ಡಿಕೆ ಶಿವಕುಮಾರ್ -ಯಡಿಯೂರಪ್ಪಗೆ ಭೂ ಅಕ್ರಮದ ಉರುಳು
ನವದೆಹಲಿ, ಜನವರಿ 10: ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟಿನಿಂದ ಕಹಿ ಸುದ್ದಿ ಸಿಕ್ಕಿದೆ. ಬೆಂಗಳೂರಿನ ಬೆನ್ನಿಗಾನಹಳ್ಳಿ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ ನೋಟಿಸ್ ಜಾರಿಯಾಗಿದೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರಿನನ್ವಯ ನಡೆದಿದ್ದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿತ್ತು. ಆದರೆ, ಡಿಸೆಂಬರ್ 18, 2015ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ, ಸಾತನೂರಿನ ಕಬ್ಬಾಳೆಗೌಡ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠವು ಇಬ್ಬರಿಗೂ ನೋಟಿಸ್ ಜಾರಿ ಮಾಡಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಆಗಸ್ಟ್ 29ರಂದು ನಡೆಸಲಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಶಿವಕುಮಾರ್ ಅವರು ಶ್ರೀನಿವಾಸನ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಬೆನ್ನಿಗಾನಹಳ್ಳಿಯ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮನವಿ ಮಾಡಿದ್ದರು.
ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು
ಈ ಅರ್ಜಿಯನ್ನು ಮಾನ್ಯ ಮಾಡಿದ್ದ ಯಡಿಯೂರಪ್ಪ, 4.20 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು 2010ರ ಮೇ 13ರಂದು ಆದೇಶ ಹೊರಡಿಸಿದ್ದರು. NGEF ವಸತಿ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಈ ಭೂಮಿಯನ್ನು 1986ರಲ್ಲಿ ಗುರುತಿಸಿತ್ತು.
ಕಪಿಲ್ ಸಿಬಲ್ ವಾದಕ್ಕೆ ಸೋಲಲ್ಲ
ಬೆನ್ನಿಗಾನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಡಿಕೆ ಶಿವಕುಮಾರ್ ಅವರಿಗೆ ಇದರಿಂದ ಲಾಭವಾಗಿಲ್ಲ ಎಂಬುದನ್ನು ಸಾಬೀತು ಪಡಿಸುವುದಕ್ಕೆ ಮುನ್ನವೆ ಅವರ ಮೇಲೆ ಆರೋಪಿಸಿರುವ ಕಾಯ್ದೆ ಸೆಕ್ಷನ್ ಗಳು ಸರಿಯಲ್ಲ ಎಂದರು.
ಕರ್ನಾಟಕ ಜಮೀನು ವರ್ಗಾವಣೆ ನಿರ್ಬಂಧ ಕಾಯ್ದೆ- 1991 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಉಲ್ಲಂಘನೆ ಆರೋಪ ಹೊರಿಸಿರುವುದನ್ನು ಪ್ರಶ್ನಿಸಿದರು. ಆದರೆ, ವಿಶೇಷ ತನಿಖಾ ತಂಡದ ಪರ ವಕೀಲ ಜೋಸೆಫ್ ಅರಿಸ್ಟಾಟಲ್ ಅವರು ಇದನ್ನು ಬಲವಾಗಿ ವಿರೋಧಿಸಿ, ತನಿಖೆ, ಚಾರ್ಜ್ ಶೀಟ್ ವಿವರ ಒದಗಿಸಿದ್ದರಿಂದ ನ್ಯಾಯಪೀಠವು, ಕಪಿಲ್ ವಾದವನ್ನು ಪುರಸ್ಕರಿಸಲಿಲ್ಲ.
ಏನಿದು ಭೂ ಅಕ್ರಮ ಪ್ರಕರಣ?
1962ರಲ್ಲಿ ಡಿಕೆ ಶಿವಕುಮಾರ್ ಅವರ ಆಪ್ತ ಬಿ.ಕೆ. ಶ್ರೀನಿವಾಸನ್ ಎಂಬುವವರು ಬೆನ್ನಿಗಾನಹಳ್ಳಿ ಬಳಿ 5.11 ಎಕರೆ ಭೂಮಿಯನ್ನು ಖರೀದಿಸಿದ್ದರು. ಈ ಪೈಕಿ ಸರ್ವೆ ನಂ 50/2ರಲ್ಲಿ 4 ಎಕರೆ 20 ಗುಂಟೆ ಭೂಮಿಯನ್ನು 2003ರಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ 1.62 ಕೋಟಿ ರು ಮೌಲ್ಯಕ್ಕೆ ಖರೀದಿಸಿ ಕೈಗಾರಿಕಾ ಬಳಕೆಗಾಗಿ ಪರಿವರ್ತಿಸಿಕೊಂಡಿದ್ದರು. NGEF ವಸತಿ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಈ ಭೂಮಿಯನ್ನು 1986ರಲ್ಲಿ ಗುರುತಿಸಿದ್ದು, 2004ರಲ್ಲಿ ಆ ಭೂಮಿಯು ಗೃಹ ನಿರ್ಮಾಣ ಉದ್ದೇಶಕ್ಕೆ ಪರಿವರ್ತನೆಯಾಗಿತ್ತು. ನಂತರ ಅದೇ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಅಡಿ ಸ್ವಾಧೀನಕ್ಕೆ ಗುರುತಿಸಲಾಗಿತ್ತು.
ಡಿನೋಟಿಫೈ ಮಾಡಲು ಮನವಿ
ಸದರಿ ಭೂಮಿಯನ್ನು ಡಿನೋಟಿಫೈ ಮಾಡಲು ಮನವಿ, ಶಿವಕುಮಾರ್ ಅವರು ಶ್ರೀನಿವಾಸನ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಬೆನ್ನಿಗಾನಹಳ್ಳಿಯ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಯಡಿಯೂರಪ್ಪ ಮಾನ್ಯ ಮಾಡಿದ್ದರು.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮತ್ತು ಕಬ್ಬಾಳೇಗೌಡ ಅವರು ಈ ಕುರಿತು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು 2012ರಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಯಡಿಯೂರಪ್ಪ ಅವರನ್ನು ಆರೋಪ ಪಟ್ಟಿಯಿಂದ ಕೈ ಬಿಡಲಾಗಿತ್ತು.
ವಿಚಾರಣೆ ಹಂತದಲ್ಲಿ ಡಿನೋಟಿಫೈ ಪ್ರಕರಣ
ನ್ಯಾ. ಆನಂದ ಬೈರಾರೆಡ್ಡಿ ಅವರ ಏಕಸದಸ್ಯ ಪೀಠ, ಲೋಕಾಯುಕ್ತದಲ್ಲಿ ದಾಖಲಾಗಿದ್ದಬೆನ್ನಿಗಾನಹಳ್ಳಿ ಡಿನೋಟಿಫೈ ಪ್ರಕರಣವನ್ನು ರದ್ದುಗೊಳಿಸಿ 2015ರಲ್ಲಿ ಆದೇಶ ಹೊರಡಿಸಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮತ್ತು ಕಬ್ಬಾಳೇಗೌಡ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 29ರಂದು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಕೈಗೆತ್ತಿಕೊಳ್ಳಲಿದೆ.