ರಾಘವೇಶ್ವರ ಶ್ರೀಗಳ ದೋಷಮುಕ್ತ ತೀರ್ಪು: ಅನೈತಿಕ ಸಂಬಂಧದ ಉಲ್ಲೇಖವಿಲ್ಲ
ರಾಮಚಂದ್ರಾಪುರ ಮಠದ ವಿರುದ್ದ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲು ಕೋರಿದ್ದ ಅರ್ಜಿ ವಜಾಗೊಂಡಿದ್ದು, ರಾಘವೇಶ್ವರ ಶ್ರೀಗಳನ್ನು ದೋಷಮುಕ್ತಗೊಳಿಸಿದ ತೀರ್ಪಿನಲ್ಲಿ, ಯಾವುದೇ ಅನೈತಿಕ ಸಂಬಂಧವಿತ್ತೆಂದು ಹೇಳುವ ವಿಚಾರಗಳಿಲ್ಲ.
ಬೆಂಗಳೂರು, ಅ 18: ರಾಮಚಂದ್ರಾಪುರ ಮಠದ ವಿರುದ್ದ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲು ಕೋರಿದ್ದ ಅರ್ಜಿ ವಜಾಗೊಂಡಿದ್ದು, ರಾಘವೇಶ್ವರ ಶ್ರೀಗಳನ್ನು ದೋಷಮುಕ್ತಗೊಳಿಸಿದ ತೀರ್ಪಿನಲ್ಲಿ, ಯಾವುದೇ ಅನೈತಿಕ ಸಂಬಂಧವಿತ್ತೆಂದು ಹೇಳುವ ವಿಚಾರಗಳಿಲ್ಲ.
ರಾಮಚಂದ್ರಾಪುರ ಮಠದ ವಿರುದ್ಧವಾಗಿ, ಶ್ರೀಗಳನ್ನು ಪೀಠದಿಂದ ಇಳಿಸಿ, ಆಡಳಿತಾಧಿಕಾರಿ ನೇಮಿಸುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲು ಸೆಕ್ಷನ್ 92 ಸಿಪಿಸಿ ಅಡಿಯಲ್ಲಿ ದಾಖಲಾಗಿದ್ದ ಅರ್ಜಿಯನ್ನು ಬೆಂಗಳೂರು ನಗರ ಒಂದನೇ ಸಿವಿಲ್ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ. (ಗೌರಿ ಲಂಕೇಶ್ ಹತ್ಯೆ: ರಾಮಚಂದ್ರಾಪುರ ಮಠದ ಸ್ಪಷ್ಟನೆ)
ರಾಘವೇಶ್ವರ ಶ್ರೀಗಳ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಯಾವುದೇ ರೀತಿಯ ಪುರಾವೆ ಇರುವುದಿಲ್ಲ. ಹಾಗೆಯೇ ಅತ್ಯಾಚಾರದ ಮಿಥ್ಯಾರೋಪ ಪ್ರಕರಣದಲ್ಲಿ, ಶ್ರೀಗಳನ್ನು ದೋಷಮುಕ್ತ ಮಾಡಿದ ನ್ಯಾಯಾಲಯದ ಆದೇಶದಲ್ಲಿ ಯಾವುದೇ ರೀತಿಯ ಅನೈತಿಕ ಸಂಬಂಧವಿತ್ತೆಂದು ಹೇಳುವ ವಿಚಾರಗಳಿಲ್ಲ.
ಈ ಕಾರಣಗಳಿಂದ ಸೆಕ್ಷನ್ 92 ರಲ್ಲಿ ಕೇಳಿದ ಅವಕಾಶ ಕೊಡಲಾಗದೆಂದು ಹೇಳಿ ಶ್ರೀಮಠದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲು ಅವಕಾಶ ನೀಡುವಂತೆ ಪ್ರಶಾಂತ್ ಕುಮಾರ್ ಮತ್ತು ಲೊಕೇಶ್ ಎಂಬುವರು ಬೆಂಗಳೂರು ನಗರ ಒಂದನೇ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದರು.
ರಾಮಚಂದ್ರಾಪುರ ಮಠದ ಶ್ರೀಗಳನ್ನು ಪೀಠದಿಂದ ಇಳಿಸುವಂತೆ ಹಾಗೂ ಆಡಳಿತಾಧಿಕಾರಿ ನೇಮಿಸುವಂತೆ ಕೇಳಲಾಗಿದ್ದ ಆ ಅರ್ಜಿಯಲ್ಲಿ, ಅತ್ಯಾಚಾರ ಆರೋಪದಿಂದ ಶ್ರೀಗಳನ್ನು ದೋಷಮುಕ್ತಗೊಳಿಸಿದ ಆದೇಶದಲ್ಲಿ, ಶ್ರೀಗಳಿಗೆ ಒಪ್ಪಿಗೆ ಸಂಬಂಧವಿತ್ತು ಎಂದು ಹೇಳಲಾಗಿದೆ. ಹಾಗಾಗಿ ಅವರು ಪೀಠದಲ್ಲಿ ಮುಂದುವರಿಯಲು ಅನರ್ಹ. ಇನ್ನೂ ಹಲವು ಪ್ರಕರಣಗಳಲ್ಲಿ ಶ್ರೀಗಳು ಆರೋಪಿಯಾಗಿದ್ದಾರೆ. ಸನ್ಯಾಸಿಯಾಗಿರಲು ಅರ್ಹತೆಯಿಲ್ಲ ಎಂಬ ವಾದವನ್ನು ಮಾಡಲಾಗಿತ್ತು.
ವಿಚಾರಣೆಯ ನಂತರ, ಶ್ರೀಗಳ ಮೇಲೆ ಮಾಡಲಾಗಿರುವ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಹಾಗೂ ಅತ್ಯಾಚಾರ ಆರೋಪದಿಂದ ದೋಷಮುಕ್ತಗೊಳಿಸಿದ ಆದೇಶದಲ್ಲಿ ಯಾವುದೇ ರೀತಿಯ ಅನೈತಿಕ ಸಂಬಂಧವಿತ್ತೆಂದು ಹೇಳುವ ವಿಚಾರಗಳಿಲ್ಲ ಎಂದು ಆಭಿಪ್ರಾಯಪಟ್ಟ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
ರಾಘವೇಶ್ವರ ಶ್ರೀಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಹಾಗೂ ಸುಳ್ಳು ಅತ್ಯಾಚಾರ ಪ್ರಕರಣದಿಂದ ಶ್ರೀಗಳನ್ನು ದೋಷಮುಕ್ತಗೊಳಿಸಿದ ತೀರ್ಪನ್ನೇ ತಿರುಚಿ, ಶ್ರೀಗಳ ಘನತೆಗೆ ಧಕ್ಕೆತರುವ ಪ್ರಯತ್ನಗಳಿಗೆ, ನ್ಯಾಯಾಲಯದ ಈ ಆದೇಶ ಸ್ವಷ್ಟ ಉತ್ತರವನ್ನು ನೀಡಿದ್ದು, ನಿಷ್ಕಂಳಕಯುತವಾದ ಶ್ರೀಗಳ ಚಾರಿತ್ರ್ಯವನ್ನು ಈ ಆದೇಶ ಸ್ಥಿರೀಕರಿಸಿದೆ ಎಂದು ಮಠದ ಪ್ರಕಟಣೆಯಲ್ಲಿ ಹೇಳಲಾಗಿದೆ.