ಭಾರತ್ ಬಂದ್ : ಶಾಲಾ, ಕಾಲೇಜುಗಳಿಗೆ ರಜೆ ಇದೆಯೇ?
ಬೆಂಗಳೂರು, ಜನವರಿ 07 : 10 ಕಾರ್ಮಿಕ ಸಂಘಟನೆಗಳು ಜನವರಿ 8ರ ಬುಧವಾರ ಭಾರತ್ ಬಂದ್ಗೆ ಕರೆ ನೀಡಿವೆ. ಬಂದ್ ಹಿನ್ನಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದ್ದು, ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ಎಂದಿನಂತೆ ಸಂಚಾರ ನಡೆಸಲಿವೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಿಗೆ ರಜೆ ಇರುವುದಿಲ್ಲ. ಶಾಲೆಗಳು ತೆರೆದಿರಲಿದ್ದು, ಪೊಲೀಸರು ಭದ್ರತೆಯನ್ನು ನೀಡಲಿದ್ದಾರೆ. ಖಾಸಗಿ ಶಾಲೆಗಳು ರಜೆ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ.
Recommended Video
ಜನವರಿ 8ರ ಭಾರತ್ ಬಂದ್; ಯಾರ ಬೆಂಬಲವಿಲ್ಲ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಸರ್ಕಾರಿ ಶಾಲೆಗಳಿಗೆ ರಜೆ ಇರುವುದಿಲ್ಲ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಶಾಲೆಗಳಿಗೆ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ" ಎಂದು ಹೇಳಿದರು.
ಭಾರತ್ ಬಂದ್, ಯಾವ ಸೇವೆ ಲಭ್ಯ? ಯಾವ್ದು ಅಲಭ್ಯ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಂಕ್ಗಳು ಬಂದ್ಗೆ ಬೆಂಬಲ ನೀಡಿವೆ. ಆದ್ದರಿಂದ, ಬ್ಯಾಂಕಿಂಗ್ ಕೆಲಸಗಳಿಗಾಗಿ ಬುಧವಾರ ಜನರು ಮನೆಯಿಂದ ಹೊರ ಬರುವುದು ಬೇಡ.
ಬುಧವಾರ ಭಾರತ್ ಬಂದ್: ನಿಮಗೆ ತಿಳಿದಿರಬೇಕಾದ 5 ಸಂಗತಿಗಳು
ಖಾಸಗಿ ಶಾಲೆಗಳಿಗೆ ರಜೆ ಇಲ್ಲವೇ?
"ಖಾಸಗಿ ಅನುದಾನರಹಿತ ಶಾಲೆಗಳು ಭಾರತ್ ಬಂದ್ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಮಕ್ಕಳು ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ" ಎಂದು ಖಾಸಗಿ ಶಾಲಾ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.
ಬಿಎಂಟಿಸಿ ಬಸ್ ಸಂಚಾರವಿದೆ
"ಭಾರತ್ ಬಂದ್ಗೆ ರಾಜ್ಯದಲ್ಲಿಯೂ ಬೆಂಬಲ ಸೂಚಿಸಲಾಗಿದೆ. ಆದರೆ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಇರುತ್ತದೆ. ಮುಷ್ಕರದ ಭಾಗವಾಗಿ ನಾಲ್ಕು ಸಾರಿಗೆ ನಿಗಮಗಳ ಮುಂದೆ ಧರಣಿ ನಡೆಸಲಾಗುತ್ತದೆ" ಎಂದು ಕೆಎಸ್ಆರ್ಟಿಸಿ ಸ್ಟಾಫ್, ವರ್ಕರ್ಸ್ ಯೂನಿಯನ್ ಅಧ್ಯಕ್ಷ ಎಚ್. ವಿ. ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಕ್ಯಾಬ್ ಸೇವೆ ಲಭ್ಯವಿರುತ್ತದೆ
ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಮುಷ್ಕರಕ್ಕೆ ನೈತಿಕ ಬೆಂಬಲ ನೀಡಲಾಗುತ್ತದೆ. ಆದರೆ, ಕ್ಯಾಬ್, ಪ್ರವಾಸಿ ವಾಹನಗಳ ಸೇವೆ ಎಂದಿನಂತೆ ಮುಂದುವರೆಯಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಆಟೋ ಸೇವೆಯಲ್ಲಿ ವ್ಯತ್ಯಯ
ಬೆಂಗಳೂರು ನಗರದ ಹಲವು ಆಟೋ ರಿಕ್ಷಾ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಆದ್ದರಿಂದ, ನಗರದಲ್ಲಿ ಆಟೋ ರಿಕ್ಷಾಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಆಟೋ ಡ್ರೈವರ್ಗಳ ಸಂಘ ಬಂದ್ ಬೆಂಬಲಿಸಿಲ್ಲ.
ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಬುಧವಾರದ ಭಾರತ್ ಬಂದ್ಗೆ ಹೋಟೆಲ್ ಮಾಲೀಕರ ಬೆಂಬಲವಿಲ್ಲ. ಆದ್ದರಿಂದ, ಹೋಟೆಲ್ ತೆರೆದಿರುತ್ತದೆ. "ಬಂದ್ ಹಿನ್ನಲೆಯಲ್ಲಿ ಹೋಟೆಲ್ ಮುಚ್ಚುವುದಿಲ್ಲ" ಎಂದು ಕರ್ನಾಟಕ ಪ್ರದೇಶ ಹೋಟೆಲ್ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಹೇಳಿದ್ದಾರೆ.