ರಾಜಧಾನಿ ಬೆಂಗಳೂರು ಇನ್ನು ಎರಡು ದಿನ ಥಂಡಾ ಥಂಢಾ
ಬೆಂಗಳೂರು, ನವೆಂಬರ್, 19: ತಮಿಳುನಾಡಿನಲ್ಲಿ ಸುರಿಯುತ್ತಿದ್ದ ಭಾರೀ ಮಳೆ ತಗ್ಗಿದ್ದು ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲೂ ಸೂರ್ಯ ಕಾಣಿಸಿಕೊಂಡಿದ್ದಾನೆ. ಆದರೆ ಇನ್ನು ಎರಡು ದಿನ ಥಂಡಿ ವಾತಾವರಣ ಮುಂದುವರಿಯಲಿದೆ.
ವಾಯುಭಾರ ಕುಸಿತ ಕಂಡುಬರುತ್ತಿಲ್ಲ, ಕಂಡುಬರುವ ನಿರೀಕ್ಷೆಯೂ ಇಲ್ಲ. ಹಾಗಾಗಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಲ್ಲಿ ಮಳೆ 79 ಜೀವಗಳನ್ನು ಬಲಿಪಡೆದಿದೆ.[ಭಾರಿ ಮಳೆಗೆ ತತ್ತರಿಸಿದ ಆಂಧ್ರದ ದೇಗುಲ ನಗರಿಗಳು]
ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಶೀತ ಗಾಳಿ ಕಡಿಮೆಯಾಗಿಲ್ಲ. ನವೆಂಬರ್ ತಿಂಗಳಿನಲ್ಲಿ ದಾಖಲೆ ಮಳೆ ಸುರಿದಿದ್ದು 17 ದಿನಗಳಲ್ಲೇ 240.9 ಮಿ.ಮೀ ಮಳೆಯಾಗಿದೆ. 1916ರಲ್ಲಿ ನವೆಂಬರ್ ತಿಂಗಳಿ ನಲ್ಲಿ 252.2 ಮಿ.ಮೀ. ಮಳೆ ಸುರಿದಿದ್ದು ಹಿಂದಿನ ದಾಖಲೆ. [ಮಳೆ ಆರ್ಭಟಕ್ಕೆ 15ಕ್ಕೂ ಅಧಿಕ ರೈಲು ಸಂಚಾರ ರದ್ದು]
ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದ್ದು ಥಂಡಿ ವಾತಾವರಣ ಇರಲಿದೆ. ತಮಿಳುನಾಡಿನಲ್ಲಿ ಮಳೆ ಕಡಿಮೆಯಾಗಿದ್ದು ವಾತಾವರಣ ತಿಳಿಯಾಗುತ್ತಿದ್ದರೂ ಬೆಂಗಳೂರಿನಲ್ಲಿ ಸಹಜ ಸ್ಥಿತಿ ಕಾಣಿಸಿಕೊಳ್ಳಲು ಎರಡು ದಿನ ಬೇಕು. ಉಳಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಕೆಲ ಭಾಗಗಳು ಮಳೆ ಪಡೆದುಕೊಳ್ಳಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿತ್ತು. ಬೆಳಗಾವಿಯಲ್ಲಿ ಅತಿ ಕಡಿಮೆ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.