ಡಿಕೆಶಿಗೆ ಸಂಕಷ್ಟ ತಂದ ಅರಮನೆ ಮೈದಾನದ ಜಮೀನು ಖರೀದಿ
ಬೆಂಗಳೂರು, ಸೆಪ್ಟೆಂಬರ್ 10 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಬಂಧನವಾಗಿದೆ. ದೆಹಲಿಯಲ್ಲಿ ಸಿಕ್ಕ 8.59 ಕೋಟಿ ರೂ. ಹಣದ ಜೊತೆ ಬೆಂಗಳೂರಿನ ಅರಮನೆ ಮೈದಾನದ 5 ಎಕರೆ ಜಮೀನು ಖರೀದಿ ಮಾಡಿರುವುದು ಅವರಿಗೆ ಸಂಕಷ್ಟ ತಂದೊಡ್ಡಿದೆ.
ಬೆಂಗಳೂರು ಅರಮನೆ ಆಸ್ತಿಯಲ್ಲಿ ಒಡೆತನ ಹೊಂದಿದ್ದ ವಿಶಾಲಾಕ್ಷೀ ದೇವಿ ಅವರಿಂದ ಡಿ. ಕೆ. ಶಿವಕುಮಾರ್ 5 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಆದರೆ, ಬೇನಾಮಿ ಹೆಸರಿನಲ್ಲಿ ಖರೀದಿ ನಡೆದಿದ್ದು, 1 ಕೋಟಿ ಹಣವನ್ನು ಮಾತ್ರ ಚೆಕ್ನಲ್ಲಿ ನೀಡಲಾಗಿದೆ.
ಡಿಕೆ ಶಿವಕುಮಾರ್ ಕುಟುಂಬಕ್ಕೆ ಧೈರ್ಯ ಹೇಳಿದ ಸ್ವಾಮೀಜಿಗಳು
2017ರಲ್ಲಿ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆ ಅಧಿಕಾರಿಗಳು ಈ ಬೇನಾಮಿ ಆಸ್ತಿ ಖರೀದಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಕರ್ನಾಟಕ ಹೈಕೋರ್ಟ್ಗೂ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಮಾಹಿತಿ ನೀಡಿತ್ತು.
ಮತ್ತೆ ಹೈಕೋರ್ಟ್ ಮೊರೆ ಹೋದ ಮಾಜಿ ಸಚಿವ ಡಿಕೆ ಶಿವಕುಮಾರ್
ಡಿ. ಕೆ. ಶಿವಕುಮಾರ್ ತಮ್ಮ ಸೋದರ ಸಂಬಂಧಿ ಶಶಿಕುಮಾರ್ ಮೂಲಕ ಈ ಭೂಮಿಯನ್ನು ಖರೀದಿ ಮಾಡಿದ್ದಾರೆ. ವಿಶಾಲಾಕ್ಷೀ ದೇವಿ ಅವರಿಗೆ ಹಣ ನೀಡುವ ವ್ಯವಹಾರದಲ್ಲಿ ಸಹ ಶಶಿಕುಮಾರ್ ಭಾಗಿಯಾಗಿದ್ದಾರೆ. ಇಲ್ಲಿ ನೀಡಲಾಗಿರುವ ಹಣದ ಬಗ್ಗೆ ಇಡಿ ಈಗ ತನಿಖೆ ನಡೆಸಬೇಕಾಗಿದೆ.
619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?
ವಿಶಾಲಾಕ್ಷೀ ದೇವಿ ಯಾರು?
ವಿಶಾಲಾಕ್ಷೀ ದೇವಿ ಮೈಸೂರಿನ ರಾಜವಂಶಸ್ಥ ದಿ. ಶ್ರೀಕಂಠದತ್ತ ಒಡೆಯರ್ ಸಹೋದರಿ. ಬೆಂಗಳೂರು ಅರಮನೆ ಮೈದಾನದ ಆಸ್ತಿಯಲ್ಲಿ ಅವರು ಪಾಲು ಹೊಂದಿದ್ದರು. ಅದರಲ್ಲಿ 5 ಎಕರೆಯನ್ನು ಡಿ. ಕೆ. ಶಿವಕುಮಾರ್ಗೆ ಮಾರಾಟ ಮಾಡಿದ್ದಾರೆ. 2018ರಲ್ಲಿ ವಿಶಾಲಾಕ್ಷೀ ದೇವಿ ಅವರು ನಿಧನ ಹೊಂದಿದ್ದಾರೆ.
ಸಾಲಿಟರ್ ಜನರಲ್ ವಾದ
ಡಿ. ಕೆ. ಶಿವಕುಮಾರ್ರನ್ನು ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಹೆಚ್ಚುವರಿ ಸಾಲಿಟರ್ ಜನರಲ್ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಆದ್ದರಿಂದ, ಜಾಮೀನು ನೀಡಬಾರದು ಎಂದು ವಾದ ಮಂಡನೆ ಮಾಡಿದ್ದರು. 5 ಎಕರೆ ಜಮೀನು ಖರೀದಿ ಮಾಡಿದಾಗ 1 ಕೋಟಿ ಮಾತ್ರ ಚೆಕ್ನಲ್ಲಿ ನೀಡಿ, ಉಳಿದ ಹಣವನ್ನು ಅಕ್ರಮ ಸಾಗಟದ ಮೂಲಕ ನೀಡಲಾಗಿದೆ ಎಂಬ ಆರೋಪವಿದ್ದು ಈ ಬಗ್ಗೆ ತನಿಖೆ ನಡೆಯಲಿದೆ.
ಐಟಿ ದಾಳಿಯ ವೇಳೆ ಪತ್ತೆ
ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಾಗ ಶಶಿಕುಮಾರ್ ನಿವಾಸದ ಮೇಲೆಯೂ ದಾಳಿ ನಡೆದಿತ್ತು. ಆಗ 5 ಎಕರೆ ಜಮೀನು ಪತ್ರ ಸಿಕ್ಕಿತ್ತು, ಐಟಿ ಇಲಾಖೆ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದಿತ್ತು. ಡಿ. ಕೆ. ಶಿವಕುಮಾರ್ ಶಶಿಕುಮಾರ್ ಮೂಲಕ ಬೇನಾಮಿಯಾಗಿ ಜಮೀನು ಖರೀದಿ ಮಾಡಿದ್ದಾರೆ ಎಂಬುದು ಇಡಿ ತನಿಖೆಗೆ ಸಹಾಯಕವಾಗುವ ಅಂಶವಾಗಿದೆ.
ಹಣ ಬಂದಿದ್ದು ಎಲ್ಲಿಂದ
ಶಶಿಕುಮಾರ್ ಜಮೀನು ಖರೀದಿ ಮಾಡಲು ಹಣ ಬಂದಿದ್ದು ಎಲ್ಲಿಂದ ಎಂದು ಮೂಲ ತಿಳಿಸಲು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಐಟಿ ಡಿ. ಕೆ. ಶಿವಕುಮಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇಡಿ ಇದರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಶಿವಕುಮಾರ್ ವಿಚಾರಣೆಯನ್ನು ನಡೆಸಲಿದೆ. ಸೆ.13ರ ತನಕ ಡಿ. ಕೆ. ಶಿವಕುಮಾರ್ ಇಡಿ ವಶದಲ್ಲಿಯೇ ಇರಲಿದ್ದಾರೆ.