ಭಾರತ ಬಂದ್: ರೈತ, ಕನ್ನಡಪರ ಸಂಘಟನೆಗಳ ಮುಖಂಡರು ಪೊಲೀಸರ ವಶಕ್ಕೆ
ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ರೈತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ತಡೆಯಲು ಯತ್ನಿಸಿದ ಕನ್ನಡ ಪರಸಂಘಟನೆಗಳ ಮುಂಖಡರಾದ ಸಾ.ರಾ. ಗೋವಿಂದು, ಶಿವರಾಮೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೌರ್ಯ ವೃತ್ತದ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಹಿತ ಹಲವು ಪ್ರತಿಭಟನೆಕಾರರನ್ನು ಪೊಲೀಸರು ಕರೆದೊಯ್ದಿದ್ದಾರೆ.
ಸಾ.ರಾ. ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ರೈತ ಪ್ರತಿನಿಧಿಗಳು ಮೆಜೆಸ್ಟಿಕ್ ಬಳಿಯ ಭಾಗ್ಯ ವಿನಾಯಕ ದೇವಸ್ಥಾನದ ಬಳಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಬಸ್ ಸಂಚಾರ ತಡೆಯುವಂತಹ ಪ್ರಯತ್ನವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್ಗಳಲ್ಲಿ ಕರೆದೊಯ್ದರು.
"ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ. ಈ ಬಗ್ಗೆ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಸಹ ಎಚ್ಚೆತ್ತುಕೊಳ್ಳುತ್ತಿಲ್ಲ. ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ರೈತ ವಿರೋಧಿಯಾದಂತಹ ಕಾನೂನುಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಅಲ್ಲದೆ, ಗಗನಕ್ಕೆ ಏರಿರುವ ಅಡುಗೆ ಎಣ್ಣೆ, ಪೆಟ್ರೋಲ್-ಡೀಸೆಲ್ ಬೆಲೆಯನ್ನೂ ಸಹ ಕಡಿಮೆ ಮಾಡಬೇಕು" ಎಂದು ಈ ಸಂದರ್ಭದಲ್ಲಿ ಸಾ.ರಾ.ಗೋವಿಂದು ಒತ್ತಾಯಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, "ರೈತರ ಪ್ರತಿಭಟನೆಯನ್ನು ಸರ್ಕಾರಗಳು ಲಘುವಾಗಿ ಪರಿಗಣಿಸಬಾರದು. ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ ನಿಜ. ಆದರೆ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಲೇ ಈ ಪ್ರತಿಭಟನೆ ನಡೆಯುತ್ತಿದೆ. ಇದರು ರೈತರು ಮತ್ತು ಜನಸಾಮಾನ್ಯರಿಗೂ ಸಂಬಂಧಿಸಿದ ಪ್ರತಿಭಟನೆಯಾಗಿದೆ. ಎಲ್ಲರೂ ಬೆಂಬಲಿಸಬೇಕು" ಎಂದು ಮನವಿ ಮಾಡಿದರು.
ಹೋಟೆಲ್ ಮಾಲೀಕರು ನೈತಿಕ ಬೆಂಬಲ ಎಂದು ಹೇಳಿದ್ದಾರೆ. ಇದು ನಾಟಕೀಯವಾಗಿ ಕಾಣುತ್ತಿದೆ. ರೈತರು ಬೆಳೆದ ಬೆಳೆಗಳಿಂದಲೇ ಹೋಟೆಲ್ಗಳು ನಡೆಯುತ್ತವೆ. ಆದರೆ, ರೈತರ ಪ್ರತಿಭಟನೆಗೆ ಬೆಂಬಲಿಸುವುದಿಲ್ಲ. ರೈತ ಕಾರ್ಯಕರ್ತರು ಹೋಟೆಲ್ಗಳಿಗೆ ತೆರಳಿ ತರಕಾರಿ ಮತ್ತು ಹಣ್ಣು ಕೊಟ್ಟು ಅವರಿಗೆ ಪ್ರತಿಭಟನೆಯ ಮಹತ್ವ ತಿಳಿಸಲಾಗುವುದು. ಟ್ಯಾಕ್ಸಿ- ಕ್ಯಾಬ್ ಮಾಲೀಕರು ಸಹ ಪ್ರತಿಭಟನೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪ್ರತಿಭಟನೆಗೆ ಸಿದ್ಧತೆ:
Recommended Video
ನಗರದ ಟೌನ್ಹಾಲ್ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಈಗಾಗಲೇ ರಸ್ತೆ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.