ಕೊನೆಗೂ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಪುಟ್ಟಣ್ಣ
ಬೆಂಗಳೂರು, ಮಾ. 17: ವಿಧಾನ ಪರಿಷತ್ ಮಾಜಿ ಉಪ ಸಭಾಪತಿ, ಜೆಡಿಎಸ್ ನಾಯಕ ಪುಟ್ಟಣ್ಣ ಕೊನೆಗೂ ಬಿಜೆಪಿ ಸೇರಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಅವರ ಸಮ್ಮುಖದಲ್ಲಿ ಪುಟ್ಟಣ್ಣ ಅವರು ಬಿಜೆಪಿ ಸೇರಿದ್ದಾರೆ.
Recommended Video
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತೊಬ್ಬರು ರಾಜೀನಾಮೆ ಕೊಟ್ಟಂತಾಗಿದೆ. ಕಳೆದ ವಾರ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ನಿರೀಕ್ಷೆಯಂತೆಯೆ ಪುಟ್ಟಣ್ಣ ಅವರು 'ತೆನೆ' ಇಳಿಸಿ 'ಕಮಲ' ಹಿಡಿದಿದ್ದಾರೆ. ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕೂಡ ಶೀಘ್ರದಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಮಾಹಿತಿಯಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿಯಾಗಿ ಕಣಕ್ಕೆ
ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ ಹೈಕಮಾಂಡ್ನಿಂದ ಈಗಾಗಲೇ ಟಿಕೆಟ್ ಕೊಡುವ ಭರವಸೆ ಸಿಕ್ಕಿರುವುದರಿಂದ ಪುಟ್ಟಣ್ಣ ಬಿಜೆಪಿ ಸೇರಿದ್ದಾರೆ ಎಂಬ ಮಾಹಿತಿಯಿದೆ. ಈಗಾಗಲೇ ಚುನಾವಣೆ ತಯಾರಿಯನ್ನು ಪುಟ್ಟಣ್ಣ ಅವರು ಆರಂಭಿಸಿದ್ದು, ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಬಾಕಿಯಿದೆ.
ಬಸವರಾಜ್ ಹೊರಟ್ಟಿ, ಮಧು ಬಂಗಾರಪ್ಪ ಕೂಡ ಅಸಮಾಧಾನ
ಇನ್ನು ಅತಿಹೆಚ್ಚು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ಗೆ ಆಯ್ಕೆಯಾಗಿರುವ, ಜೆಡಿಎಸ್ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸವರಾಜ್ ಹೊರಟ್ಟಿ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿವೆ. ಜೊತೆಗೆ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್ ತೆರದು ಕಾಂಗ್ರೆಸ್ ಸೇರುತ್ತಾರೆ ಎಂಬುದು ಖಚಿತವಾಗಿದೆ. ಇಂತಹ ಸಂದರ್ಭದಲ್ಲಿಯೇ ಪಕ್ಷವನ್ನು ಎಲ್ಲ ವೇದಿಕೆಗಳಲ್ಲಿ ಸಮರ್ಥಿಸಿಕೊಳ್ಳುತ್ತಿದ್ದ ರಮೇಶಬಾಬು ಅವರು ಕೂಡ ಪಕ್ಷ ತೆರೆದಿದ್ದಾರೆ. ಜೊತೆಗೆ ಇದೀಗ ಪುಟ್ಟಣ್ಣ ಅವರು ಬಿಜೆಪಿ ಸೇರಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಿಂದ ರಮೇಶಬಾಬು ಕಣಕ್ಕೆ
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ್ನೊಳಗೊಂದ ಆಗ್ನೇಯ ಪದವೀಧರರ ಕ್ಷೇತ್ರದಿಂದ ರಮೇಶಬಾಬು ಅವರು ಕಣಕ್ಕಿಳಿಯಲಿದ್ದಾರೆ. ಜೂನ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ಬಿಜೆಪಿಯಿಂದ ಆಹ್ವಾನ ಬಂದೆರೆ ಅವರು ಬಿಜೆಪಿ ಸೇರುವುದು ಖಚಿತ. ಹೊರಗಿನಿಂಧ ಬಂದ ಎಲ್ಲರಿಗೂ ಟಿಕೆಟ್ ಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಿಲ್ಲ. ಹೀಗಾಗಿ ರಮೇಶಬಾಬು ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದು ಅನುಮಾನ. ಆದ್ದರಿಂದ ರಮೇಶ್ ಬಾಬು ಪಕ್ಷೇತರ ಅಭ್ಯರ್ಥಿಯಾಗಿಯೆ ಸ್ಪರ್ಧೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.
ಜೂನ್ ತಿಂಗಳಿನಲ್ಲಿ ನಡೆಯಲಿದೆ ಪರಿಷತ್ ಚುನಾವಣೆ
ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಇದೇ ಜೂನ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಜೂನ್ 23 ರಂದು 5 ನಾಮನಿರ್ದೇಶಿತ ಸದಸ್ಯರು ಹಾಗೂ ಜೂನ್ 30 ರಂದು 11 ಇತರ ಸದಸ್ಯರು ಸೇರಿದಂತೆ ಒಟ್ಟು 16 ವಿಧಾನ ಪರಿಷತ್ ಸದಸ್ಯರು ನಿವೃತ್ತಿ ಆಗಲಿದ್ದಾರೆ.
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿರುವ ಸದಸ್ಯರಾದ ಕಾಂಗ್ರೆಸ್ ಪಕ್ಷದ ಎನ್ ಎಸ್ ಬೋಸರಾಜು, ಜಯಮ್ಮ, ಎಚ್ ಎಂ ರೇವಣ್ಣ, ನಸೀರ್ ಅಹ್ಮದ್, ಜೆಡಿಎಸ್ ಪಕ್ಷದ ಟಿ.ಎ. ಶರವಣ, ಮಲ್ಲಿಕಾರ್ಜುನ ಅವರು ಜೂನ್ 30ರಂದು ನಿವೃತ್ತಿ ಆಗಲಿದ್ದಾರೆ. ಪದವೀಧರ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಜೆಡಿಎಸ್ ಪಕ್ಷದ ಆರ್. ಚೌಡರೆಡ್ಡಿ ನತೂಲ್ಲಿ, ಬಿಜೆಪಿಯ ಎಸ್ ಪಿ ಸಂಕನೂರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್ ಪಕ್ಷದ ಪುಟ್ಟಣ್ಣ ಹಾಗೂ ಕಾಂಗ್ರೆಸ್ ಪಕ್ಷದ ಶರಣಪ್ಪ ಮಟ್ಟೂರ್ ನಿವೃತ್ತಿ ಆಗಲಿದ್ದಾರೆ.
ನಾಮನಿರ್ದೇಶಿತ ಸದಸ್ಯರಾದ ಕೆ. ಅಬ್ದುಲ್ ಜಬ್ಬಾರ್, ಡಾ. ಜಯಮಾಲಾ ರಾಮಚಂದ್ರ, ಐವಾನ್ ಡಿಸೋಜ, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರು ಅವರು ಜೂನ್ 23 ರಂದು ನಿವೃತ್ತಿ ಆಗಲಿದ್ದಾರೆ. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತೊರೆಯುವವರು ಹೆಚ್ಚಾದರೂ ಅಚ್ಚರಿಯಿಲ್ಲ.