ಕೊರೊನಾ ರುದ್ರ ನರ್ತನ: ಬೆಂಗಳೂರಿನ ಚಿಕ್ಕಪೇಟೆ, ಕನಕಪುರ ಟೌನ್ ಲಾಕ್ ಡೌನ್
ಬೆಂಗಳೂರು, ಕನಕಪುರ, ಜೂನ್ 21: ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಿಕ್ಕಪೇಟೆ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಯ ಕನಕಪುರ ಟೌನ್ ಅನ್ನು ಸ್ವಯಂಪ್ರೇರಿತವಾಗಿ ಒಂದು ವಾರ/ 9 ದಿನ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.
Recommended Video
ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಇದು ಸರಕಾರದ ನಿರ್ಧಾರವಲ್ಲ. ಆದರೆ, ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ವಿವಿಧ ಅಸೋಸಿಯೇಷನ್ ಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿವೆ.
ಕೊರೊನಾವೈರಸ್ ಅಟ್ಟಹಾಸಕ್ಕೆ ಕರುನಾಡು ಕಕ್ಕಾಬಿಕ್ಕಿ; ಇಲ್ಲಿದೆ ಮಾಹಿತಿ
ಬೆಂಗಳೂರಿನ ಚಿಕ್ಕಪೇಟೆ ಸೋಮವಾರದಿಂದ (ಜೂನ್ 22) ಭಾನುವಾರದ (ಜೂನ್ 28) ವರೆಗೆ, ವ್ಯಾಪಾರಿಗಳೇ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಿಶ್ಚಯಿಸಿದ್ದಾರೆ. ಚಿಕ್ಕಪೇಟೆ ಭಾಗದಲ್ಲಿ 25 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಇನ್ನು ಕನಕಪುರ ಟೌನ್ ಅನ್ನು ನಾಳೆಯಿಂದ, ಒಂಬತ್ತು ದಿನಗಳ ಕಾಲ (ಜೂನ್ 30ರವರೆಗೆ) ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಸ್ಥಳೀಯ ಶಾಸಕ ಮತ್ತು ಕೆಪಿಸಿಸಿ ನಿಯೋಜಿತ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
"ತುರ್ತು ಸೇವೆ ಈ ಭಾಗದಲ್ಲಿ ಎಂದಿನಂತೆ ಮುಂದುವರಿಯಲಿದೆ. ತರಕಾರಿ, ದಿನಸಿ ವಸ್ತುಗಳನ್ನು ಮಾರಲು ಕನಕಪುರದಲ್ಲಿ ಬೆಳಗ್ಗೆ ಏಳರಿಂದ ಹನ್ನೊಂದರವರೆಗೆ ಸಮಯ ನಿಗದಿ ಮಾಡಲಾಗಿದೆ. ಮದ್ಯ ಮಾರಾಟಕ್ಕೂ ಸಮಯ ನಿಗದಿ ಮಾಡಲಾಗಿದೆ".
"ಇದು ಇಲ್ಲಿನ ಸಾರ್ವಜನಿಕರು, ವ್ಯಾಪಾರಸ್ಥರ ಜೊತೆ ಚರ್ಚಿಸಿ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಇದು ಸರಕಾರದ ಕ್ರಮವಲ್ಲ"ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಚಿಕ್ಕಪೇಟೆ ಲಾಕ್ ಡೌನ್ ಮಾಡಲು ಸಿಲ್ವರ್ ಅಂಡ್ ಗೋಲ್ಡ್ ತಯಾರಕರು, ಎಲೆಕ್ಟ್ರಿಕ್ ಮರ್ಚೆಂಟ್ ಅಸೋಸಿಯೇಷನ್, ಜ್ಯೂವೆಲ್ಲರಿ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಅಸೋಸಿಯೇಷನ್, ಸ್ವಿಚ್ ಗೇರ್ ಅಸೋಸಿಯೇಷನ್ ಸೇರಿದಂತೆ ಹಲವು ಅಸೋಸಿಯೇಷನ್ ಗಳು ಬೆಂಬಲ ನೀಡಿವೆ.