ಅಂಗಡಿಗಳು, ಹಾಲು, ತರಕಾರಿ, ಹೋಟೆಲ್, ಪೆಟ್ರೋಲ್ ಬಂಕ್ ಸೇವೆಗಳಿಗೆ ತೊಂದರೆ ಇಲ್ಲ.