ಕಸಾಪ ವಿಶೇಷ ಸಭೆ ನಿರ್ಣಯಗಳಿಗೆ ಬ್ರೇಕ್ ಹಾಕಿದ ಕೋರ್ಟ್!
ಬೆಂಗಳೂರು, ಮೇ 1: ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಮೇ 1ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸರ್ವ ಸದಸ್ಯರ ಸಭೆ ಮತ್ತು ಮಹಾಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಣಯಗಳಿಗೆ ನಗರದ ನ್ಯಾಯಾಲಯ ಬ್ರೇಕ್ ಹಾಕಿದೆ.
ಸಿಟಿ ಸಿವಿಲ್ ಕೋರ್ಟ್ನ 17ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ಮಹಾಸಭೆ ಕೈಗೊಳ್ಳುವ ಯಾವುದೇ ನಿರ್ಣಯಗಳು ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾಖಲಾಗಿರುವ ಮೂಲ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಶನಿವಾರ ಆದೇಶ ನೀಡಿದೆ.
ಕನ್ನಡವೇ ಜಾತಿ, ಧರ್ಮ, ದೇವರು, ಒನ್ಇಂಡಿಯಾ ಸಂದರ್ಶನದಲ್ಲಿ ನಾಡೋಜ ಜೋಶಿ ಹೀಗಂದ್ರು
ಕಾಮಾಕ್ಷಿಪಾಳ್ಯದ ಎನ್.ಹನುಮೇಗೌಡ ಸಲ್ಲಿಸಿದ್ದ ಮಧ್ಯಂತರ ಅರ್ಜಿ ತುರ್ತು ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶೆ ಶೈಲಾ ಅವರು ಈ ಆದೇಶ ನೀಡಿದ್ದಾರೆ. ಇದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರಿಗೆ ಹಿನ್ನೆಡೆಯಾಗಲಿದೆ.
ಅರ್ಜಿದಾರರು, ಕಸಾಪ 2022ರ ಮಾರ್ಚ್ 25ರಂದು ಕಾಗಿನೆಲೆಯ ಶ್ರೀ ಕನಕ ಕಲಾಭವನದಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ನಡೆಸಲು ಹೊರಡಿಸಿರುವ ನೋಟಿಸ್ ತಡೆಹಿಡಿಯಬೇಕೆಂದು ಕೋರಿದ್ದಾರೆ.
ನಿಬಂಧನೆಗಳಿಗೆ ವಿರುದ್ಧ: ಅರ್ಜಿದಾರರ ಪರ ವಕೀಲರು, ಕಸಾಪ ಅಧ್ಯಕ್ಷರು ಪರಿಷತ್ತಿನ ನಿಬಂಧನೆಗಳಿಗೆ ವಿರುದ್ಧವಾಗಿ ಸರ್ವಸದಸ್ಯರ ವಿಶೇಷ ಸಭೆಯನ್ನು ಕರೆದಿರುವುದು ಸಾಹಿತ್ಯ ಪರಿಷತ್ತಿನ ನಿಬಂಧನೆಗಳ ನಿಯಮ 33 (ಅ) ಮತ್ತು (ಇ)ಗಳಿಗೆ ವಿರುದ್ಧವಾಗಿದೆ. ಸರ್ವಸದಸ್ಯರ ಸಭೆ ಕರೆದ ದಿನದಂದೇ ಮತ್ತೊಂದು ಸರ್ವಸದಸ್ಯರ ವಿಶೇಷ ಸಭೆ ನಡೆಸುವುದು ಕಾನೂನು ಬಾಹಿರ ಎಂದರು.
Recommended Video
ಕಸಾಪ ಅಧ್ಯಕ್ಷರು ತಮ್ಮ ಸ್ವಹಿತಾಸಕ್ತಿಯಿಂದ ಪರಿಷತ್ತಿನ ನಿಬಂಧನೆಗಳಿಗೆ ವಿರುದ್ಧವಾಗಿ ವಿಶೇಷ ಸಭೆ ಕರೆದಿದ್ದಾರೆ. ಅದಕ್ಕೆ ಕಾರ್ಯಕಾರಿ ಸಮಿತಿಯ ಅನುಮೋದನೆಯಿಲ್ಲ. ವಿಶೇಷ ಸಭೆಯ ಕಾರ್ಯಸೂಚಿಯನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಲು ಅವಕಾಶವಿದ್ದಾಗಲೂ ವಿನಾಕಾರಣ ವಿಶೇಷ ಸಭೆ ನಡೆಸುವುದು ಆರ್ಥಿಕ ನಷ್ಟದ ಜೊತೆಗೆ ನಿಯಮಬಾಹಿರ. ಹಾಗಾಗಿ, ಸಭೆ ನಡೆಸಲು ಹೊರಡಿರುವ ನೋಟಿಸ್ ಗೆ ತಡೆ ನೀಡಬೇಕೆಂದು ಕೋರಿದರು.