ಸಿದ್ದರಾಮಯ್ಯ ಸೇರಿ 5 ಜನರ ವಿರುದ್ಧ ಅನುಪಮಾ ಶೆಣೈ ದೂರು!
ಬೆಂಗಳೂರು, ಅ. 06 : ವರ್ಗಾವಣೆ ವಿಚಾರದಲ್ಲಿ ನನಗೆ ಅನ್ಯಾಯವಾಗಿದೆ ಎಂದು ಕೂಡ್ಲಿಗಿಯ ಹಿಂದಿನ ಡಿವೈಎಸ್ ಪಿ ಅನುಪಮಾ ಶೆಣೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರರ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಮಂಗಳವಾರ(ಅ.4) ಅನುಪಮಾ ಶೆಣೈ ಅವರು ದೂರು ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಜಿಪಿ ಓಂಪ್ರಕಾಶ್, ಬಳ್ಳಾರಿ ಸಂಸದ ಶ್ರೀರಾಮುಲು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪರಮೇಶ್ವರ ನಾಯಕ್, ಎಸ್ಪಿ ಚೇತನ್ ಹಾಗೂ ಇನ್ನಿಬ್ಬರು ಅಧಿಕಾರಿಗಳು ತನಗೆ ವರ್ಗಾವಣೆ ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅನುಪಮಾ ಶೆಣೈ ಅವರು ನೀಡಿರುವ ದೂರನ್ನು ಪಡೆದಿರುವ ಹಲಸೂರು ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಡಿವೈಎಸ್ ಪಿಯಾಗಿದ್ದ ಅನುಪಮಾ ಶೆಣೈ ಅವರನ್ನು 2016ರ ಜನವರಿಯಲ್ಲಿ ವಿಜಯಪುರದ ಇಂಡಿಯ ಡಿವೈಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರ ಫೋನ್ ಕರೆ ಸ್ವೀಕರಿಸದ ಕಾರಣ ವರ್ಗಾವಣೆ ಮಾಡಲಾಗಿದೆ ಎಂಬ ವಿವಾದ ಎದ್ದಿತ್ತು. ಸಚಿವ ಪರಮೇಶ್ವರ ನಾಯಕ್ ಅವರ ವಿರುದ್ಧ ಸರಣಿ ಪ್ರತಿಭಟನೆಗಳು ನಡೆದಿದ್ದವು.
ಹಲವು ಒತ್ತಡಕ್ಕೆ ಮಣಿದಿದ್ದ ಸರ್ಕಾರ ಕೂಡ್ಲಗಿಯಲ್ಲಿ ಪುನಃ ಅನುಪಮಾ ಅವರು ಕಾರ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು.