ಭಾರತ್ ಬಂದ್; ಕರ್ನಾಟಕದ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ?
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ದೇಶದ 10 ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಭಾರತ್ ಬಂದ್ಗೆ ಕರೆ ನೀಡಿವೆ. ಕರ್ನಾಟಕದಲ್ಲಿಯೂ ವಿವಿಧ ಸಂಘಟನೆಗಳು ಇಂದು, (ಜನವರಿ 8) ಬೆಂಬಲ ಸೂಚಿಸಿ ಬಂದ್ ಗೆ ಕರೆ ನೀಡಿವೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ವ್ಯಕ್ತಗೊಂಡಿದೆ. ಇನ್ನೂ ಕೆಲವೆಡೆ ನೀರಸ ಪ್ರತಿಕ್ರಿಯೆ ಕಾಣುತ್ತಿದೆ. ಯಾವ ಜಿಲ್ಲೆಗಳಲ್ಲಿ ಬಂದ್ ನಡೆದಿದೆ? ಜಿಲ್ಲೆಗಳಲ್ಲಿ ಭಾರತ್ ಬಂದ್ ಗೆ ಜನ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ? ಇಲ್ಲಿದೆ ಅದರ ಸಂಕ್ಷಿಪ್ತ ನೋಟ...
ಮೈಸೂರಿಗೆ ತಟ್ಟಿಲ್ಲ ಬಂದ್ ಬಿಸಿ
ಮೈಸೂರಿನಲ್ಲಿ ಕಾರ್ಮಿಕ ಸಂಘಟನೆಗಳು ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ದೊರೆತಿದೆ. ಎಂದಿನಂತೆ ಸಾರಿಗೆ ಸಂಚಾರ ಆರಂಭವಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್ ಸಂಚಾರ ಕೂಡ ಸಹಜವಾಗಿದೆ. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯವಹಾರ ಆರಂಭಿಸಿದ್ದಾರೆ. ಮೈಸೂರು, ಮಂಡ್ಯ ನಗರಗಳ ಕೈಗಾರಿಕಾ ಬಡಾವಣೆಗಳಲ್ಲಿ ಮಾತ್ರ ಕೆಲಸ ಸ್ಥಗಿತಗೊಳ್ಳುವ ಸಾದ್ಯತೆ ಇದೆ. ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೈಸೂರಿನಲ್ಲಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಐಎನ್ ಬಿಇಎಫ್, ಐಎನ್ ಬಿಒಸಿ ವತಿಯಿಂದ ನಗರದ ಪುರಭವನದ ಬಳಿ ಪ್ರತಿಭಟನೆ ನಡೆಯಿತು. ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಸಿಐಟಿಯು, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸಂಘಟನೆಗಳಿಂದ ಏಷಿಯನ್ ಪೇಂಟಿಂಗ್ ಹಾಗೂ ಟಿವಿಎಸ್ ಕಾರ್ಖಾನೆ ಮುಂಭಾಗದಲ್ಲಿ ಪ್ರತಿಭಟನೆ ನಡೆದಿದೆ.
ಭಾರತ ಬಂದ್ನಲ್ಲಿ ಪಾಲ್ಗೊಂಡ ಕಾರ್ಮಿಕರಿಗೆ ಅಭಿನಂದನೆ ತಿಳಿಸಿದ ರಾಹುಲ್ ಗಾಂಧಿ
ಮಡಿಕೇರಿಯಲ್ಲಿ ಬಸ್ಸಿಗೆ ಕಲ್ಲುತೂರಾಟ
ಭಾರತ್ ಬಂದ್ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಹೊರವಲಯದ ಚೈನ್ ಗೇಟ್ ಬಳಿ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇಂದು ಬೆಳಿಗ್ಗೆ ಮಡಿಕೇರಿಯಿಂದ ಮೈಸೂರಿಗೆ ಸರ್ಕಾರಿ ಬಸ್ ತೆರಳುತ್ತಿತ್ತು. ಆಗ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ಬಸ್ಸಿನ ಮುಂಭಾಗದ ಗ್ಲಾಸ್ ಗೆ ಸಣ್ಣಪುಟ್ಟ ಹಾನಿಯಾಗಿದೆ. ಬಸ್ಸಿನಲ್ಲಿ ಯಾರೊಬ್ಬ ಪ್ರಯಾಣಿಕರು ಇಲ್ಲದೇ ಇದ್ದುದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮಂಡ್ಯ ಜಿಲ್ಲೆಯ ಪಾಂಡವಪುರ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್ ಇದಾಗಿದ್ದು. ಬಸ್ ಚಾಲಕ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರದುರ್ಗ: ಯಥಾಸ್ಥಿತಿಯಲ್ಲಿ ಸಂಚಾರ ವ್ಯವಸ್ಥೆ
ಭಾರತ್ ಬಂದ್ ಗೆ ಕೋಟೆನಾಡು ಚಿತ್ರದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ, ಖಾಸಗಿ ಬಸ್, ಆಟೋ ಟ್ಯಾಕ್ಸಿ ಸಂಚಾರ ಯಥಾಸ್ಥಿತಿಯಲ್ಲಿದ್ದು, ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿಲ್ಲ. ನಗರದಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬಂದ್ ಗೆ ಎಐಟಿಯುಸಿ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಗಳು, ರೈತಪರ ಸಂಘಟನೆಗಳು ಬೆಂಬಲ ಘೋಷಿಸಿದೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದೆ.
ಚಿಕ್ಕಮಗಳೂರು; ಹತ್ತಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್
ಚಿಕ್ಕಮಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ. ಎಐಟಿಯುಸಿ, ಐಎನ್ ಟಿಯುಸಿ, ಯುಟಿಯುಸಿ, ಎಲ್.ಐ.ಸಿ ಬ್ಯಾಂಕ್ ಸಂಘಟನೆಗಳು, ರೈತ ಸಂಘ ಸೇರಿ ಹತ್ತಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಮೆಸ್ಕಾಂ ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನಾ ಜಾಥಾ ನಡೆದಿದೆ. ಎಂದಿನಂತೆ ಹೋಟೆಲ್, ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ, ಖಾಸಗಿ ಬಸ್ ಸಂಚಾರ ಕೂಡ ಎಂದಿನಂತಿದೆ. ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ನಿನ್ನೆಯೇ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾಹಿತಿ ನೀಡಿದ್ದರು.
ಭಾರತ್ ಬಂದ್; ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆಗಳಿಗೆ ಅವಕಾಶವಿಲ್ಲ!
ಮುಷ್ಕರಕ್ಕೆ ಉತ್ತರ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ
ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿರುವ ಸಾರ್ವತ್ರಿಕ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಎಂದಿನಂತೆ ಬಸ್ ಸಂಚಾರ ಪ್ರಾರಂಭಗೊಂಡಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ- ವ್ಯವಹಾರ ನಡೆಸುತ್ತಿದ್ದಾರೆ. ಆಟೋ, ಟೆಂಪೋಗಳು ಕೂಡ ಸಂಚಾರಿಸುತ್ತಿದ್ದು, ಜನಜೀವನ ಸಹಜ ಸ್ಥಿತಿಯಲ್ಲಿ ಮುಂದುವರಿದಿದೆ. ಇದೇ ಸ್ಥಿತಿ ಜಿಲ್ಲೆಯ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಮುಂದುವರಿದಿದೆ. ಬಂದ್ ಗೆ ಯಾವುದೇ ಅನುಮತಿ ಇಲ್ಲವೆಂದು ಈ ಮೊದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದ್ದರು. ಕರಾವಳಿ ತಾಲೂಕುಗಳಲ್ಲಿ ಶಾಂತ ರೀತಿಯಲ್ಲಿ ಮುಷ್ಕರ ನಡೆಸಲು ಸಂಘಟನೆಗಳು ಅನುಮತಿ ಪಡೆದಿವೆ ಎಂದು ತಿಳಿಸಿದ್ದರು. ನಗರದ ಮಾಲಾದೇವಿ ಮೈದಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಗಳನ್ನು ಹಾಯ್ದು, ಜಿಲ್ಲಾಧಿಕಾರಿ ಕಚೇರಿ ತಲುಪಿದೆ. ಸಿಐಟಿಯು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ಕೃಷ್ಣನಗರಿಯಲ್ಲಿ ಸಹಜ ಸ್ಥಿತಿಯಲ್ಲಿ ಜನಜೀವನ
ವಿವಿಧ ಕಾರ್ಮಿಕ ಸಂಘಟನೆಗಳು ನೀಡಿರುವ ದೇಶವ್ಯಾಪಿ ಬಂದ್ ಗೆ ಉಡುಪಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಮುಷ್ಕರಕ್ಕೆ ಕರೆ ನೀಡಿದ ಹೊರತಾಗಿಯೂ ಖಾಸಗಿ ಬಸ್ ಗಳ ಸೇವೆ ಎಂದಿನಂತೆಯೇ ಇತ್ತು. ನಿನ್ನೆಯೇ ಬಂದ್ ಗೆ ಬೆಂಬಲ ಇಲ್ಲ ಎಂದು ಖಾಸಗಿ ಬಸ್ ಗಳ ಮಾಲೀಕರ ಸಂಘ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಟಿ ಹಾಗೂ ಎಕ್ಸ್ ಪ್ರೆಸ್ ಬಸ್ ಗಳ ಓಡಾಟ ಎಂದಿನಂತೆ ಇತ್ತು. ಶಾಲಾ, ಕಾಲೇಜುಗಳು, ಸರಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ದೇಶವ್ಯಾಪಿ ಮುಷ್ಕರ ಹಿನ್ನಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ನಗರದ ಬೋರ್ಡ್ ಹೈಸ್ಕೂಲ್ ಆವರಣದಿಂದ ಆರಂಭವಾದ ಮೆರವಣಿಗೆ ಅಜ್ಜರಕಾಡು ಹುತಾತ್ಮರ ವೇದಿಕೆ ತನಕ ನಡೆಯಿತು.